ಬಲವಾದ ಗಾಳಿ ಭದ್ರವಾಗಿ ಬೇರೂರಲು ಸಿಕ್ಕಿದ ಅವಕಾಶ!
Team Udayavani, Oct 27, 2020, 6:10 AM IST
ನಾವು ಈ ಜೀವನವನ್ನು ಸೋಲು ಮತ್ತು ಗೆಲುವು, ಏಳು ಮತ್ತು ಬೀಳುಗಳ ಕೂಟವಾಗಿ ಕಾಣುತ್ತೇವೆ. ಆದರೆ ನಿಜಕ್ಕೂ ಯಾವುದು ಯಶಸ್ಸು? ಯಾವುದು ವೈಫಲ್ಯ? ಯಶಸ್ಸಿನ ಪರಿಕಲ್ಪನೆ ಒಬ್ಬರಿಂದ ಇನ್ನೊಬ್ಬರಿಗೆ ಬದಲಾ ಗುತ್ತದೆ. ಎಲ್ಲರಿಗೂ ಸ್ವೀಕೃತವಾಗುವ ಒಂದು ಮಾದರಿ ಯಶಸ್ಸು ಎಂಬುದಿದೆಯೇ?
ನಮ್ಮ ಪ್ರತಿಯೊಂದು ಪರಿಕಲ್ಪನೆ, ಯೋಚನೆ, ಭಾವನೆ, ಮೌಲ್ಯ – ಯಾವುದೂ ನಮ್ಮದಲ್ಲ; ಎಲ್ಲವೂ ಎರವಲು ಪಡೆದು ಕೊಂಡದ್ದು. ಹಾಗೆಯೇ ಯಶಸ್ಸಿನ ಕಲ್ಪನೆಯೂ ಮೂಲತಃ ನಮ್ಮದಲ್ಲ. ನಾವು ಬೆಳೆದುಬಂದ ಸಂಸ್ಕೃತಿ, ಧರ್ಮ, ಸಮಾಜ ಯಾವುದೋ ಒಂದನ್ನು “ಇದು ಯಶಸ್ಸು’ ಎಂದು ನಾವು ನಂಬುವಂತೆ ನಮ್ಮನ್ನು ರೂಪಿಸಿ ರುತ್ತದೆ. ಹಾಗಾಗಿ ಯಾರದೋ ಕಲ್ಪನೆಯ ಯಶಸ್ಸನ್ನು ನಾವು ಆರಾಧಿಸುವ ಅಗತ್ಯವಿಲ್ಲ. ನಮ್ಮ ಯಶಸ್ಸು ಏನು ಎಂಬುದನ್ನು ನಾವೇ ಕಲ್ಪಿಸಿಕೊಳ್ಳೋಣ. ಅದುವೇ ಮೊತ್ತ ಮೊದಲನೆಯ ಗೆಲುವು. ನಮ್ಮ ಬಾಳುವೆ ಯಲ್ಲಿ ಹರಿದುಬರುವ ಸಂಪತ್ತು ಯಶಸ್ಸಲ್ಲ, ದೊಡ್ಡ ಕಾರು ಕೊಂಡದ್ದು ಗೆಲುವಲ್ಲ, ಅಧಿಕಾರ ಯಶಸ್ಸಲ್ಲ. ನರಕದ ನಡುವೆ ಸಂತೋಷ ದಿಂದ ನಗು ನಗುತ್ತ ನಡೆದು ಹೋಗು ವುದು ನಮ್ಮಿಂದ ಸಾಧ್ಯವಿದ್ದರೆ ಅದು ಯಶಸ್ಸು.
ಬದುಕಿನ ಕ್ಷುಲ್ಲಕ ಘಟನೆ ಗಳನ್ನು ಗುರಿಯಾಗಿ ಹೊಂದಿ ರುವವರಿಗೆ ಸೋಲು ಮತ್ತು ಗೆಲುವು ಎಂಬುದು ಇರುತ್ತದೆ. ಈ ಬದುಕನ್ನು ಸಮಗ್ರ ವಾಗಿ ಕಲ್ಪಿಸಿಕೊಂಡು ಅದನ್ನು ಇನ್ನೊಂದು ದೊಡ್ಡ ಅವಕಾಶ, ಸಾಧ್ಯತೆಯತ್ತ ಸೋಪಾನ ವಾಗಿ ಕಾಣುವವನಿಗೆ ಈ ಬದುಕಿನಲ್ಲಿ ಸೋಲು ಎಂಬುದೇ ಇರುವುದಿಲ್ಲ. ಆಗ ಎಲ್ಲವೂ ಕಲಿಯುವ ಅವಕಾಶವಾಗಿರುತ್ತವೆ.
ಒಬ್ಬ ರೈತನಿದ್ದ. ಪ್ರತೀ ಬಾರಿಯೂ ನೈಸರ್ಗಿಕ ಏರುಪೇರುಗಳಿಂದ ನಿರೀಕ್ಷಿಸಿದಷ್ಟು ಬೆಳೆ ಬಾರದೆ ಅವನಿಗೆ ನಿರಾಶೆ ಆಗುತ್ತಿತ್ತು. ಒಂದು ಬಾರಿ ಆತ ರೋಸಿಹೋಗಿ ದೇವರನ್ನು ಕರೆದು ಹೇಳಿದ, “ದೇವರೇ ನಿನಗೆ ನನ್ನ ಕಷ್ಟ ಗೊತ್ತಿಲ್ಲ. ಪ್ರತೀ ಬಾರಿಯೂ ನೀನು ಅಕಾಲದಲ್ಲಿ ಕೈಗೊಳ್ಳುವ ತೀರ್ಮಾನಗಳಿಂದ ಬೆಳೆ ನಷ್ಟವಾಗುತ್ತಿದೆ. ಪ್ರಕೃತಿಯ ನಿಯಂತ್ರಣ ಶಕ್ತಿಯನ್ನು ನನಗೆ ಕೊಡು, ರೈತರಿಗೆ ಅನುಕೂಲಕರ ಹವಾಮಾನ ಹೇಗಿರಬೇಕು ಎಂಬುದನ್ನು ನಿನಗೆ ಕಲಿಸಿಕೊಡುತ್ತೇನೆ’.
ದೇವರು ತಥಾಸ್ತು ಎಂದುಬಿಟ್ಟ. ಹಾಗೆ ಆ ವರ್ಷ ಪ್ರಕೃತಿಯ ನಿಯಂತ್ರಣ ಶಕ್ತಿ ಆ ರೈತನ ಕೈಗೆ ಬಂತು. ರೈತ ಮಳೆ ಬರಲಿ ಎಂದುಕೊಂಡ. ಗದ್ದೆಯಲ್ಲಿ ನೀರು ತುಂಬಿದಾಕ್ಷಣ ಸಾಕು ಎಂದ. ಭತ್ತದ ಸಸಿಗಳು ಚೆನ್ನಾಗಿ ಬಂದವು. ಆಗ ರೈತ ಇನ್ನು ಬಿಸಿಲು ಬರಲಿ ಎಂದು ಕೊಂಡ. ಚೆನ್ನಾಗಿ ಬಿಸಿಲು ಕಾದಿತು. ಒಂದು ದಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮೈ ಬೆವರಿತು. ರೈತ ಮೋಡ ಬರಲಿ ಎಂದ. ಮೋಡ ಕವಿಯಿತು. ಕಟಾವಿನ ಸಮಯದಲ್ಲಿ ಹಕ್ಕಿಗಳು ಬರದೇ ಇರಲಿ ಎಂದು ರೈತ ಆಜ್ಞಾಪಿಸಿದ. ಹಾಗೆಯೇ ಆಯಿತು.
ಕೊನೆಯಲ್ಲಿ ಕಟಾವಿಗೆ ಗದ್ದೆಗಿಳಿದಾಗ ರೈತನಿಗೆ ಆಶ್ಚರ್ಯವಾಯಿತು. ಪ್ರತಿಯೊಂದೂ ಆತ ಬಯಸಿದಂತೆಯೇ ಆಗಿತ್ತು. ಆದರೆ ತೆನೆಗಳೇ ಇರಲಿಲ್ಲ. ರೈತ ಮತ್ತೆ ದೇವರನ್ನು ಕರೆದ. “ನಾನು ಎಲ್ಲವನ್ನೂ ನಾನು ಬಯಸಿದ ಪ್ರಕಾರವೇ ಮಾಡಿ ಕೊಂಡಿದ್ದೇನೆ. ಆದರೂ ತೆನೆ ಬಂದಿಲ್ಲವಲ್ಲ!’
ಆಗ ದೇವರು ಹೇಳಿದ, “ನೀನು ಬೇಕಾದಾಗ ಮಳೆ ಬರಿಸಿದೆ. ಬೇಕಾದಾಗ ಬಿಸಿಲನ್ನು ಕರೆದೆ. ಎಲ್ಲವೂ ಚೆನ್ನಾಗಿತ್ತು. ಆದರೆ ನೀನು ಗಾಳಿಯನ್ನು ಮಾತ್ರ ಕರೆದಿಲ್ಲ. ನಾನಾದರೆ ಸೂಕ್ತ ಕಾಲದಲ್ಲಿ ಗಾಳಿ ಬೀಸುವಂತೆ ಮಾಡು ತ್ತಿದ್ದೆ. ಆಗ ಭತ್ತದ ಸಸಿಗಳು ಭದ್ರವಾಗಿ ಬೇರೂರಿ ಬೆಳೆಯುತ್ತಿದ್ದವು. ಈಗ ನಿನ್ನ ಗದ್ದೆಯಲ್ಲಿ ಒಳ್ಳೆಯ ಭತ್ತದ ಹುಲ್ಲು ಬೆಳೆದಿದೆ; ಆದರೆ ಆಳವಾಗಿ ಬೇರೂರದೆ ಕಾಳುಕಟ್ಟಿಲ್ಲ!’
ಸವಾಲುಗಳು ಎದುರಾಗುತ್ತವೆ. ಅವುಗಳೆದುರು ಅಳುತ್ತ ಇರುವುದು ಅಥವಾ ದೃಢ ವಾಗಿ ಸೆಟೆದು ನಿಲ್ಲುವುದು – ಆಯ್ಕೆ ನಮ್ಮದೇ. ಅತ್ಯಂತ ದುರದೃಷ್ಟಕರ ಘಟನೆ ಯನ್ನೂ ನಾವು ಸಮಗ್ರ ಉನ್ನತಿಯ ಕಡೆಗೆ ಸಾಗಲು ಸೋಪಾನವಾಗಿ ಪರಿಭಾವಿಸು ವುದು ನಮ್ಮ ಕೈಯಲ್ಲಿದೆ.