74ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜು; ಕೆಂಪುಕೋಟೆ, ದೆಹಲಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು
ಆಯ್ದ ಪ್ರಮುಖ ಸ್ಥಳಗಳಲ್ಲಿ ಸ್ವಾಟ್ (ಎಸ್ ಡಬ್ಲ್ಯುಎಟಿ) ತಂಡ ಮತ್ತು ಪರಾಕ್ರಮ್ ವ್ಯಾನ್ ಅನ್ನು ನಿಯೋಜಿಸಲಾಗಿದೆ.
Team Udayavani, Aug 14, 2020, 3:22 PM IST
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಆಗಸ್ಟ್ 15ರಂದು (2020) ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ರೀತಿಯ ಅಡ್ಡಿ, ಅಡಚಣೆ ನಡೆಯದಿರುವ ನಿಟ್ಟಿನಲ್ಲಿ ದೆಹಲಿ ಪೊಲೀಸರು ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಲ್ಟಿ ಲೇಯರ್ (ಹಲವು ಹಂತದ) ಬಿಗಿ ಬಂದೋಬಸ್ತ್ ಕೈಗೊಂಡಿರುವುದಾಗಿ ವರದಿ ತಿಳಿಸಿದೆ.
ಬಿಗಿ ಭದ್ರತೆಗಾಗಿ ಎನ್ ಎಸ್ ಜಿ, ಎಸ್ ಪಿಜಿ ಹಾಗೂ ಐಟಿಬಿಪಿಯಂತಹ ಏಜೆನ್ಸಿ ಜತೆ ಅಗತ್ಯ ಹೊಂದಾಣಿಕೆ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಎಲ್ಲಾ ರೀತಿಯ ಬೆದರಿಕೆ, ದಾಳಿಯನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲಾ ಭದ್ರತಾ ಸಂಸ್ಥೆಗಳು ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿ ವಿವರಿಸಿದೆ.
ಭದ್ರತೆ ವ್ಯವಸ್ಥೆಯಲ್ಲಿ ಬಿಗು ತಪಾಸಣೆಗಾಗಿ ಆಯ್ದ ಪ್ರಮುಖ ಸ್ಥಳಗಳಲ್ಲಿ ಸ್ವಾಟ್ (ಎಸ್ ಡಬ್ಲ್ಯುಎಟಿ) ತಂಡ ಮತ್ತು ಪರಾಕ್ರಮ್ ವ್ಯಾನ್ ಅನ್ನು ನಿಯೋಜಿಸಲಾಗಿದೆ. ಅಲ್ಲದೇ ಆಯಕಟ್ಟಿನ ಸ್ಥಳದಲ್ಲಿ ಶಂಕಿತರ ಗುರುತು ಪತ್ತೆಹಚ್ಚಲು ಮುಖ ಗುರುತು ಪತ್ತೆಹಚ್ಚುವ ಕ್ಯಾಮರಾವನ್ನು ಅಳವಡಿಸಲಾಗಿದೆ ಎಂದು ವರದಿ ತಿಳಿಸಿದೆ.