ನಾಯಿಯಿಂದ ಕಲಿಯಬೇಕಿರುವ ಜೀವನ ಪಾಠ
Team Udayavani, Nov 18, 2020, 5:45 AM IST
ಸಾಂದರ್ಭಿಕ ಚಿತ್ರ
ಒಬ್ಬ ಝೆನ್ ಗುರು ಮತ್ತು ಅವರ ಹತ್ತಾರು ಶಿಷ್ಯರು ನದಿಯಲ್ಲಿ ಸ್ನಾನಕ್ಕಿಳಿದಿದ್ದರು. ಜಳಕ ಮುಗಿಸಿ ದಡವೇರಿ ಮುನ್ನಡೆಯುವಾಗ ಸುತ್ತಲೂ ಶಿಷ್ಯ ಗಡಣ. ಅವರಲ್ಲೊಬ್ಬ ಪ್ರಶ್ನಿಸಿದ, “ಪರಮ ಸತ್ಯವನ್ನು ಅರಿತು ಕೊಳ್ಳಬೇಕಾದರೆ ನಾನೇನು ಮಾಡಬೇಕು?’ “ಓ ಅದೋ ಆ ನಾಯಿಯಿಂದ ಕಲಿ ತುಕೋ’ ಅಂದರು ಗುರುಗಳು.
ಶಿಷ್ಯನಿಗೆ ಕಪಾಳಕ್ಕೆ ಬಾರಿಸಿದ ಹಾಗಾ ಯಿತು. ತನ್ನ ಪ್ರಶ್ನೆಯನ್ನು ಗುರುಗಳು ನಿರ್ಲಕ್ಷಿ ಸಿದರು ಎಂದು ಭಾವಿಸಿದ ಆತ, “ಆ ನಾಯಿ ಯಿಂದ ನಾನು ಏನನ್ನು ಕಲಿಯಲು ಸಾಧ್ಯ’ ಎಂದು ಮರುಪ್ರಶ್ನಿಸಿದ.
ಗುರುಗಳು ಏನನ್ನೂ ಹೇಳದೆ ಹತ್ತು ಹೆಜ್ಜೆ ಮುನ್ನಡೆದರು. ಶಿಷ್ಯ ಮತ್ತೆ ಕೇಳಿದ, “ನಾನು ಆ ನಾಯಿಯಿಂದ ಕಲಿಯಬೇಕಾದ್ದು ಏನೂ ಇಲ್ಲ , ದಯವಿಟ್ಟು ಹೇಳಿ ಗುರುಗಳೇ’.
ಗುರುಗಳು ಮರಳಿನಲ್ಲಿ ಆಟವಾಡುತ್ತಿದ್ದ ಇನ್ನೊಂದು ನಾಯಿಯನ್ನು ತೋರಿಸಿ ಹೇಳಿದರು, “ಆ ನಾಯಿ ಬೇಡವಾದರೆ ಈ ನಾಯಿಯಿಂದ ಕಲಿತುಕೋ’ ಎಂದರು.
“ಗುರುಗಳೇ ನೀವು ತಮಾಷೆ ಮಾಡುತ್ತಿದ್ದೀರಿ. ತಿಂದು, ಮಲಗಿ, ಮರಿ ಹಾಕು ವುದರಲ್ಲೇ ಜೀವನ ಕಳೆಯುವ ನಾಯಿಯಿಂದ ಕಲಿಯು ವುದೇನಿದೆ? ಆ ಜಂಜಾಟ ದಿಂದ ಮುಕ್ತಿ ಪಡೆಯು ವುದನ್ನು ಅರಿಯ ಲೆಂದೇ ನಿಮ್ಮ ಬಳಿ ಬಂದೆ’. “ನೀನು ಕೂಡ ಉಣ್ಣು , ನಿದ್ರಿಸು; ಅಷ್ಟೇ ಸಾಕು’ ಎಂದರು ಗುರುಗಳು, ನಡಿಗೆ ನಿಲ್ಲಿಸದೆ. ಶಿಷ್ಯ ಮಾತು ನಿಲ್ಲಿಸಿ ಮೂಕನಾದ.
ನಾವು ಪ್ರತೀ ದಿನ ಊಟ ಮಾಡುತ್ತೇವೆ, ನಿದ್ದೆ ಮಾಡುತ್ತೇವೆ. ಆದರೆ ಅದನ್ನು ಊಟ, ನಿದ್ದೆ ಎಂದು ಕರೆಯಲು ಸಾಧ್ಯವೇ? ಇಲ್ಲ , ಅಸಾಧ್ಯ. ಯಾಕೆ ಅಂದರೆ ನಾವು ಊಟ ಮಾಡುವಾಗ ಸಂಪೂರ್ಣವಾಗಿ ಊಟ ದಲ್ಲಷ್ಟೇ ವ್ಯಸ್ತರಾಗಿರುವುದಿಲ್ಲ. ಮನಸ್ಸು ಹತ್ತಾರು ಆಲೋಚನೆಗಳಲ್ಲಿ ತೇಲಾಡುತ್ತಿ ರುತ್ತದೆ. ಎಡಗೈ ಬೆರಳುಗಳು ಮೊಬೈಲ್ನಲ್ಲಿ ಗೀಚುತ್ತಿರುತ್ತವೆ. ಇಲ್ಲವಾದರೆ ಕಣ್ಣುಗಳು ಟಿವಿಯಲ್ಲಿ ನೆಟ್ಟಿರುತ್ತವೆ. ಅನ್ನ ಯಾಂತ್ರಿಕವಾಗಿ ಕೈಯಿಂದ ಬಾಯಿಗೆ, ಅಲ್ಲಿಂದ ಜಠರಕ್ಕೆ ಸಾಗುತ್ತಿರುತ್ತದೆ. ಇದನ್ನು ಸಂಪೂರ್ಣ ಊಟ ಎನ್ನಲು ಸಾಧ್ಯವೇ?
ಪ್ರತೀ ಕ್ಷಣವೂ ನಾವಾಗುವುದೇ ಬದುಕು. ಬದುಕು ಪ್ರತೀ ಕ್ಷಣವೂ ಮುಮ್ಮುಖವಾಗಿ ಚಲನಶೀಲ. ಈ ಹಿಂದೆ ಯಾವುದು ನಾವಾಗಿರಲಿಲ್ಲವೋ ಅದು ಕ್ಷಣ ಕ್ಷಣಕ್ಕೂ ನಾವಾಗಿ ಆವಿರ್ಭಾವಗೊಳ್ಳುತ್ತ ಹೋಗು ವುದು ಬದುಕು. ಸೃಷ್ಟಿಯ ಜತೆಗೆ ಒಂದಾಗುತ್ತ ಹೋಗುವುದು. ಪ್ರತಿಯೊಬ್ಬನೂ ಈ ಒಂದಾಗುವ ಅನುಭವವನ್ನು ಹೊಂದು ವುದಕ್ಕಾಗಿ ಗೊತ್ತಿಧ್ದೋ ಗೊತ್ತಿಲ್ಲದೆಯೋ ಹಾತೊರೆಯುತ್ತಾನೆ.
ಆದರೆ ಒಂದು ತುತ್ತು ಅನ್ನ ನಮ್ಮೊಳಗೆ ಪ್ರವೇಶಿಸುವುದನ್ನು, ಅದರ ರುಚಿಯನ್ನು, ಅದರ ಮಹೋನ್ನತಿಕೆಯನ್ನು ಸಂಪೂರ್ಣ ವಾಗಿ ಅನುಭವಿಸಲು ತಿಳಿಯದ ನಾವು ಇಡಿಯ ವಿಶ್ವದ ಜತೆಗೆ ಒಂದಾಗುವುದು ಹೇಗೆ! ತುತ್ತು ಅನ್ನದ ಮೂಲಕ ವಿಶ್ವದ ಸಣ್ಣ ತುಣುಕೊಂದು ನಿಮ್ಮೊಳ ಗನ್ನು ಪ್ರವೇಶಿಸುತ್ತದೆ. ಅದಕ್ಕಿಂತ ಪವಾಡ ಸದೃಶ ವಾದದ್ದು ಇನ್ನೇನಿದೆ!
ನಿದ್ದೆಯೂ ಹೀಗೆಯೇ. ನಾವು ಆಳವಾದ ನಿದ್ದೆಯಲ್ಲಿರುವಾಗ ನಮ್ಮ ಅಸ್ತಿತ್ವ ಶೂನ್ಯವಾಗಿರುತ್ತದೆ, ನಾವು ಸೃಷ್ಟಿ ಯೊಂದಿಗೆ ಒಂದಾಗಿರುತ್ತೇವೆ. ಆದರೆ ನಮ್ಮಲ್ಲನೇಕರಿಗೆ ಆಳವಾದ ನಿದ್ದೆ ಬರುವುದಿಲ್ಲ. ಕನಸುಗಳು ಕಾಡುತ್ತವೆ, ಭೂತಕಾಲದ ಮತ್ತು ಭವಿಷ್ಯತ್ತಿನ ಆಲೋಚನೆಗಳು, ಚಿಂತೆಗಳು ಗೊಣಗಾಟಗಳಾಗಿ ಹೊರಬೀಳುತ್ತಿರುತ್ತವೆ.
ಪ್ರತೀ ಕ್ಷಣವೂ ನಾವೇನನ್ನು ಮಾಡುತ್ತಿ ರುತ್ತೇವೆಯೋ ಅದಕ್ಕೆ ಅರ್ಪಿಸಿಕೊಳ್ಳಬೇಕು. ಅನ್ನ ಉಣ್ಣುತ್ತಿರುವಾಗ ವಿಶ್ವದ ಒಂದು
ಭಾಗ ನಮ್ಮೊಳಗೆ ಸೇರಿಕೊಳ್ಳುತ್ತದೆ. ನಿದ್ರಿಸುವಾಗ ನಾವು ವಿಶ್ವದೊಳಗೆ ಸೇರಿಕೊಳ್ಳುತ್ತೇವೆ. ಇವು ನೂರಕ್ಕೆ ನೂರು ಅರ್ಪಣೆಯೊಂದಿಗೆ ಸಾಧ್ಯ ವಾದಾಗ ಸೃಷ್ಟಿಯ ಉನ್ನತ ಸ್ತರದ ಅನುಭವಗಳ ಬಾಗಿಲುಗಳು ನಮ್ಮೆದುರು ತೆರೆದುಕೊಳ್ಳುತ್ತವೆ.