ಇಂದು ವಿಶ್ವ ಪ್ರವಾಸೋದ್ಯಮ ದಿನ; ಈ ವರ್ಷದ ಧ್ಯೇಯವೇನು?
Team Udayavani, Sep 27, 2022, 11:23 AM IST
ಇಂದು (ಸೆ.27) ವಿಶ್ವ ಪ್ರವಾಸೋದ್ಯಮ ದಿನ. ನಮ್ಮ ದೇಶ ಪ್ರವಾಸಿ ತಾಣಗಳ ತವರು ಎಂದೇ ಹೇಳಬಹುದು. ಧಾರ್ಮಿಕ ಕ್ಷೇತ್ರಗಳಿಂದ ಹಿಡಿದು, ಕಣ್ಣಿಗೆ ಮುದ ನೀಡುವ ಪ್ರಾಕೃತಿಕ ತಾಣಗಳು ಸೇರಿದಂತೆ ಪ್ರವಾಸಿಗರ ಮನ ತಣಿಸುವಷ್ಟು ವಿಭಿನ್ನವಾದ ಪ್ರವಾಸಿ ತಾಣಗಳು ನಮ್ಮ ದೇಶದಲ್ಲಿದೆ. ಕೋವಿಡ್ ಕಡಿಮೆಯಾದ ಮೇಲೆ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡಿದೆ.
2022ರಲ್ಲಿ ರೀ ಥಿಂಕಿಂಗ್ ಟೂರಿಸಂ (ಪ್ರವಾಸೋದ್ಯಮದ ಬಗ್ಗೆ ಮತ್ತೆ ವಿಚಾರ ಮಾಡುವುದು) ಅಭಿವೃದ್ಧಿಗೆ ಪ್ರವಾಸೋದ್ಯಮ ಆಧಾರ ಸ್ಥಂಭ ಎಂಬ ಆಲೋಚನೆ ಬೆಳಸುವುದು ಎಂಬ ಧ್ಯೇಯದೊಂದಿಗೆ ವಿಶ್ವ ಪ್ರವಾಸೋದ್ಯಮವನ್ನು ಆಚರಿಸಲಾಗುತ್ತಿದೆ.
ವಿಶ್ವ ಪ್ರವಾಸೋದ್ಯಮಕ್ಕೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದು, ನಮ್ಮ ಪರಿಸರವನ್ನು ಉಳಿಸಿ ಬೆಳೆಸೋಣ, ಎಲೆಮರೆ ಕಾಯಿಯಂತೆ ಇರುವ ಪ್ರವಾಸಿತಾಣಗಳನ್ನು ಅಭಿವೃದ್ಧಿ ಪಡಿಸೋಣ ಎಂದು ಕರೆ ನೀಡಿದ್ದಾರೆ.
ಭಾರತದ ನಯಾಗಾರವೆಂದೇ ಕರೆಯಲಾಗುವ ಗೋಕಾಕ್ ಜಲಪಾತವು ಕರ್ನಾಟಕದ ಎರಡನೇ ದೊಡ್ಡ ಜಲಪಾತ. ಬೆಳಗಾವಿಯ ಗೋಕಾಕ್ ನಿಂದ 6 ಕಿ. ಮೀ ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಈ ವಿಶ್ವ ಪ್ರವಾಸೋದ್ಯಮ ದಿನದಂದು ನಮ್ಮ ಹಿರಿಯರು ಹಾಗೂ ಪ್ರಕೃತಿಯು ನೀಡಿದ ಪರಿಸರವನ್ನು ಉಳಿಸಿ ಬೆಳೆಸೋಣ ಎಂದು ಸಚಿವ ಮುರುಗೇಶ್ ನಿರಾಣಿ ಕೂ ಮಾಡಿದ್ದಾರೆ.
ಉಡುಪಿ ಮತ್ತು ಚಿಕ್ಕಮಗಳೂರು ಸುಂದರವಾದ ತಾಣಗಳಾಗಿದೆ, ಧಾರ್ಮಿಕ ಸ್ಥಳಗಳನ್ನೊಳಗೊಂಡ ಉಡುಪಿ ದೇವತೆಗಳ ನೆಲೆಯಾಗಿದ್ದು, ರಾಜ್ಯಕ್ಕೆ ಉಡುಗೊರೆಯಾಗಿದೆ. ತೀರ್ಥಯಾತ್ರೆಗಳು ಮತ್ತು ವಿಹಾರಗಳಿಗೆ ಅವು ಸರ್ವೋತ್ಕೃಷ್ಟ ತಾಣಗಳಾಗಿವೆ ಎಂದು ಸಂಸದೆ, ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಹೇಳಿದ್ದಾರೆ.
ಸುದೀರ್ಘ ಪರಂಪರೆ, ಇತಿಹಾಸ ಹೊಂದಿರುವ ಕನ್ನಡನಾಡು ಪ್ರವಾಸಿಗರ ಸ್ವರ್ಗ. ನಮ್ಮ ನಾಡಿನಲ್ಲಿರುವ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಆಗಬೇಕಿದೆ. ಈ ಕುರಿತು ಅರಿವು ಮೂಡಿಸೋಣ. ಎಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.