ಮುಚ್ಚಿದ ಬಾಗಿಲಿನ ಹಿಂದೆ ಆರ್ಸಿಬಿ: ಗುಜರಾತ್ ಟೈಟಾನ್ಸ್ ವಿರುದ್ಧ ಇಂದು ಅಂತಿಮ ಪಂದ್ಯ
ಗೆದ್ದರೂ ಆರ್ಸಿಬಿಗೆ ಎದುರಾಗಲಿದೆ ರನ್ರೇಟ್ ಕಂಟಕ
Team Udayavani, May 19, 2022, 7:10 AM IST
ಮುಂಬಯಿ: ಕನ್ನಡಿಗರ ನೆಚ್ಚಿನ ಐಪಿಎಲ್ ತಂಡವಾಗಿರುವ ರಾಯಲ್ ಚಾಲೆಂಜರ್ ಬೆಂಗಳೂರು ಮುಚ್ಚಿದ ಬಾಗಿಲಿನ ಹಿಂದೆ ನಿಂತಿದೆ. ಇದನ್ನು ತೆರೆದು ಪ್ಲೇ ಆಫ್ ಅಂಗಳ ತಲುಪಲು ಸಾಧ್ಯವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಗುರುವಾರ ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ವಿರುದ್ಧ ಅಂತಿಮ ಲೀಗ್ ಪಂದ್ಯವನ್ನು ಆಡಲಿದೆ. ಇದನ್ನು ಭಾರೀ ಅಂತರದಿಂದ ಗೆದ್ದು, ಉಳಿದ ಒಂದೆರಡು ತಂಡಗಳು ಸೋತರಷ್ಟೇ ಆರ್ಸಿಬಿಗೆ ಪ್ಲೇ ಆಫ್ ಅವಕಾಶ ಎದುರಾಗಲಿದೆ. ಸೋತರೆ ನೇರವಾಗಿ ಮನೆಗೆ. ಹೀಗಾಗಿ ಡು ಪ್ಲೆಸಿಸ್ ಪಡೆಯ ಪಾಲಿಗೆ ಇದು ಡು ಆರ್ ಡೈ ಮ್ಯಾಚ್.
ಆರ್ಸಿಬಿ 13 ಪಂದ್ಯಗಳಲ್ಲಿ ಏಳನ್ನು ಗೆದ್ದು 5ನೇ ಸ್ಥಾನದಲ್ಲಿದೆ. ಒಂದು ಮೆಟ್ಟಿಲು ಮೇಲೇರಿದರೆ ಪ್ಲೇ ಆಫ್ ಅವಕಾಶ ತೆರೆಯಲಿದೆ. ಆದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಿರುವುದು ರನ್ರೇಟ್. ಇದು ಮೈನಸ್ನಲ್ಲಿದೆ. ಹೀಗಾಗಿ ಸಾಮಾನ್ಯ ಗೆಲುವು ಇಲ್ಲಿ ಯಾವ ಪ್ರಯೋಜನಕ್ಕೂ ಬರುವುದಿಲ್ಲ ಎಂಬುದು ಒಂದು ಲೆಕ್ಕಾಚಾರ.
ಪಂಜಾಬ್ ಕೊಟ್ಟ ಪಂಚ್…
ಆರ್ಸಿಬಿಗೆ ಕಂಟಕವಾಗಿ ಕಾಡಿದ್ದು ಪಂಜಾಬ್ ಕಿಂಗ್ಸ್ ಎದುರು ಹಿಂದಿನ ಪಂದ್ಯದಲ್ಲಿ ಅನುಭವಿಸಿದ 54 ರನ್ ಅಂತರದ ಆಘಾತಕಾರಿ ಸೋಲು. ಸತತ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಲಯದಲ್ಲಿದ್ದ ಬೆಂಗಳೂರು ಟೀಮ್, ಪಂಜಾಬ್ಗ ಇನ್ನೂರಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟು ಕೈ ಸುಟ್ಟುಕೊಂಡಿತು. ಜತೆಗೆ ಬ್ಯಾಟಿಂಗ್ ಕೂಡ ಕೈಕೊಟ್ಟಿತು. ಪರಿಣಾಮ, ಈಗ ಅನುಭವಿಸುತ್ತಿದೆ!
ಪಂಜಾಬ್ ತಂಡವನ್ನು ಕೆಡವಿದ್ದೇ ಆದರೆ ಇಂದು ಆರ್ಸಿಬಿ 16 ಅಂಕ ಗಳೊಂದಿಗೆ “ಸೇಫ್ ಝೋನ್’ ನಲ್ಲಿರು ತ್ತಿತ್ತು. ಆಗ ಗುಜರಾತ್ ತಂಡ ವನ್ನು ಹೆಚ್ಚು ಆತ್ಮವಿಶ್ವಾಸದಿಂದ ಎದು ರಿಸ ಬಹುದಿತ್ತು. ಆದರೆ ಪಂಜಾಬ್ ಬಲವಾದ ಪಂಚ್ ಕೊಟ್ಟಿತು.
ಆರ್ಸಿಬಿ ಟಾಸ್ ಜಯಿಸಿದ್ದೇ ಆದರೆ ಮೊದಲು ಬ್ಯಾಟಿಂಗ್ ನಡೆಸಿ ದೊಡ್ಡ ಮೊತ್ತವನ್ನು ರಾಶಿ ಹಾಕಿದರೆ ಸೇಫ್ ಎಂಬುದು ಅನೇಕರ ಅನಿಸಿಕೆ. ಆದರೆ ಟಾಸ್ ಗೆದ್ದು ಎದುರಾಳಿಗೆ ಬ್ಯಾಟಿಂಗ್ ಬಿಟ್ಟುಕೊಡುವುದು ಫ್ಯಾಶನ್ ಆಗಿದೆ. ಮೊದಲು ಬ್ಯಾಟಿಂಗ್ ನಡೆಸುವ ಧೈರ್ಯ ತೋರಿದ್ದು ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಮಾತ್ರ. ಗುಜರಾತ್ ಯಶಸ್ಸಿನಲ್ಲಿ ಈ ಸಂಗತಿಯೂ ಮುಖ್ಯ ಪಾತ್ರ ವಹಿ ಸಿದೆ. ಗುಜರಾತ್ 13 ಪಂದ್ಯಗಳಲ್ಲಿ ಸೋತದ್ದು ಮೂರನ್ನು ಮಾತ್ರ. 11 ಗೆಲುವು, 22 ಅಂಕಗಳಿಗೆ ಕೈಚಾಚು ವುದು ಪಾಂಡ್ಯ ಪಡೆಯ ಯೋಜನೆ. ಯಾವುದೇ ಒತ್ತಡ ಇಲ್ಲದಿರುವುದರಿಂದ ಗುಜರಾತ್ಗೆ ಇದು ಅಸಾಧ್ಯವೂ ಅಲ್ಲ.
ಗುಜರಾತ್ ಟೈಟಾನ್ಸ್ ನಿರ್ದಿಷ್ಟ ಆಟಗಾರರನ್ನು ನಂಬಿ ಕುಳಿತಿರುವ ತಂಡವಲ್ಲ. ಇಲ್ಲಿ ಎಲ್ಲರೂ ಆಡುತ್ತಾರೆ. ಯಾರೇ ವೈಫಲ್ಯ ಅನುಭವಿಸಿದರೂ ತಂಡದ ಯಶಸ್ಸಿಗೆ ಒಬ್ಬರಲ್ಲ ಒಬ್ಬರು ಟೊಂಕ ಕಟ್ಟುತ್ತಾರೆ. ತಂಡದ ಯಶಸ್ಸಿನ ಹಿಂದೆ ಫೀಲ್ಡಿಂಗ್ ಯಶಸ್ಸಿನ ಪಾಲು ಕೂಡ ದೊಡ್ಡದಿದೆ. ಆರ್ಸಿಬಿ ಕಾಂಬಿನೇಶನ್ ಹೇಗಿರಬೇಕು ಎಂಬು
ದನ್ನು ವಿಶ್ಲೇಷಿ ಸುವುದರಲ್ಲಿ ಅರ್ಥವಿಲ್ಲ. ಗೆಲುವಿಗೆ ಯಾರೂ ಅನಿವಾರ್ಯರಲ್ಲ!
ಡೆಲ್ಲಿ ಫಲಿತಾಂಶ ನಿರ್ಣಾಯಕ
ಒಂದು ವೇಳೆ ಗೆದ್ದರೂ ಆರ್ಸಿಬಿ ಪ್ಲೇ ಆಫ್ ಪ್ರವೇಶಕ್ಕಾಗಿ ಮೇ 21ರ ತನಕ ಕಾಯಬೇಕು. ಅಂದು 4ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿದೆ. ಇಲ್ಲಿ ಡೆಲ್ಲಿ ಸೋತರೆ ಆರ್ಸಿಬಿ ಮುಂದಿನ ಸುತ್ತಿಗೆ ತೇರ್ಗಡೆಯಾಗಲಿದೆ. ಆಗ ರನ್ರೇಟ್ ಗಣನೆಗೆ ಬರುವುದಿಲ್ಲ. ಇಲ್ಲಿ 16 ಅಂಕಗಳ ಅವಕಾಶ ಇರುವುದು ಆರ್ಸಿಬಿ ಮತ್ತು ಡೆಲ್ಲಿಗೆ ಮಾತ್ರ ಎಂಬುದನ್ನು ಗಮನಿಸಬೇಕು.
ಇಲ್ಲಿ ಇನ್ನೂ ಒಂದು ಲೆಕ್ಕಾಚಾರವಿದೆ. ಅಕಸ್ಮಾತ್ ಆರ್ಸಿಬಿ ಮತ್ತು ಡೆಲ್ಲಿ ಎರಡೂ ಅಂತಿಮ ಲೀಗ್ ಪಂದ್ಯದಲ್ಲಿ ಸೋತರೆ ಇತ್ತಂಡಗಳ ಅಂಕ 14ಕ್ಕೆ ಸೀಮಿತಗೊಳ್ಳುತ್ತದೆ. ಜತೆಗೆ ಇನ್ನೂ 2 ತಂಡಗಳಿಗೆ 14 ಅಂಕಗಳ ಅವಕಾಶ ತೆರೆಯಲ್ಪಡುತ್ತದೆ. ಪೈಪೋಟಿ ತೀವ್ರಗೊಳ್ಳುತ್ತದೆ. ಇದಕ್ಕೆಲ್ಲ ಒಂದೇ ಮಾನದಂಡ, ಅದು ರನ್ರೇಟ್. ಆಗ ಆರ್ಸಿಬಿ ಪ್ಲೇ ಆಫ್ ಆಸೆ ಬಿಡಬೇಕಾಗುತ್ತದೆ!