ನಮ್ಮ ಗುರಿ ಈಡನ್ ಗಾರ್ಡನ್ಸ್: ಶ್ರೇಯಸ್ ಅಯ್ಯರ್
Team Udayavani, Apr 28, 2022, 5:15 AM IST
ಮುಂಬಯಿ: “ಪ್ಲೇ ಆಫ್ ಪಂದ್ಯಗಳು ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿವೆ ಎಂಬುದು ಗೊತ್ತು. ಇದು ನಮ್ಮ ತವರು ಅಂಗಳ. ಇಲ್ಲಿ ಆಡುವುದೇ ನಮ್ಮ ಏಕೈಕ ಗುರಿ…’ ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ ಕೋಲ್ಕತಾ ನೈಟ್ರೈಡರ್ ತಂಡದ ನಾಯಕ ಶ್ರೇಯಸ್ ಅಯ್ಯರ್.
ಎಂಟರಲ್ಲಿ ಕೇವಲ 3 ಪಂದ್ಯಗಳನ್ನು ಗೆದ್ದಿರುವ ಕೆಕೆಆರ್ 8ನೇ ಸ್ಥಾನಕ್ಕೆ ಕುಸಿದಿದೆ. ಇಲ್ಲಿಂದ ಮೇಲೆದ್ದು ಬರುವುದು ಸುಲಭವಲ್ಲ ಎಂಬುದು ಸ್ವತಃ ಅಯ್ಯರ್ಗೆ ತಿಳಿದಿದೆ. ಆದರೂ ತಂಡದ ಆತ್ಮವಿಶ್ವಾಸಕ್ಕೆ ಯಾವುದೇ ಧಕ್ಕೆ ಆಗಿಲ್ಲ.
“ನಾವು ಈ ಮೂರು ಜಯಗಳನ್ನು ಮೊದಲ ನಾಲ್ಕು ಪಂದ್ಯಗಳಲ್ಲೇ ಸಾಧಿಸಿ ಭರವಸೆಯ ಆರಂಭ ಕಂಡುಕೊಂಡಿದ್ದೆವು. ಆದರೆ ಅನಂತರ ಯಾವುದೂ ನಮ್ಮೆಣಿಕೆಯಂತೆ ಸಾಗಲಿಲ್ಲ. ಆದರೂ ನಮಗೆ ತುಂಬು ವಿಶ್ವಾಸವಿದೆ. ಒಮ್ಮೆ ಗೆಲ್ಲಲಾರಂಭಿಸಿದರೆ ನಮ್ಮನ್ನು ತಡೆಯುವುದು ಕಷ್ಟ. ಕ್ವಾಲಿಫೈಯರ್ ಪಂದ್ಯಗಳು ನಮ್ಮ ತವರಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿವೆ ಎಂಬುದು ಗೊತ್ತು. ನೂರು ಪ್ರತಿಶತ ಸಾಧನೆ ಹಾಕಿದರೆ ಈಡನ್ ತಲುಪುವುದು ಅಸಾಧ್ಯವಲ್ಲ. ಇಲ್ಲಿ ಆಡುವುದೇ ನಮ್ಮ ಗುರಿ.
ಈಡನ್ ವಾತಾವರಣವೇ ಅದ್ಭುತ…’ ಎಂಬುದಾಗಿ ಶ್ರೇಯಸ್ ಅಯ್ಯರ್ ಹೇಳಿದರು.