ನೀಲಿ ನಕ್ಷತ್ರ: ಅಣ್ಣನ ಆದರ್ಶ ನಾನೂ ಮೈಗೂಡಿಸಿಕೊಳ್ಳಬೇಕು
Team Udayavani, Jul 24, 2020, 7:30 AM IST
ಆದರ್ಶ ವ್ಯಕ್ತಿಗಳು ಎನ್ನುವ ವಿಷಯಕ್ಕೆ ಬಂದಾಗ ಸಾಮಾನ್ಯವಾಗಿ ಹಲವು ಸಾಧಕರ ಹೆಸರು ನಮ್ಮೆಲ್ಲರ ಕಣ್ಣ ಮುಂದೆ ಬರುತ್ತದೆ.
ಆದರೆ ನನಗೆ ಒಡಹುಟ್ಟಿದ ಅಣ್ಣನೇ ಆದರ್ಶ. ನನಗಿಂತ ಸ್ವಲ್ಪ ವರ್ಷ ದೊಡ್ಡವನೆಂದು ಬೀಗುತ್ತಾನೆ ಅಂದುಕೊಂಡಿದ್ದೆ.
ಆದರೆ ಆ ರೀತಿಯ ಹಮ್ಮು ಬಿಮ್ಮುಗಳಿಲ್ಲ. ಚಿಕ್ಕಂದಿನಿಂದಲೂ ಅವನನ್ನೇ ಅನುಸರಿಸಿದ್ದೆ. ಆದರೆ ಅವನ ಪರಿಶ್ರಮ, ಗುಣಗಳನ್ನು ನಾನು ಮೈಗೂಡಿಸಿಕೊಂಡಿಲ್ಲ.
ಆದರೂ ಕಾಲ ಅಷ್ಟೇನೂ ಮೀರಿಲ್ಲವೆಂದು ಭಾವಿಸಿ ಈಗ ನಾನೇ ಕೆಲವೊಂದು ವಿಷಯಗಳನ್ನು ಮೈಗೂಡಿಸಿಕೊಳ್ಳಬೇಕೆಂದಿದ್ದೇನೆ. ಆದರ್ಶ ವ್ಯಕ್ತಿಯಾಗಬೇಕೆಂದರೆ ಬರಿಯ ಹೆಸರು ಸಂಪಾದಿಸಿ ದವರು, ಊರಿಗೆ ಒಳ್ಳೆಯ ಕೆಲಸ ಮಾಡಿದವರು, ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದವರು ಅಥವಾ ಕ್ರೀಡಾಪಟುಗಳ್ಳೋ ಅಥವಾ ಸಿನೆಮಾ ತಾರೆಯರೇ ಆಗಬೇಕೆಂದು ಇಲ್ಲ.
ಯಾರ ವ್ಯಕ್ತಿತ್ವ ನಮ್ಮ ಜೀವನಕ್ಕೆ ಸ್ಫೂರ್ತಿದಾಯಕವೋ ಅವರನ್ನೇ ಆದರ್ಶವನ್ನಾಗಿಸಿಕೊಳ್ಳಬಹುದು. ಆ ರೀತಿಯ ವ್ಯಕ್ತಿತ್ವವನ್ನು ನಾನು ಅಣ್ಣನಲ್ಲಿ ಕಂಡಿದ್ದೇನೆ. ನನ್ನ ಅಣ್ಣ ಬಾಲ್ಯದಲ್ಲಿ ಹೇಗಿದ್ದ ಎನ್ನುವುದೂ ನನಗೆ ಒಂದು ಆದರ್ಶವೇ.
ತುಂಬಾ ಸಂಕಷ್ಟದ ಸಮಯ ಎದುರಾದಾಗ ಧೃತಿಗೆಡದೆ ಕುಟುಂಬದ ಹಿರಿಯ ಸದಸ್ಯನಾಗಿ ಮುಂದೆ ನಿಂತು ಜವಾಬ್ದಾರಿ, ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾ ಯಿಸಿ ತಾನು ತಂದೆ ತಾಯಿಗೆ ಒಳ್ಳೆಯ ಮಗ, ತಂಗಿಗೆ ಒಳ್ಳೆಯ ಅಣ್ಣನಾಗಿದ್ದೇನೆ ಎಂಬುದನ್ನು ತೋರಿಸಿಕೊಟ್ಟ. ಇದರಿಂದ ಅವನ ಕೀರ್ತಿ ದೇಶಕ್ಕೆ ಹಬ್ಬಲಿಲ್ಲ. ಆದರೆ ಒಂದು ಮನೆಯನ್ನು ಹಬ್ಬಿದೆ.
ಒಂದು ಕ್ಷಣ ಕಷ್ಟಪಟ್ಟರೆ; ಹಲವು ಕ್ಷಣ ಚೆನ್ನಾಗಿರಬಹುದು ಎಂಬುದನ್ನು ನಾನು ಅವನಿಂದಲೇ ಕಲಿತದ್ದು. ಆದರೆ ಅದನ್ನು ನನ್ನಲ್ಲಿ ಮೈಗೂಡಿಸಿಕೊಳ್ಳಲು ಸಮಯಬೇಕಾಗಿದೆ.ಆದರ್ಶ ವ್ಯಕ್ತಿ ಗಳು ಹಾಗೆ ಅಲ್ಲವೇ. ಅವರು ಸಾಧಿಸುತ್ತಾರೆ. ಆದರೆ ನಮಗೆ ಅವರ ಸಾಧನೆಗಳಲ್ಲಿ ಕೆಲವನ್ನಾದರೂ ಸಾಧಿಸಲು ಸಮಯ ಬೇಕಾಗುವುದು.
ಯಾವ ವಯಸ್ಸಿನಲ್ಲಿ ಯಾವ ರೀತಿ ಇದ್ದು, ಮನೆಗಾಗಿ ಯಾವ ಕರ್ತವ್ಯ ನಿರ್ವಹಿಸಬೇಕು ಎನ್ನುವುದು ಗೊತ್ತಿರುವ ಅಣ್ಣನನ್ನೇ ಆದರ್ಶವಾಗಿ ಇರಿಸಿ ಕೊಂಡಿದ್ದೇನೆ.
ಶಾಂಭವಿ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು