ನಾವುಂದ ಕುದ್ರು: ದೋಣಿಯಲ್ಲಿ ತೆರಳಿ ಲಸಿಕೆ
Team Udayavani, Sep 30, 2021, 6:30 AM IST
ಕುಂದಾಪುರ: ದೇಶದ ಪ್ರತಿಯೊ ಬ್ಬರಿಗೂ ಲಸಿಕೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕೋವಿಡ್ ವಾರಿಯರ್ ನಿರಂತರವಾಗಿ ಶ್ರಮಿಸುತ್ತಿದ್ದು, ಅದಕ್ಕೊಂದು ನಿದರ್ಶನ ಎಂಬಂತೆ ಬುಧವಾರ ನಾವುಂದ ಗ್ರಾಮದ ಲ್ಲಿರುವ ಕುದ್ರುವಿಗೆ ದೋಣಿ ಮೂಲಕ ನದಿ ದಾಟಿ ಲಸಿಕೆ ಹಾಕುವ ಕಾರ್ಯವನ್ನು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರು ಮಾಡಿದ್ದಾರೆ.
ಸೌಪರ್ಣಿಕಾ ನದಿಯಾಚೆ ಇರುವ ನಾವುಂದ ಕುದ್ರುವಿನಲ್ಲಿ 7 ಕುಟುಂಬಗಳು ನೆಲೆಸಿದ್ದು, 35ಕ್ಕೂ ಹೆಚ್ಚು ಮಂದಿಯಿದ್ದಾರೆ. ಈ ಪೈಕಿ ಬಹುತೇಕರಿಗೆ ಪ್ರಥಮ ಹಾಗೂ ದ್ವಿತೀಯ ಡೋಸ್ ಲಸಿಕೆಯಾಗಿದೆ. ಆದರೆ 3-4 ಮಂದಿ ವೃದ್ಧರು, ನಡೆದುಕೊಂಡು ಬರಲಾಗದ ಅಶಕ್ತರಿದ್ದು ದೋಣಿ ಮೂಲಕ ಬರಲು ಸಾಧ್ಯವಿರಲಿಲ್ಲ. ಆದ್ದರಿಂದ ಅವರಿದ್ದಲ್ಲಿಗೇ ತೆರಳಿದ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರಾದ ರಾಜೇಶ್ವರಿ, ಮಿತ್ರಾ ಹಾಗೂ ಆಶಾ ಕಾರ್ಯಕರ್ತೆಯರಾದ ದೇವಕಿ, ಸಾಕು ಅವರು ರಮೇಶ ಕಾರಂತ ಅವರ ದೋಣಿಯಲ್ಲಿ ತೆರಳಿ ಲಸಿಕೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬುಧವಾರ ನಾವುಂದ ಗ್ರಾ.ಪಂ. ವ್ಯಾಪ್ತಿಯಲ್ಲಿ 21 ಮಂದಿಯ ಮನೆಗೆ ತೆರಳಿದ ಕೊರೊನಾ ವಾರಿಯರ್ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ| ರಂಗನಾಥ್, ಸಿಬಂದಿ, ಸ್ಥಳೀಯ ಗ್ರಾ.ಪಂ. ಸದಸ್ಯರು ಸಹಕಾರ ನೀಡಿದ್ದಾರೆ.