ಸತ್ಯಕ್ಕಾಗಿ ನೇಣು, ಸುಳ್ಳಿಗಾಗಿ ಪಾರು!
Team Udayavani, Jan 19, 2021, 5:50 AM IST
ಒಂದಾನೊಂದು ಕಾಲದಲ್ಲಿ ಒಂದು ರಾಜ್ಯದಲ್ಲಿ ಒಬ್ಬ ಅರಸನಿದ್ದ. ಎಲ್ಲ ರಾಜರ ಹಾಗೆ ಅವನ ಆಸ್ಥಾನದಲ್ಲಿಯೂ ಘನ ವಿದ್ವಾಂಸರು, ಮೇಧಾವಿ ಮಂತ್ರಿಗಳಿ ದ್ದರು. ಒಂದು ಶುಭ ಮುಂಜಾನೆ ಅರಸನಿಗೆ ಒಂದು ಆಲೋಚನೆ ಬಂತು – ರಾಜ್ಯದಲ್ಲಿಡೀ ಸತ್ಯ ಮಾತ್ರವೇ ಇರ ಬೇಕು; ಸುಳ್ಳು, ಅನೈತಿಕ, ನಕಲಿಗಳನ್ನೆಲ್ಲ ನಿಷೇಧಿಸಬೇಕು.
ಆ ದಿನ ರಾಜ ಆಸ್ಥಾನ ವಿದ್ವಾಂಸರ ಎದುರು ತನ್ನ ಆಲೋಚನೆಯನ್ನು ಮಂಡಿಸಿದ. ಅವರೆಲ್ಲರೂ ತತ್ಕ್ಷಣ ಒಪ್ಪಿದರು. ಅನೇಕ ರಾಜರು ಕೆಡುವುದು ಇಂತಹ ವಿದ್ವಾಂಸರು, ಮಂತ್ರಿಗಳಿಂದ. ರಾಜ ಏನು ಹೇಳುತ್ತಾನೆಯೋ ಅದನ್ನು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳು ವುದು, ಎಲ್ಲದಕ್ಕೂ ಉಘೇ ಉಘೇ ಎನ್ನು ವುದು ಇಂಥವರ ಹವ್ಯಾಸ. ನಿಜವಾದ ಮೇಧಾವಿಗಳು, ಮುತ್ಸದ್ದಿಗಳು, ಹಿತ ಚಿಂತಕರು ಯಾವುದು ಹಿತವೋ ಅದನ್ನು ಮಾತ್ರ ಬೆಂಬಲಿಸಬೇಕು, ಅಹಿತವಾದವು ಗಳನ್ನು ನಿರಾಕರಿಸಬೇಕು. ದುರದೃಷ್ಟವ ಶಾತ್ ನಮ್ಮ ಕಥಾನಾಯಕ ರಾಜನ ಆಸ್ಥಾನದ ವಿದ್ವಾಂಸರು, ಮಂತ್ರಿಗಳು ಹೊಗಳುಭಟರಷ್ಟೇ ಆಗಿದ್ದರು. ರಾಜನ ಆಲೋಚನೆಗೆ ಅವರೆಲ್ಲರಿಂದಲೂ ತತ್ಕ್ಷಣದ ಬೆಂಬಲ ಸಿಕ್ಕಿತು.
ಅವರಲ್ಲೊಬ್ಬ ಮಂತ್ರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ. “ನಾಳೆಯಿಂದ ಯಾರು ಸುಳ್ಳನ್ನಾಡುತ್ತಾರೆಯೋ ಅವ ನನ್ನು ಪೇಟೆ ಮಧ್ಯದ ಸಾರ್ವಜನಿಕ ಸ್ಥಳದಲ್ಲಿ ನೇಣು ಹಾಕಬೇಕು. ಅನೃತ ವನ್ನಾಡುವವರಿಗೆ ಇದೊಂದು ಕಠಿನ ಎಚ್ಚರಿಕೆಯಾಗಬೇಕು. ಈಗಲೇ ಡಂಗುರ ಸಾರಿಸಿಬಿಡಿ ದೊರೆಯೇ’ ಎಂದ ಆತ.
ವಿದ್ವಾಂಸರು, ಮಂತ್ರಿಗಳಿರುವ ಹಾಗೆ ಆಸ್ಥಾನದಲ್ಲಿ ಒಬ್ಬ ವಿದೂಷಕನೂ ಇದ್ದ. ಎಷ್ಟೋ ವಿದೂಷಕರು ನಿಜವಾಗಿ ಬಲು ಮೇಧಾವಿಗಳಾಗಿರುತ್ತಾರೆ. ತಮಾಶೆ ಮಾಡಿ ನಗಿಸುತ್ತಲೇ ವಿಹಿತವಾದುದನ್ನು ಹೃದಯಕ್ಕೆ ನಾಟಿಬಿಡುತ್ತಾರೆ. ಇವನೂ ಅಂಥವರಲ್ಲಿ ಒಬ್ಬ.
ವಿದೂಷಕ ಹೇಳಿದ, “ದೊರೆಯೇ, ನೇಣುಗಂಬ ಸಿದ್ಧವಾಗಲಿ. ನಾಳೆ ನೇಣಿಗೇರುವ ಮೊದಲನೆಯ ವ್ಯಕ್ತಿ ನಾನೇ ಆಗಿರುತ್ತೇನೆ. ಬೆಳಗ್ಗೆ ಎಲ್ಲರೂ ಸಿದ್ಧವಾಗಿರಿ.’
ಎಲ್ಲರಿಗೂ ಆಶ್ಚರ್ಯವಾಯಿತು. “ಏನಯ್ನಾ ಹೀಗೆ ಹೇಳುತ್ತಿದ್ದೀ’ ಎಂದು ಪ್ರಶ್ನಿಸಿದರು. “ನಾನೇ ನಾಳೆ ಮೊದಲ ನೆಯ ಸುಳ್ಳು ಹೇಳುತ್ತೇನೆ ಮತ್ತು ಅದಕ್ಕಾಗಿ ನಿಮ್ಮಿಂದ ವಧಿಸಲ್ಪಡುವ ಮೊದಲ ವ್ಯಕ್ತಿ ಆಗಿರುತ್ತೇನೆ’ ವಿದೂಷಕ ಪ್ರತ್ಯುತ್ತರಿಸಿದ.
“ಅರೆ ಹುಚ್ಚು ತಗಲಿ ದೆಯೇನಯ್ಯ’ ಎಂದು ಎಲ್ಲರೂ ಒಕ್ಕೊರಲಾಗಿ ಕೇಳಿದರು. “ಅದೇನೋ ನನಗೆ ಗೊತ್ತಿಲ್ಲ. ನಾಳೆ ಬೆಳಗ್ಗೆ ನೇಣುಗಂಬ ಮಾತ್ರ ಸಿದ್ಧವಾಗಿರಲಿ’ ಎಂದು ಹೇಳಿ ವಿದೂಷಕ ಹೊರಟುಹೋದ.
ಮರುದಿನ ಬೆಳಗಾಯಿತು. ಎಲ್ಲರೂ ಬೇಗನೆ ಎದ್ದು ಇದೇನು ವಿಚಿತ್ರ ನಡೆಯಲಿದೆ, ನೋಡಿಯೇ ಬಿಡೋಣ ಎಂದು ಪೇಟೆಯ ಮಧ್ಯದಲ್ಲಿ ಹಾಜ ರಾದರು. ನೇಣುಗಂಬ ಸಿದ್ಧವಾಗಿತ್ತು. ಊರಿನ ಹೆಬ್ಟಾಗಿಲು ತೆರೆದಾಗ ವಿದೂಷಕ ಒಂದು ಕತ್ತೆಯ ಮೇಲೇರಿ ಒಳಗೆ ಬಂದ. “ಎಲ್ಲಿಗೆ ಹೋಗುತ್ತಿದ್ದೀಯಯ್ಯ’ ಎಂದು ಅರಸ ಪ್ರಶ್ನಿಸಿದ.
“ನಾನು ನೇಣುಗಂಬದತ್ತ ಹೋಗುತ್ತಿ ದ್ದೇನೆ’ ಎಂದ ವಿದೂಷಕ.
ಎಲ್ಲರೂ ಅವಾಕ್ಕಾದರು. ವಿದೂಷಕ ವಿಚಿತ್ರ ಸಮಸ್ಯೆಯೊಂದನ್ನು ಸೃಷ್ಟಿಸಿದ್ದ. “ನಾನು ನೇಣುಗಂಬದತ್ತ ಹೋಗುತ್ತೇನೆ. ನನ್ನನ್ನು ನೇಣಿಗೇರಿಸಿ’ ಎನ್ನುವ ಅವನ ಮಾತು ನಿಜ. ಅವನನ್ನು ನೇಣಿಗೇರಿಸಿದರೆ ಸತ್ಯ ಹೇಳಿದ್ದಕ್ಕಾಗಿ ಕೊಂದಂತೆ ಆಗುತ್ತದೆ. ಕೊಲ್ಲದೆ ಇದ್ದರೆ ಅವನಾಡಿದ ಮಾತು ಸುಳ್ಳಾಗುತ್ತದೆ, ಸುಳ್ಳಾಡಿದವನಿಗೆ ಶಿಕ್ಷೆ ಕೊಡದ ಹಾಗಾಗುತ್ತದೆ!
ಅರಸನಿಂದಾದಿಯಾಗಿ ಎಲ್ಲೆಲ್ಲೂ ಮೌನ ತಾಂಡವವಾಡಿತು. ಈ ಸಮಸ್ಯೆಗೆ ಪರಿಹಾರ ಏನು ಎಂಬುದು ಹೊಳೆಯದೆ ಎಲ್ಲರೂ ನಿಬ್ಬೆರಗಾದರು. ವಾಸ್ತವದ ಚಾಟಿಯೇಟಿಗೆ ಅಸಹಾಯರಾದರು. ಈಗ ವಿದೂಷಕ ಗಹಗಹಿಸಿ ನಕ್ಕ. “ನೀವೆಲ್ಲರೂ ಮೂರ್ಖರು. ಸುಳ್ಳು, ಕಪಟ ಎಲ್ಲವೂ ಬದುಕಿನ ಅವಿಭಾಜ್ಯ ಅಂಗಗಳು. ಸತ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು’ ಎಂದು ಎಲ್ಲರ ಕಣ್ತೆರೆಸಿದ.
(ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ