ಯಕ್ಷ ಕೋಗಿಲೆ ನೆಬ್ಬೂರು ನಾರಾಯಣ ಭಾಗವತ ಇನ್ನಿಲ್ಲ
Team Udayavani, May 11, 2019, 9:49 AM IST
ಶಿರಸಿ : ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆ ಅವರು ಶನಿವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ನೆಬ್ಬೂರು ಶೈಲಿನ ಭಾಗವತರು ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಚಿನ ಕಂಠದಿಂದ ಯಕ್ಷಗಾನ ರಂಗದಲ್ಲಿ ಪ್ರಸಿದ್ಧರಾದವರು. ಕೋಟ ಅಮೃತೇಶ್ವರಿ ಮೇಳ, ಇಡುಗುಂಜಿ ಕೆರೆಮನೆ ಮೇಳಗಳಲ್ಲಿ ಮೂರು ತಲೆಮಾರಿನ ಕಲಾವಿದರನ್ನು ಕುಣಿಸಿ, ಮೆರೆಸಿದ ಹೆಗ್ಗಳಿಕೆ ನೆಬ್ಬೂರು ಭಾಗವತರದ್ದು.
ದೇಶದ ವಿವಿಧೆಡೆಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸ್ವರಮಾಧುರ್ಯ ಪಸರಿಸಿದ ಖ್ಯಾತಿ ನೆಬ್ಬೂರರದ್ದು.
ಬಡಾಬಡಗು ತಿಟ್ಟಿನ ಮೇರು ಭಾಗವತರಾಗಿರುವ ನೆಬ್ಬೂರರ ನಿಧನದಿಂದ ಪರಂಪರೆಯ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ.
ನೆಬ್ಬೂರು ನಾರಾಯಣ ಭಾಗವತರ ನಿಧನಕ್ಕೆ ಯಕ್ಷಾಭಿಮಾನಿಗಳು ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಅಭಿಮಾನಿಗಳನ್ನು ನೆಬ್ಬೂರು ಭಾಗವತರು ಅಗಲಿದ್ದಾರೆ.