ರಾತ್ರಿಯೂ ಮುಂದುವರಿಯಲಿದೆ ಡಿಸಿ ಗ್ರಾಮವಾಸ್ತವ್ಯ
Team Udayavani, Feb 16, 2021, 11:06 PM IST
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಪೈಲಟ್ ಯೋಜನೆಯಾಗಿ ಆರಂಭಗೊಂಡ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಈ ತಿಂಗಳ ಮೂರನೇ ಶನಿವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಹಗಲಷ್ಟೇ ಅಲ್ಲ ರಾತ್ರಿಯೂ ವಾಸ್ತವ್ಯ ಹೂಡಲಿದೆ.
ಪೈಲಟ್ ಯೋಜನೆ
ಬ್ರಹ್ಮಾವರ ತಾಲೂಕಿನ ನಂಚಾರು, ನಾಲ್ಕೂರು ಗ್ರಾಮದಲ್ಲಿ ಜನವರಿ ತಿಂಗಳಲ್ಲಿ ಉಡುಪಿ ಡಿಸಿ ಜಿ.ಜಗದೀಶ್ ಅವರು ವಿವಿಧ ಅಧಿಕಾರಿಗಳ ತಂಡದೊಂದಿಗೆ ಪೈಲಟ್ ಯೋಜನೆ ಅಂಗವಾಗಿ ಗ್ರಾಮವಾಸ್ತವ್ಯ ಮಾಡಿದ್ದರು. ಇದರ ಸಾಧಕ ಬಾಧಕಗಳನ್ನು ಅವರು ಇದೀಗ ಸರಕಾರಕ್ಕೆ ಮಂಡಿಸಿದ್ದಾರೆ. ಇಲ್ಲಿ ಗ್ರಾಮಸ್ಥರಿಂದ ವಿವಿಧ ಬೇಡಿಕೆಗಳ 160 ಅರ್ಜಿಗಳು ಬಂದಿದ್ದವು. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಹಕ್ಕುಪತ್ರಕ್ಕೆ ಸಂಬಂಧಿಸಿದ ಅರ್ಜಿಗಳು ಮಾತ್ರ ಬಾಕಿ ಆಗಿವೆ. ಡೀಮ್ಡ್ ಫಾರೆಸ್ಟ್ನಲ್ಲಿ ಪ್ರಸ್ತುತ ಹಕ್ಕುಪತ್ರ ನೀಡಲು ಅವಕಾಶ ಇಲ್ಲದ ಕಾರಣ ಅರ್ಜಿಗಳು ಬಾಕಿಯಾಗಿವೆ. ಉಳಿದಂತೆ ಎಲ್ಲ ಅರ್ಜಿಗಳೂ ವಿಲೇವಾರಿಯಾಗಿವೆ.
ತಲೆಮಾರಿನಿಂದ ಬಾಕಿ
ಕುಡುಬಿ ಜನಾಂಗದವರು ಇರುವ ಎರಡು ಕಾಲನಿಗಳಿಗೆ ಡಿಸಿ ಭೇಟಿ ನೀಡಿದ್ದರು. ಅಲ್ಲಿ ಮೂರು ತಲೆಮಾರುಗಳಿಂದ ಆಸ್ತಿ ದಾಖಲೆ ಸರಿಯಿಲ್ಲದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇಂತಹ ಪಹಣಿ, ಪೌತಿ ತಿದ್ದುಪಡಿ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಬೇಡಿಕೆ
ಮಂಗಳವಾರ ಕಂದಾಯ ಸಚಿವ ಆರ್. ಅಶೋಕ್, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ಮಾಡಿದ್ದರು. ಇದರಲ್ಲಿ ಉಡುಪಿ ಡಿಸಿ ಪೈಲಟ್ ಯೋಜನೆಯ ವರದಿ ಸಲ್ಲಿಸಿದ್ದಷ್ಟೇ ಅಲ್ಲದೆ ವಾಚಿಕವಾಗಿಯೂ ಸಾಧಕ ಬಾಧಕಗಳ ಕುರಿತು ವಿವರಿಸಿದ್ದರು. ಇದರಲ್ಲಿ ಜಿಲ್ಲಾಧಿಕಾರಿಗಳ ಫಂಡ್ ನೀಡಲು ಬೇಡಿಕೆ ಇಟ್ಟಿದ್ದಾರೆ. ವಾಸ್ತವ್ಯ ಸಂದರ್ಭ ಶಾಲೆ, ಹಾಸ್ಟೆಲ್ ತುರ್ತು ದುರಸ್ತಿ ಇತ್ಯಾದಿಗಳ ಬೇಡಿಕೆ ಬಂದಾಗ ಮಂಜೂರಾತಿಗೆ ಅನುವಾಗುವಂತೆ ಫಂಡ್ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದಾರೆ. ಕಂದಾಯ ಇಲಾಖೆಯ ಕಡತಗಳಿಗೆ ಸಂಬಂಧಿಸಿದ ಅರ್ಜಿಗಳು, ಹಕ್ಕುಪತ್ರ, ಪಹಣಿ ತಿದ್ದುಪಡಿ ಸೇರಿದಂತೆ ಸ್ಥಳದಲ್ಲಿ ಇತ್ಯರ್ಥಪಡಿಸಬಹುದಾದ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ. ಅಂತಹ ಫಲಾನುಭವಿಗಳಿಗೆ ಪತ್ರ ವಿತರಿಸಲು ಸಂಜೆ ಆ ಪ್ರದೇಶದ ಶಾಸಕರು ಭೇಟಿ ನೀಡಿ ಸಭೆಯೊಂದನ್ನು ಆಯೋಜಿಸುವಂತೆ ಬೇಡಿಕೆ ಇಡಲಾಗಿದೆ. ಇವೆರಡೂ ಬೇಡಿಕೆಗೆ ಕಂದಾಯ ಸಚಿವರು ಸ್ಪಂದಿಸಿದ್ದಾರೆ.
ರಾತ್ರಿ ವಾಸ್ತವ್ಯ
ಪೈಲಟ್ ಯೋಜನೆಯಂತೆ ಹಗಲು ವಾಸ್ತವ್ಯ ಮಾತ್ರ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ರಾತ್ರಿಯೂ ವಾಸ್ತವ್ಯ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಕಂದಾಯ ಸಚಿವ ಆರ್. ಅಶೋಕ್ ಅವರೇ ಬೆಂಗಳೂರು ಗ್ರಾಮಾಂತರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಪಲಿಮಾರಿನಲ್ಲಿ
ಈ ಶನಿವಾರ ಕಾಪು ತಾಲೂಕಿನ ಪಲಿಮಾರು ಗ್ರಾಮದಲ್ಲಿ ಡಿಸಿ ವಾಸ್ತವ್ಯ ಹೂಡಲಿದ್ದಾರೆ. ಕಾಪು ತಹಶೀಲ್ದಾರ್ ಹೊರತಾಗಿ ಉಳಿದಂತೆ ಎಸಿ, ಎಲ್ಲ ತಹಶೀಲ್ದಾರ್ಗಳು ಅವರ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಹೂಡಲಿದ್ದಾರೆ. ಪ್ರದೇಶ ಇನ್ನೂ ನಿಶ್ಚಯವಾಗಿಲ್ಲ.
ಮನೆಮನೆಗೆ ಪಿಂಚಣಿ
ಮನೆ ಮನೆಗೆ ಪಿಂಚಣಿ ಯೋಜನೆಯನ್ನು ಉಡುಪಿ ಜಿಲ್ಲೆಯಲ್ಲಿ ಜಿ. ಜಗದೀಶ್ ನೇತೃತ್ವ ದಲ್ಲಿ ಆರಂಭಿಸಿದ್ದು ಇದರ ಯಶಸ್ಸಿನಿಂದ ರಾಜ್ಯಾದ್ಯಂತ ಇದೇ ಮಾದರಿಯಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಅದೇ ಕಾರಣಕ್ಕಾಗಿ ಡಿಸಿ ಗ್ರಾಮವಾಸ್ತವ್ಯಕ್ಕೂ ಪೈಲಟ್ ಯೋಜನೆಗೆ ಉಡುಪಿಯನ್ನೇ ಆಯ್ಕೆ ಮಾಡಲಾಗಿತ್ತು.
ವಾಸ್ತವ್ಯ
ಈ ಶನಿವಾರ ಪಲಿಮಾರಿನಲ್ಲಿ ಗ್ರಾಮವಾಸ್ತವ್ಯ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆದಿವೆ. ಬ್ರಹ್ಮಾವರ ತಾಲೂಕಿನಲ್ಲಿ ನಡೆದ ಪೈಲಟ್ ಯೋಜನೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಯಾವುದೇ ನ್ಯೂನತೆಗಳು ಕಂಡುಬಂದಿಲ್ಲ, ಹೆಚ್ಚುವರಿ ಸೇರ್ಪಡೆಗೆ ಬೇಡಿಕೆ ಇಡಲಾಗಿದೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ