ಎಡಗೈ ಕ್ರಿಕೆಟಿಗರು ಪ್ರತಿಭಾವಂತರು; ಮಂಧನಾಗೆ ಯುವರಾಜ್ ಸಂದೇಶ
Team Udayavani, Jul 19, 2020, 12:35 PM IST
ಮುಂಬಯಿ: ಭಾರತ ಕ್ರಿಕೆಟ್ ತಂಡದ ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರಿಗೆ ಶನಿವಾರ 24ನೇ ಜನ್ಮದಿನದ ಸಡಗರ. ಕೋವಿಡ್-19 ಕಾರಣದಿಂದ ಮನೆಯಲ್ಲಿ ಸರಳವಾಗಿ ಸಂಭ್ರಮವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಯುವರಾಜ್ ಸಿಂಗ್, ಜೂಲನ್ ಗೋಸ್ವಾಮಿ, ಡಬ್ಲ್ಯು.ವಿ. ರಾಮನ್ ಮೊದಲಾದವರೆಲ್ಲ ಮಂಧನಾಗೆ ಶುಭ ಹಾರೈಸಿದರು.
ಇದರಲ್ಲಿ ಯುವರಾಜ್ ಸಿಂಗ್ ಅವರ ಸಂದೇಶ ಸ್ವಾರಸ್ಯಕರವಾಗಿತ್ತು. “ನಿಮ್ಮ ಪ್ರದರ್ಶನ ಇದೇ ರೀತಿ ಮುಂದುವರಿಯಲಿ. ಭಾರತ ತಂಡದ ಎಡಗೈ ಆಟಗಾರರು ಬಹಳ ಪ್ರತಿಭಾವಂತರೆಂಬ ಖ್ಯಾತಿ ಹೊಂದಿದ್ದಾರೆ. ಇದನ್ನು ಎತ್ತಿಹಿಡಿಯಿರಿ. ನಿಮಗೆ ನನ್ನ ಶುಭಾಶಯಗಳು’ ಎಂದು ಯುವರಾಜ್ ಹಾರೈಸಿದ್ದಾರೆ.
“ಇದು ಅತ್ಯುತ್ತಮ ವರ್ಷಕ್ಕೊಂದು ಮುನ್ನುಡಿಯಾಗಲಿ. ಶುಭಾಶಯಗಳು ಸ್ಮತಿ ಮಂಧನಾ’ ಎಂಬುದಾಗಿ ವೇಗಿ ಜೂಲನ್ ಗೋಸ್ವಾಮಿ ಸಂದೇಶ ರವಾನಿಸಿದ್ದಾರೆ.
“ಹ್ಯಾಪ್ಪಿ ಬರ್ತ್ಡೇ ಮಂಧನಾ. ಸುಂದರ ದಿನ ನಿಮ್ಮದಾಗಲಿ. ದೇವರು ಸದಾ ಒಳ್ಳೆಯದನ್ನೇ ಮಾಡಲಿ…’ ಎಂದು ವನಿತಾ ತಂಡದ ಕೋಚ್ ಡಬ್ಲ್ಯು.ವಿ. ರಾಮನ್ ಹಾರೈಸಿದ್ದಾರೆ.
ಆಕಾಶ್ ಚೋಪ್ರಾ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಜೆಮಿಮಾ ರೋಡ್ರಿಗಸ್, ರಮೇಶ್ ಪೊವಾರ್ ಕೂಡ ಮಂಧನಾ ಜನ್ಮದಿನಕ್ಕೆ ಶುಭ ಕೋರಿದ್ದಾರೆ.