ಸಮಾಜದಲ್ಲಿಯ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಶ್ರಮಿಸಿದವರು ವೇಮನ್ : ವೆಂಕಟೇಶ ನಿಂಗಸಾನಿ
Team Udayavani, Jan 19, 2022, 5:23 PM IST
ರಬಕವಿ-ಬನಹಟ್ಟಿ: ವೇಮನರ ನೀತಿಬೋಧಕ ವಿಚಾರಗಳು ಅಂಧಕಾರದ ಕಗ್ಗತ್ತಿನಲ್ಲಿ ಮುಳಗಿರುವ ಅಜ್ಞಾನಿಗಳಿಗೆ ಜ್ಞಾನ ಜ್ಯೋತಿಯಾಗಿ, ದಿಕ್ಕು ತೋರದವರಿಗೆ ದಿಕ್ಕು ತೋರುವ ದಿಕ್ಸೂಚಿಗಳಾಗಿವೆ ಎಂದು ಸ್ಥಳೀಯ ಮುಖಂಡರು ಮತ್ತು ವಕೀಲ ವೆಂಕಟೇಶ ನಿಂಗಸಾನಿ ತಿಳಿಸಿದರು.
ಅವರು ಬುಧವಾರ ಸ್ಥಳೀಯ ರಬಕವಿ-ಬನಹಟ್ಟಿ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ವೇಮನ್ರ ಜಯಂತ್ಯುತ್ಸವ ಸಂದರ್ಭದಲ್ಲಿ ಮಾತನಾಡಿದರು. ಮಹಾಯೋಗಿ ವೇಮನರು ಸರ್ವರಲ್ಲಿ ಸಮತ್ವ ಭಾವ ಸೃಷ್ಟಿಸಿ, ಸಂತೃಪ್ತ ಸಮಾಜ ನಿರ್ಮಾಣ ಮಾಡಿದರು. ವೇಮನ ಅವರು ಆಧ್ಯಾತ್ಮ, ಆರೋಗ್ಯ, ದೇವ, ನೀತಿಶಾಸ್ತ್ರ, ಆರ್ಯುರ್ವೇದ ಹಾಗೂ ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ವಚನಗಳನ್ನು ರಚಿಸುವ ಮೂಲಕ ನಾಡಿಗೆ ಪ್ರಸಿದ್ಧಿಯನ್ನು ಪಡೆದವರಾಗಿದ್ದರು. ಕನ್ನಡದ ಸರ್ವಜ್ಞ ಮತ್ತು ತೆಲಗಿನ ವೇಮನ್ರಲ್ಲಿ ಅನೇಕ ಸಾಮ್ಯಗಳಿದ್ದವು. ಸರ್ವಜ್ಞರನ್ನು ಕೇಳದ ಕನ್ನಡಿಗರು ಇಲ್ಲ ಅದೇ ರೀತಿಯಾಗಿ ವೇಮನ್ರ ಹೆಸರು ಕೇಳದ ತೆಲಗು ಜನಾಂಗವಿಲ್ಲ. ವೇಮನ್ರು ನುಡಿಗಿಂತ ಹೆಚ್ಚು ನಡೆಗೆ ಮಹತ್ವ ನೀಡಿದ್ದರು ಎಂದು ನಿಂಗಸಾನಿ ತಿಳಿಸಿದರು.
ಇದೇ ಸಂದರ್ಭದಲ್ಲಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ತಹಶೀಲ್ದಾರ್ ಸಂಜಯ ಇಂಗಳೆ, ಗ್ರೇಡ್ ೨ ತಹಶೀಲ್ದಾರ ಎಸ್. ಬಿ. ಕಾಂಬಳೆ, ಉಪತಹಶೀಲ್ದಾರ ಬಸವರಾಜ ಬಿಜ್ಜರಗಿ, ಕಂದಾಯ ನಿರೀಕ್ಷಕ ಪಿ. ಆರ್. ಮಠಪತಿ, ಕೃಷ್ಣಾ ಲೇಂಡಿ, ಪ್ರಕಾಶ ವಂದಾಲ, ಮಂಜು ನೀಲನ್ನವರ, ಅರಬಾಜಖಾನ ಜಮಖಂಡಿ, ಚಂದ್ರಶೇಖರ ಹೊಸಮನಿ, ಯಲ್ಲಪ್ಪ ಮಹಿಷವಾಡಗಿ ಮಹಾರಾಜರು, ವಾಯ್. ಎಸ್. ಇನಾಮದಾರ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ : ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮುಖ್ಯವಾಗಿದೆ: ಶಾಸಕ ಸಿದ್ದು ಸವದಿ