ವಿನಯ್ ಜನ್ಮ ದಿನಾಚರಣೆ: “ಅಣ್ಣಾ ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಕಾರ್ಯಕರ್ತರ ಬೆಂಬಲ
Team Udayavani, Nov 8, 2020, 1:41 PM IST
ಧಾರವಾಡ: ಸಿಬಿಐ ವಶದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜನ್ಮದಿನವನ್ನು ನಗರದಲ್ಲಿ ಅವರ ಬೆಂಬಲಿಗರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಚರಿಸಿದರು.
ಎಐಸಿಸಿ ಸದಸ್ಯ ದೀಪಕ ಚಿಂಚೋರೆ ನೇತೃತ್ವದಲ್ಲಿ ಖಾಸಗಿ ಹೊಟೇಲ್ನಲ್ಲಿ ಕುಲಕರ್ಣಿ ಅವರ ಜನ್ಮದಿನ ಆಚರಿಸಿ ಸಿಬಿಐ ಕ್ರಮ
ಖಂಡಿಸಲಾಯಿತು. ಈ ವೇಳೆ ಮಾತನಾಡಿದ ದೀಪಕ್ ಚಿಂಚೋರೆ, ವಿನಯ್ ಕುಲಕರ್ಣಿ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ ವ್ಯಕ್ತಿ. ಒಂದು ಕಾಲದಲ್ಲಿ ಯೋಗೀಶಗೌಡ ಅವರನ್ನು ರಾಜಕೀಯವಾಗಿ ಬೆಳೆಸಿದ್ದು ಕೂಡ ಅವರೇ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಸಮಾನ ಸೀಟುಗಳು ಆಯ್ಕೆಯಾದಾಗ ಯೋಗೀಶಗೌಡ ಗೌಡರ ಅವರನ್ನು ಧಾರವಾಡದ
ತಾಪಂ ಅಧ್ಯಕ್ಷರನ್ನಾಗಿ ಮಾಡಿದ್ದು ವಿನಯ್ ಕುಲಕರ್ಣಿಯೇ ಆಗಿದ್ದರು. ಆದರೆ ಇದೀಗ ಅವರನ್ನೇ ಸಿಬಿಐ ಈ ಪ್ರಕರಣದಲ್ಲಿ ಎಳೆದು ತಂದಿರುವುದು ಎಷ್ಟು ಸರಿ?ಎಂದು ಪ್ರಶ್ನಿಸಿದರು.
ರಕ್ತದಾನ-ಅನ್ನ ಸಂತರ್ಪಣೆ: ಇದಲ್ಲದೇ ಬಸವರಾಜ ಜಾಧವ, ಆನಂದ ಸಿಂಗನಾಥ್ ಸೇರಿದಂತೆ ಕುಲಕರ್ಣಿ ಅವರ ಬೆಂಬಲಿಗರು, ಕಾರ್ಯಕರ್ತರು ಕೇಕ್ ಕತ್ತರಿಸುವ ಮೂಲಕ ರಕ್ತದಾನ, ಅನ್ನ ಸಂತರ್ಪಣೆ ಮಾಡುವ ಮೂಲಕ ಜನ್ಮದಿನ ಆಚರಿಸಿದರು. ಆದಷ್ಟು ಬೇಗ ಈ ಪ್ರಕರಣದಿಂದ ದೋಷಮುಕ್ತರಾಗಿ ಬರುವಂತೆ ಪ್ರಾರ್ಥಿಸಿದರು.
ಇದನ್ನೂ ಓದಿ:ಏನಿದು ಹಸಿರು ಪಟಾಕಿ ?: ಇವುಗಳನ್ನು ಗುರುತಿಸಲು ಕ್ಯೂಆರ್ ಕೋಡ್ ಬೇಕು ಎಂದು ತಿಳಿದಿದೆಯೇ ?
ಸ್ವಾಭಿಮಾನಿ ಸಮಾಗಮ: ಇನ್ನೂ ಶನಿವಾರ ಸಂಜೆ ಮುರುಘಾಮಠದಲ್ಲಿ ಸರ್ವ ಸಮಾಜಗಳ ಸ್ವಾಭಿಮಾನಿ ವೇದಿಕೆ ವತಿಯಿಂದ ವಿನಯ್ ಕುಲಕರ್ಣಿ ಅವರ ಜನ್ಮದಿನ ಆಚರಿಸಲಾಯಿತು. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಜನ್ಮದಿನದ ಆಚರಣೆಯಲ್ಲಿ ನೂರಾರು ಜನರು ಪಾಲ್ಗೊಂಡು ವಿನಯ್ ಅವರಿಗೆ ಬೆಂಬಲ ಸೂಚಿಸಿದರು. “ವಿನಯ್ ಅಣ್ಣಾ ನಿಮ್ಮೊಂದಿಗೆ
ನಾವಿದ್ದೇವೆ’ ಎಂಬ ಘೋಷಣೆ ಕೂಗುವ ಮೂಲಕ ವಿನಯ್ ಅಭಿಮಾನಿಗಳು ಬೆಂಬಲ ಸೂಚಿಸಿದರು.
ಶುಭ ಕೋರಲು ಹುಬ್ಬಳ್ಳಿಗೆ ಹೋದರು: ಇನ್ನು ವಿನಯ್ ಅವರನ್ನು ಬೆಳಗಾವಿ ಹಿಂಡಲಗಾ ಜೈಲಿನಿಂದ ಸಿಬಿಐ ಹುಬ್ಬಳ್ಳಿಗೆ ಕರೆದುಕೊಂಡು ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಬೆಂಬಲಿಗರು ಧಾರವಾಡದಿಂದ ನೇರವಾಗಿ ಹುಬ್ಬಳ್ಳಿಗೆ ಹೋಗಿ ಕೇಕ್ನೊಂದಿಗೆ ಹೆಜ್ಜೆ ಹಾಕಿದರು. ಕೇಕಿನ ಮೇಲೆ ವಿನಯ್ ಚಿತ್ರ ಬಿಡಿಸಿಕೊಂಡು ಅವರಿಂದಲೇ ಕೇಕ್ ಕತ್ತರಿಸಿ ಜನ್ಮದಿನ ಆಚರಿಸುವುದಾಗಿ ನೂರಾರು ಯುವಕರು ಹುಬ್ಬಳ್ಳಿಗೆ ಹೋದರು. ಆದರೆ ವಿನಯ್ ಕೇಕ್ ಕತ್ತರಿಸಲು ನಿರಾಕರಿಸಿದ್ದರಿಂದ
ಅವರ ಹೆಸರಿನ ಘೋಷಣೆ ಕೂಗಿ ಜನ್ಮದಿನ ಆಚರಿಸಿದರು.
ಇನ್ನು ನಗರದಲ್ಲಿ ಅವರ ಜನ್ಮದಿನಕ್ಕೆ ಹಾಕಲಾಗಿದ್ದ ಬ್ಯಾನರ್ ಮತ್ತು ಬಂಟಿಂಗ್ಸ್ಗಳನ್ನು ಪಾಲಿಕೆ ತೆರುವುಗೊಳಿಸಿದ್ದರೂ ಶನಿವಾರ ಅಲ್ಲಲ್ಲಿ ಮತ್ತೆ ಮಾಜಿ ಸಚಿವ ವಿನಯ್ ಬೆಂಬಲಿಗರು ಅವರ ಪೋಸ್ಟರ್ಗಳನ್ನು ಕಟ್ಟಿ ಅವರ ಜನ್ಮದಿನಕ್ಕೆ ಶುಭ ಕೋರಿದ್ದು ಕಂಡು ಬಂತು.