ಚುನಾವಣೆ ನಿಯಮ ಉಲ್ಲಂಘನೆ : ಪುಟ್ಟಣ್ಣ ಬೆಂಬಲಿಗನ ಬಂಧನ 85 ಸಾವಿರ ರೂ. ವಶ
Team Udayavani, Oct 29, 2020, 11:52 AM IST
ಕನಕಪುರ: ಚುನಾವಣೆ ನಿಯಮ ಉಲ್ಲಂಘಿಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಪುಟ್ಟಣ್ಣ ಅವರ ಬೆಂಬಲಿಗ ಪ್ರೌಢಶಾಲಾ ಶಿಕ್ಷಕ
ಸಾರ್ವಜನಿಕವಾಗಿ ಮತದಾರರಿಗೆ ಹಣ ಹಂಚುತ್ತಿದ್ದಾಗ ತಹಶೀಲ್ದಾರ್ಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, 85 ಸಾವಿರ
ರೂ. ವಶಪಡಿಸಿಕೊಂಡಿರುವ ಚುನಾವಣಾ ಅಧಿಕಾರಿಗಳು ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ನಗರದ ತಾಲೂಕು ಕಚೇರಿ ಆವರಣದಲ್ಲಿ ಇರಿಸಲಾಗಿರುವ ಮತಗಟ್ಟೆ ಬಗ್ಗೆ ಮಾಹಿತಿ ಹಾಗೂ ಮತದಾನದ ಚೀಟಿ ವಿತರಣೆ ಮಾಡಲು ತಾಲೂಕು ಕಚೇರಿ ಮುಂಭಾಗದಲ್ಲಿ ಮೂರು ಪಕ್ಷದ ಅಭ್ಯರ್ಥಿ ಪರ ಬೆಂಬಲಿಗರು ಕುಳಿತಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಬೆಂಬಲಿಗ ತಾಲೂಕಿನ ಹತ್ತಿಹಳ್ಳಿ ಪ್ರೌಢಶಾಲಾ ಶಿಕ್ಷಕ ವೆಂಕಟೇಶ್ ಚುನಾವಣೆ ಆಯೋಗದ ನಿಯಮ ಉಲ್ಲಂಘಿಸಿ ಸಾರ್ವಜನಿಕವಾಗಿ ಮತದಾರರಿಗೆ ಹಣದಾಸೆ ತೋರಿಸಿ ಹಣ ಹಂಚುತ್ತಿದ್ದ ವೇಳೆ ಆರ್ಒ ತಹಶೀಲ್ದಾರ್ ವರ್ಷ ಒಡೆಯರ್ ಅವರಿಗೆ ಸಿಕ್ಕಿಬಿದ್ದಿದ್ದಾನೆ.
ಈ ಸಂಬಂಧ ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಪ್ರಕಾಶ್ ಅವರಿಗೆ ಚುನಾವಣಾ ಮೇಲ್ವಿಚಾರಕರಾದ ಹಿಂದುಳಿದ ವರ್ಗದ ಇಲಾಖೆ ಮಹೇಶ್ ಮತ್ತು ಬೆಸ್ಕಾಂ ಇಲಾಖೆಯ ಶಂಕರಪ್ಪ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಣ ಹಂಚುತ್ತಿದ್ದ ಹತ್ತಿಹಳ್ಳಿ ಪ್ರೌಢಶಾಲಾ ಶಿಕ್ಷಕ ವೆಂಕಟೇಶ್ ಮತ್ತು ಆತನ ಬಳಿ ಇದ್ದ 85 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ :ಮಂಡ್ಯ: ಮತದಾರರ ಸೆಳೆಯಲು ಭಾರೀ ಕಸರತು! ನಗದು, ಚಿನ್ನ, ಬೆಳ್ಳಿಯ ವಸ್ತುಗಳ ಉಡುಗೊರೆ?
582 ಮತ ಚಲಾವಣೆ…
ಶಿಕ್ಷಕರ ಕ್ಷೇತ್ರದ ಚುನಾವಣೆಗೆ ತಾಲೂಕಿನ ಹಾರೋಹಳ್ಳಿಯಲ್ಲಿ 105 ಮತದಾರರಲ್ಲಿ 88, ಕೋಡಿಹಳ್ಳಿಯ 63 ಮತದಾರರಲ್ಲಿ 55, ಹಾಗೂ ನಗರವ್ಯಾಪ್ತಿಯ 497 ಮತದಾರರಲ್ಲಿ 439 ಮತಗಳು ಚಲಾವಣೆಯಾಗಿವೆ. ಹಣ ಹಂಚಿಕೆ ಪ್ರಕರಣ ಹೊರತುಪಡಿಸಿ ತಾಲೂಕಿನ ಮೂರು ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.