ಯತ್ನಾಳ್ ಕ್ಷಮೆಯಾಚನೆಗೆ ಬಿಗಿ ಪಟ್ಟು
Team Udayavani, Mar 3, 2020, 3:07 AM IST
ವಿಧಾನ ಪರಿಷತ್: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕ್ಷಮೆ ಯಾಚಿಸಬೇಕು ಮತ್ತು ಮುಖ್ಯಮಂತ್ರಿಯವರು ಈ ಕುರಿತು ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಸದಸ್ಯರ ಧರಣಿ, ಪ್ರತಿಭಟನೆಯಿಂದ ಇಡೀ ದಿನ ಕಲಾಪವೇ ನಡೆಯಲಿಲ್ಲ.
ಬೆಳಗ್ಗೆ ಕಲಾಪ ಆರಂಭವಾಗಿ ಸಂಶೋಧಕ ಷ.ಶೆಟ್ಟರ್ ಸೇರಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಯವರನ್ನು ಪಾಕ್ ಏಜೆಂಟ್ ಎನ್ನುವ ಮೂಲಕ ಇಡೀ ಸ್ವಾತಂತ್ರ್ಯ ಚಳವಳಿಯನ್ನೇ ಯತ್ನಾಳ್ ಅಪಮಾನ ಮಾಡಿದ್ದಾರೆ. ಯತ್ನಾಳ್ ಅವರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಮತ್ತು ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದರು.
ಗಾಂಧೀಜಿಯವರ ಕೊನೆಯ ಕೊಂಡಿ, ಅವರಿಗೆ ಅವಮಾನ ಮಾಡಿದ್ದರಿಂದ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ಎಲ್ಲರಿಗೂ ಅಪಮಾನ ಮಾಡಿದಂತಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿ ದರು. ಈ ಮಧ್ಯೆ ಎದ್ದುನಿಂತ ಆಡಳಿತ ಪಕ್ಷದ ನಾಯಕ ಶ್ರೀನಿವಾಸ ಪೂಜಾರಿ, ಸಭಾಪತಿಗಳ ಅನುಮತಿ ಪಡೆಯದೆ ಬೇರೊಂದು ವಿಷಯವನ್ನು ಪ್ರಸ್ತಾಪಿಸುವುದು ಸರಿಯಲ್ಲ. ಈಗ ಪ್ರಶ್ನಾವಳಿಗಳು ನಡೆಯಲಿ. ಆ ನಂತರ ಸಭಾಪತಿಗೆ ನೋಟಿಸ್ ನೀಡಿ ಈ ವಿಚಾರವಾಗಿ ಚರ್ಚೆ ನಡೆಸಿ ಎಂದರು.
ಅದಕ್ಕೆ ಒಪ್ಪದ ವಿಪಕ್ಷ ಸದಸ್ಯರು, ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದು ದೇಶವನ್ನೇ ಅವಮಾನಿಸಿದಂತೆ, ಶೇಮ್, ಶೇಮ್ ಎನ್ನುತ್ತಾ ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಸಭಾನಾಯಕ ಕೋಟ ಶ್ರೀ ನಿವಾಸ ಪೂಜಾರಿ ಮತ್ತು ಬಿಜೆಪಿ ಸದಸ್ಯ ನಾರಾ ಯಣ ಸ್ವಾಮಿ ಎದ್ದು ನಿಂತು ದೊರೆಸ್ವಾಮಿಯವರು ಸಾರ್ವಕರ್ ಬಗ್ಗೆ ನೀಡಿರುವ ಹೇಳಿಕೆಯನ್ನು ನೀವು ಸಮರ್ಥಿಸಿಕೊಳ್ಳುತ್ತೀರಾ ಎಂದು ವಿಪಕ್ಷದ ಸದಸ್ಯರನ್ನು ಪ್ರಶ್ನಿಸಿದರು.
ಈ ವೇಳೆ ಬಿಜೆಪಿ ಸದಸ್ಯರು, ದೊರಸ್ವಾಮಿಯವರು ಅಮೂಲ್ಯ ಮತ್ತು ಕನ್ನಯ್ಯ ಕುಮಾರ್ರೊಂದಿಗೆ ಇರುವ ಫೋಟೋಗಳನ್ನು ಪ್ರದರ್ಶಿಸಿದರು. ವಿಪಕ್ಷ ನಾಯಕರು ಯತ್ನಾಳ್ ಅವರು ವಿರುದ್ಧ ಘೋಷಣೆ ಕೂಗುತ್ತಲೇ ಸದನದ ಬಾವಿಯಲ್ಲಿ ಪ್ರತಿಭಟನೆ, ಧರಣಿ ಮುಂದುವರಿಸಿದರು. ಹೀಗಾಗಿ ಸಭಾಪತಿಗಳು ಸದನವನ್ನು ಒಂದು ಗಂಟೆ ಮುಂದೂಡಿದರು.
ಪುನಃ ಸದನ ಆರಂಭವಾಗುತ್ತಿದ್ದಂತೆ, ವಿಪಕ್ಷ ಸದಸ್ಯರು ಸದನದ ಬಾವಿಯಲ್ಲಿ ಪ್ರತಿಭಟನೆ ಮುಂದುವರಿಸಿದರು. ಈ ಮಧ್ಯೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಸದ ನದ ನಿಯಮಾವಳಿ ಪಾಲನೆಯಾಗಿಲ್ಲ. ಕ್ರಿಯಾ ಲೋಪವಾಗಿದೆ. ದೊರೆಸ್ವಾಮಿಯವರ ಎಲ್ಲ ಚಟುವಟಿಕೆಗಳನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನುವ ದೃಷ್ಟಿಯಲ್ಲಿ ನೋಡಬೇಕೇ? ಕನ್ನಯ್ಯ ಕುಮಾರ್ ಮತ್ತು ತುಕ್ಡೆ, ತುಕ್ಡೆ ಗ್ಯಾಂಗ್ ಜತೆಗೂ ಅವರು ಗುರುತಿಸಿಕೊಂಡಿದ್ದಾರೆ. ಇದಕ್ಕೆಲ್ಲ ಏನೆನ್ನಬೇಕು ಎನ್ನುತ್ತಿದ್ದಂತೆ ಸದನದಲ್ಲಿ ಗದ್ದಲ ಕೋಲಾಹಲವುಂಟಾಯಿತು.
ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಈ ಮನೆಯ ಸದಸ್ಯರಲ್ಲದವರಿಗೆ ಸಂತಾಪ ಸೂಚಿಸುತ್ತೇವೆ. ಹೀಗಿರುವಾಗ ಇಂತಹ ವಿಷಯ ಚರ್ಚೆ ಮಾಡುವುದರಲ್ಲಿ ತಪ್ಪಿಲ್ಲ. ಹಾಗೆಯೇ ಯತ್ನಾಳ್ ಅವರು ಕ್ಷಮೆ ಕೇಳಬೇಕು. ಅನಗತ್ಯ ಚರ್ಚೆ ಸರಿಯಲ್ಲ ಎಂದರು. ವಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಸಭಾಪತಿಯವರು ಸಂಜೆ 4 ಗಂಟೆವರೆಗೆ ಕಲಾಪವನ್ನು ಮುಂದೂಡಿದರು. ಸಂಜೆಯ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷದವರು ಮತ್ತೆ ಪ್ರತಿಭಟಿಸಿದರು.ಸಭಾಪತಿ ಪ್ರತಾಪ್ ಶೆಟ್ಟಯವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.
ಯತ್ನಾಳ್ ಪರ ಬಿಜೆಪಿ ಸಮರ್ಥನೆ: ವಿಧಾನಮಂಡಲದಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ಹೇಳಿಕೆ ನೀಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿಲುವನ್ನು ಉಭಯ ಸದನಗಳಲ್ಲೂ ಬೆಂಬಲಿಸಿ ಅವರ ಪರ ಸಮರ್ಥನೆಗೆ ನಿಲ್ಲಲು ಬಿಜೆಪಿ ನಿರ್ಧರಿಸಿದೆ. ಎಚ್.ಎಸ್. ದೊರೆಸ್ವಾಮಿಯವರ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಖಂಡಿಸಿ ಕ್ಷಮೆಗೆ ಆಗ್ರಹಿಸಿ ಕಾಂಗ್ರೆಸ್ ಉಭಯ ಸದನಗಳಲ್ಲಿ ಧರಣಿ ಆರಂಭಿಸಿದೆ.
ಆದರೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಪರವಾಗಿ ಬಿಜೆಪಿಯು ದೊರೆಸ್ವಾಮಿಯವರ ಕುರಿತು ಹೆಚ್ಚು ಚರ್ಚಿಸದೆ ಕಾಂಗ್ರೆಸ್ ಧೋರಣೆಯನ್ನೇ ಪ್ರಶ್ನಿಸುವುದನ್ನು ಮುಂದುವರಿಸುವ ಮೂಲಕ ಆ ಪಕ್ಷದ ನಿಲುವನ್ನು ಬಯಲು ಮಾಡಲು ಕಾರ್ಯತಂತ್ರ ಹೆಣೆದಿದೆ. ಎಚ್.ಎಸ್.ದೊರೆಸ್ವಾಮಿಯವರ ಪರವಾಗಿ ನಿಲ್ಲುವ ಮೂಲಕ ನಕ್ಸಲ್ ಚಟುವಟಿಕೆ, ದೇಶ ದ್ರೋಹದ ಕೃತ್ಯಗಳಿಗೂ ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂಬುದಾಗಿ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಧೋರಣೆಯನ್ನೇ ಉಗ್ರವಾಗಿ ಖಂಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಯತ್ನಾಳ್ ನಿಲುವು ಬೆಂಬಲಿಸುತ್ತಲೇ ಕಾಂಗ್ರೆಸ್ನ ಧೋರಣೆಯನ್ನು ವಿರೋಧಿಸಲು ಬಿಜೆಪಿ ಶಾಸಕರು ಅಣಿಯಾಗುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ