ಉಪ ಚುನಾವಣೆ ಮತದಾನ ಶಾಂತಿಯುತ
Team Udayavani, May 20, 2019, 3:09 AM IST
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಕುಂದಗೋಳದಲ್ಲಿ ಶೇ.81.33 ಹಾಗೂ ಚಿಂಚೋಳಿಯಲ್ಲಿ ಶೇ.70.30ರಷ್ಟು ಮತದಾನವಾಗಿದೆ.
ಈ ಎರಡೂ ಕ್ಷೇತ್ರಗಳ ಮತ ಎಣಿಕೆ ಮೇ 23ರಂದು ನಡೆಯಲಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕುಂದಗೋಳದಲ್ಲಿ ಶೇ.78.27ರಷ್ಟು ಹಾಗೂ ಚಿಂಚೋಳಿಯಲ್ಲಿ ಶೇ. 68.64ರಷ್ಟು ಮತದಾನ ಆಗಿತ್ತು. ಕಳೆದ ವಿಧಾನಸಭೆ ಚುನಾವಣೆಗೆ ಹೊಲಿಸಿದರೆ ಕುಂದಗೋಳದಲ್ಲಿ ಮತ ಪ್ರಮಾಣ ಇಳಿಕೆಯಾಗಿದ್ದರೆ, ಚಿಂಚೋಳಿಯಲ್ಲಿ ಏರಿಕೆಯಾಗಿದೆ.
ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ಹಠಾತ್ ನಿಧನದಿಂದ ಕುಂದಗೋಳ ವಿಧಾನಸಭಾ ಕ್ಷೇತ್ರ ತೆರವುಗೊಂಡಿದ್ದರೆ, ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಶಾಸಕ ಡಾ.ಉಮೇಶ್ ಜಾಧವ್ ಬಿಜೆಪಿ ಸೇರಿದ್ದರಿಂದ ಚಿಂಚೋಳಿ ಕ್ಷೇತ್ರ ತೆರವುಗೊಂಡಿತ್ತು. ಹಾಗಾಗಿ, ಈ ಎರಡೂ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ.
ಕುಂದಗೋಳದಲ್ಲಿ ಸಿ.ಎಸ್.ಶಿವಳ್ಳಿಯವರ ಪತ್ನಿ ಕುಸಮಾವತಿ ಶಿವಳ್ಳಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡರ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಚಿಂಚೋಳಿಯಲ್ಲಿ ಬಿಜೆಪಿಯಿಂದ ಡಾ.ಅವಿನಾಶ್ ಜಾಧವ್ ಹಾಗೂ ಕಾಂಗ್ರೆಸ್ನಿಂದ ಸುಭಾಷ ರಾಠೊಡ್ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ.