ಉಡುಪಿ: ಪಡಿತರ ವಿತರಣೆಗೆ ನಿರಂತರ ವ್ಯವಸ್ಥೆ
Team Udayavani, Apr 12, 2020, 12:06 PM IST
ಉಡುಪಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಬರುತ್ತಿಲ್ಲ. ಕುಟುಂಬಗಳಿಗೆ ಆಹಾರ ವಸ್ತುಗಳ ವಿತರಣೆಗೆ ಸರಕಾರ ಕ್ರಮ ಕೈಗೊಂಡಿದೆ.ಜಿಲ್ಲೆಯಲ್ಲಿ ಅಕ್ಕಿ, ಗೋಧಿ ಸಾಮಗ್ರಿ ವಿತರಣೆ ನ್ಯಾಯಬೆಲೆ ಅಂಗಡಿಗಳ ಮೂಲಕ ನಡೆಯುತ್ತಿದೆ. ದಾಸ್ತಾನು ಕೊಠಡಿಗಳಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಿ ಪೂರೈಸಲಾಗುತ್ತಿದೆ.
ಪೆರಂಪಳ್ಳಿ ಆಹಾರ ನಿಗಮದ ಆಹಾರ ಸಂಗ್ರಹಣ ಘಟಕದಲ್ಲಿ ಜಿಲ್ಲೆಯ ವಿವಿಧೆಡೆ ಆಹಾರ ಪೂರೈಸಲು ಅಕ್ಕಿ ಮತ್ತು ಗೋಧಿಯನ್ನು ದಾಸ್ತಾನಿರಿಸಲಾಗಿದೆ. ಅಲ್ಲಿಂದ ತಾಲೂಕು ಟಿಎಪಿಎಂಸಿ, ನ್ಯಾಯಬೆಲೆ ಅಂಗಡಿಗಳಿಗೆ, ದಾಸ್ತಾನು ಕೇಂದ್ರಗಳಿಗೆ ಲಾರಿಗಳ ಮೂಲಕ ಪೂರೈಸಲಾಗುತ್ತಿದೆ. ಭಾರತ ಆಹಾರ ನಿಗಮದ ಪೆರಂಪಳ್ಳಿ ಆಹಾರ ಸಂಗ್ರಹಣ ಘಟಕವೀಗ ಚಟುವಟಿಕೆಯ ಕೇಂದ್ರವಾಗಿದೆ. ಘಟಕದ ಮುಂದೆ ಅಕ್ಕಿ ಸಾಮಾನು ಹೊತ್ತ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಲಾರಿಗಳಿಂದ ಅಕ್ಕಿಯ ಮೂಟೆಗಳನ್ನು ಇಳಿಸುವ ಮತ್ತು ಲೋಡ್ ಮಾಡುವ ಕೆಲಸ ನಡೆಯುತ್ತಿದೆ. ತಾಲೂಕಿನ ದಾಸ್ತಾನು ಕೇಂದ್ರಗಳಿಗೆ ತಲುಪಿದ ಬಳಿಕ ಅಲ್ಲಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ ಪೂರೈಕೆ ಮಾಡಲಾಗುತ್ತಿದೆ. ಆಹಾರ ಪೂರೈಕೆಗೆ ಸಂಬಂಧಿಸಿದ ಇಲಾಖೆಗಳು ಸಾರ್ವಜನಿಕರಿಗೆ ಆಹಾರ ಕೊರತೆಯಾಗದಂತೆ ಎಚ್ಚರಿಕೆ ವಹಿಸಿವೆ.