ಒಳಗನ್ನು ತುಂಬುವುದು ಹೊಸ ಬೆಳಕು
Team Udayavani, Mar 5, 2021, 6:30 AM IST
ಒಬ್ಬ ದೊರೆಗೆ ವಯಸ್ಸಾಗುತ್ತ ಬಂದಿತ್ತು, ಹಾಗಾಗಿ ಉತ್ತರಾಧಿಕಾರಿಯನ್ನು ಆರಿಸಲು ಬಯಸಿದ. ಸಾಮಾನ್ಯವಾಗಿ ಇದು ಸುಲಭವಾದ ಕೆಲಸ – ಹಿರಿಯ ಯುವರಾಜನಿಗೇ ಪಟ್ಟ. ಆದರೆ ಇಲ್ಲೊಂದು ಸಮಸ್ಯೆಯಿತ್ತು. ಈ ರಾಜ ದಂಪತಿಗೆ ತ್ರಿವಳಿಗಳು ಜನಿಸಿದ್ದರು. ಅವರು ಮೂವರು ಕೂಡ ಅನುರೂಪರು ಮಾತ್ರವೇ ಅಲ್ಲ; ತದ್ರೂಪಿಗಳು. ರೂಪ, ಆಕಾರ, ಸಾಮರ್ಥ್ಯ, ಶೌರ್ಯ – ಎಲ್ಲದರಲ್ಲೂ ಸರಿಸಮಾನರಾಗಿದ್ದರು. ಎಷ್ಟೋ ಬಾರಿ ತಾಯ್ತಂದೆಯರೇ ಗೊಂದಲಗೊಂಡದ್ದಿತ್ತು. ಹೀಗಾಗಿ ಉತ್ತರಾಧಿ ಕಾರಿಯನ್ನು ಆರಿಸುವ ಗೊಂದಲ.
ರಾಜ ಕೊನೆಗೆ ನಾಡಿನ ಹಿರಿಯ ವಿದ್ವಾಂಸ ರೊಬ್ಬರನ್ನು ಕರೆಯಿಸಿ ಸಲಹೆ ಕೇಳಿದ. ಮೂವರು ಮಕ್ಕಳಿಗೆ ನಿರ್ದಿಷ್ಟ ಮೊತ್ತದ ಹಣ ನೀಡಿ ಅದರಿಂದ ಏನನ್ನಾದರೂ ಖರೀದಿಸಿ ತಮ್ಮ ತಮ್ಮ ಅರಮನೆಗಳನ್ನು ಒಂದಿಂಚು ಕೂಡ ಬಿಡದ ಹಾಗೆ ಭರ್ತಿ ಮಾಡಬೇಕು ಎಂಬ ಸ್ಪರ್ಧೆ ಏರ್ಪಡಿಸಲು ಆ ವಿದ್ವಾಂಸರು ತಿಳಿಸಿದರು. ಯಾರು ಅತ್ಯುತ್ತಮ ವಸ್ತುವಿನಿಂದ ಅರಮನೆಯನ್ನು ತುಂಬಿ ಸುತ್ತಾರೆಯೋ ಅವರು ವಿಜಯಿ.
ಸ್ಪರ್ಧೆಯ ದಿನ ಬಂತು. ರಾಜ ಮೂವರು ಮಕ್ಕಳಿಗೆ ಸಮ ಪ್ರಮಾಣದ ಹಣ ಕೊಟ್ಟು ಸ್ಪರ್ಧೆಯ ನಿಯಮಗಳನ್ನು ತಿಳಿಸಿದ. ಮೂವರು ಕೂಡ ಪಂಥವನ್ನು ಸ್ವೀಕರಿಸಿ ಹೊರಟರು.
ಮೊದಲನೆಯ ಯುವರಾಜ ತುಂಬಾ ಹೊತ್ತು ಆಲೋಚಿಸಿದ. ಹೂವು ಗಳು, ಚಿನ್ನ, ಬೆಳ್ಳಿ ಇತ್ಯಾದಿ ಯಾವುದನ್ನು ಅರಮನೆ ತುಂಬುವಷ್ಟು ಖರೀದಿಸಲು ಒದಗಿಸಲಾದ ಮೊತ್ತ ಸಾಲುವಷ್ಟಿರ
ಲಿಲ್ಲ. ಕೊನೆಗೆ ನಗರಾಡಳಿತದಿಂದ ಕಸ ತಂದು ತುಂಬಿಸಿದರೆ ಹೇಗೆ ಎಂದು ಹೊಳೆಯಿತು. ಕಸವನ್ನು ಅವರು ಎಲ್ಲೋ ಎಸೆಯುವ ಬದಲು ಅರಮನೆಗೆ ತಂದು ಸುರಿದರಾಯಿತಲ್ಲ! ಹಾಗೆಯೇ ಮಾಡಿಸಿದ.
ಎರಡನೆಯವನಿಗೆ ಈಗ ಚಿಂತೆ ಹೆಚ್ಚಿತು. ಮೊದಲನೆಯವನ ಅರಮನೆ ಭರ್ತಿಯಾಗಿದೆಯಲ್ಲ! ಆಗಷ್ಟೇ ಮಳೆಗಾಲ ಆರಂಭವಾಗಿತ್ತು; ಕೆಸರು ಮಣ್ಣು ತುಂಬಿಸಿದರೆ ಹೇಗೆ ಎಂದು ಯೋಚಿಸಿದ. ಆಳುಗಳನ್ನು ಕರೆಯಿಸಿ ಕೂಲಿಯನ್ನೂ ಕೊಡದೆ ಆ ಕೆಲಸ ಮಾಡಿಸಿದ. ಅವನ ಅರಮನೆಯೂ ಭರ್ತಿಯಾಯಿತು. . ಮೂರನೆಯವನು . ಮಾತ್ರ ಏನೂ ಮಾಡದೆ ಸುಮ್ಮನಿದ್ದ.
ಮರುದಿನ ಬೆಳಗಾ ದಾಗ ದೊರೆ ಅರಮನೆ ಗಳನ್ನು ವೀಕ್ಷಿಸಲು ಬಂದ. ಮೊದಲನೆ ಯವನ ಅರಮನೆ ಹರ ದಾರಿ ದೂರದಿಂದಲೇ ನಾತ ಬೀರುತ್ತಿತ್ತು. ಅರಸ ಮೂಗುಮುಚ್ಚಿ ಕೊಂಡು ದೂರ ದಿಂದಲೇ ಆಚೆ ಹೋದ. ಎರಡನೆ ಯವನ ಅರಮನೆ ಪೂರ್ತಿ ಕೊಚ್ಚೆ.
ಕೊನೆಗೆ ಎಲ್ಲರೂ ಸೇರಿಕೊಂಡು ಮೂರನೆಯವನ ಅರಮನೆಯತ್ತ ಹೊರಟರು. ಅವನ ಅರಮನೆ ಖಾಲಿ ಯಾಗಿತ್ತು! ಒಳಗೆ ಇದ್ದ ಪೀಠೊಪಕರಣ ಇತ್ಯಾದಿಗಳನ್ನೂ ಅವನು ರಾತೋರಾತ್ರಿ ಖಾಲಿ ಮಾಡಿಸಿದ್ದ. “ಖಾಲಿ ಇದೆಯಲ್ಲ’ ಎಂದ ರಾಜ. “ಒಳಗೆ ಹೋಗಿ, ಸೂಕ್ಷ್ಮವಾಗಿ ನೋಡಿ’ ಎಂದ ಯುವರಾಜ. “ಏನೂ ಇಲ್ಲ. ನೀನು ಸೋತಂತಾ ಯಿತು’ ಎಂದರು ಉಳಿದಿಬ್ಬರು ಯುವರಾಜರು.
“ಇಲ್ಲ. ಒಳಗೆ ಗಮನಿಸಿ. ನೂರಾರು ನಂದಾದೀಪಗಳನ್ನು ಉರಿಸಿ ಇಟ್ಟಿದ್ದೇನೆ. ಅವುಗಳ ಬೆಳಕಿನಿಂದ ನನ್ನ ಅರಮನೆ ತುಂಬಿದೆ. ಇಗೋ ಎಣ್ಣೆ-ಬತ್ತಿಗಳಿಗೆ ಖರ್ಚಾಗಿ ಮಿಕ್ಕಿದ ಹಣ’ ಎಂದು ಕೊಟ್ಟದ್ದರಲ್ಲಿ ಬಹುಪಾಲನ್ನು ತಂದೆಗೆ ಹಿಂದಿರುಗಿಸಿದ ಮೂರನೇ ಯುವ ರಾಜ. ಅವನಿಗೇ ಪಟ್ಟವಾಯಿತು ಎಂದು ಬೇರೆ ಹೇಳಬೇಕಿಲ್ಲವಲ್ಲ!
ಸಾಧನೆಯ ದಾರಿಯಲ್ಲಿ ನಡೆಯುತ್ತ ಕಾಮ – ಕ್ರೋಧಾದಿಗಳು, ದುರ್ಗುಣ ಗಳು ಇವನ್ನೆಲ್ಲ ತೊರೆದ ಬಳಿಕ ನಮ್ಮೊ ಳಗು ಖಾಲಿಯಾಗುವುದಲ್ಲ; ಅಲ್ಲಿ ಮೆಲುವಾಗಿ ನಿರಂತರ ಬೆಳಗುವ ಬೆಳಕು ತುಂಬಿಕೊಳ್ಳುತ್ತದೆ.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ
Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ