ದೇವೇಗೌಡರ ಮನವಿಗೆ ಯಡಿಯೂರಪ್ಪ ಸ್ಪಂದನೆ
Team Udayavani, Apr 9, 2020, 5:45 AM IST
ಬೆಂಗಳೂರು: ಕೋವಿಡ್ 19 ಸೋಂಕು ತಡೆಗಾಗಿ ಸರಕಾರ ಕೈಗೊಂಡಿರುವ ಕ್ರಮಗಳಿಗೆ ಬೆಂಬಲ ಸೂಚಿಸಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಧನ್ಯವಾದ ಹೇಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇವೇಗೌಡರು ಪತ್ರದಲ್ಲಿ ಪ್ರಸ್ತಾವಿಸಿರುವ ಅಂಶಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಹಾಲು ಉತ್ಪಾದನೆ, ವಿತರಣೆ, ಇತರ ಅಂಶಗಳ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿರುವ ಹಾಲನ್ನು ಬಡ (ಬಿಪಿಎಲ್) ಮತ್ತು ಕಾರ್ಮಿಕ ವರ್ಗದ ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್ನಂತೆ ವಿತರಿಸಲು ಸೂಚಿಸಲಾಗಿದೆ. ಹಾಗೆಯೇ ರೈತರು ಬೆಳೆದ ಬೆಳೆ, ಹಣ್ಣು, ತರಕಾರಿ ಇತರ ಅಗತ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಅವರ ಉತ್ಪನ್ನಗಳನ್ನು 500 ಹಾಪ್ಕಾಮ್ಸ್ಗಳ ಮೂಲಕ ಸೂಕ್ತ ಬೆಲೆಗೆ ಖರೀದಿಸಿ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಾವು ಪ್ರಸ್ತಾವಿಸಿರುವ ಉಳಿದ ಅಂಶಗಳ ಬಗ್ಗೆಯೂ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನಾಧರಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು,
ಇದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ಯಡಿಯೂರಪ್ಪ ಪತ್ರದಲ್ಲಿ ಹೇಳಿದ್ದಾರೆ.