ವಿರಹದುರಿಯ ಬೇಗೆ, ಭಕ್ತಿಯ ಡಾಂಭಿಕತೆಯಲ್ಲಿ ನರ್ತನ


Team Udayavani, Oct 6, 2017, 2:21 PM IST

06-SAP-21.jpg

ವಿರಹ ಮತ್ತು ಭಕ್ತಿಗಳು ಇತ್ತೀಚೆಗೆ ಭರತನಾಟ್ಯ ಕಲಾವಿದರ ಸುರಕ್ಷಿತ ಬಂಡವಾಳವಾಗಿಬಿಟ್ಟಿವೆ. ಇವನ್ನುಳಿದು ಇತರ ರಸ-ಭಾವಗಳತ್ತ ದೃಷ್ಟಿ ಹರಿಸುವವರು ಅಪರೂಪ. ನಮ್ಮ ನಾಡಿನ ನೃತ್ಯಪರಂಪರೆ ಹೀಗೆ ಬರಗಾಲ ಅನುಭವಿಸುತ್ತಿರುವುದು ಏಕೆ?

ಭರತನಾಟ್ಯ ಕಲಾವಿದರಿಗೆ ವಿರಹದುರಿ ಹೆಚ್ಚಾಗಿದೆಯೆನಿಸುತ್ತದೆ…” ಸಾಮಾನ್ಯ ಪ್ರೇಕ್ಷಕರೊಬ್ಬರ ಮಾತುಗಳನ್ನು ಕೇಳಿದಾಕ್ಷಣ ಬೆಚ್ಚಿ ಬಿದ್ದಿದ್ದೆ. ಸಾವರಿಸಿಕೊಂಡರೆ, ನಿಜವೆನಿಸಿತು. “ಇಂದಿನ ವರ್ಣದ ನಾಯಿಕೆ ವಿರಹೋತ್ಕಂಠಿತೆ’ ಎಂಬ ನಿರೂಪಣೆಯ ಜಾಳನ್ನು ಕೇಳಿ, ಅದರ ಜಾಡನ್ನು ಹಿಡಿಯುವಲ್ಲಿಂದ ಮೊದಲ್ಗೊಂಡು ಜಾಡ್ಯ ಹತ್ತಿ ತಲೆ ಚಿಟ್ಟು ಹಿಡಿಯುತ್ತಿತ್ತು. ಬಹುಪಾಲು ಭರತನಾಟ್ಯ ಕಾರ್ಯಕ್ರಮಗಳಲ್ಲಿ, ರಂಗಪ್ರವೇಶಗಳಲ್ಲಿ, ಪರೀಕ್ಷೆಗಳಲ್ಲಿ ವಿರಹದ ಪ್ರದರ್ಶನ ಯಾವ ಮಟ್ಟಿಗೆ ಮುಟ್ಟಿದೆಯೆಂದರೆ ಬೇರೆ ಯಾವ ವಸ್ತುಗಳನ್ನು ಆರಿಸಿದರೂ ಅದು ಅಪಚಾರ ಎಂಬಲ್ಲಿಯ ವರೆಗೆ. ಆಗ ತಾನೇ ಪ್ರಾಯಪ್ರಬುದ್ಧರಾಗುತ್ತಿರುವ, ಕಿಶೋರ ವಯಸ್ಸಿಗೆ ಕಾಲಿಡುವ ಹುಡುಗಿಯರೂ ವಿರಹವನ್ನು ತರಹೇವಾರಿಯಾಗಿ ಎತ್ತಿ ಆಡಿಸುವಷ್ಟು ವಿರಹವು ಪ್ರಸಿದ್ಧ, ಪ್ರಚಲಿತ. ಯಾವ ವರ್ಣ, ಪದಗಳ ಅಭಿನಯದಲ್ಲೂ ವಿರಹ, ವಿರಹ, ವಿರಹ. ಅದನ್ನು ಹೊರತುಪಡಿಸಿದರೆ ವಿರಹೋತ್ಕಂಠಿತೆಯಂತಾಡುವ ವಿಪ್ರಲಬೆ, ಇಲ್ಲವೇ ಖಂಡಿಸುವ ಖಂಡಿತೆ… ಅದೂ ಅಪರೂಪಕ್ಕೆ. ವಿರಹದುರಿ ಹೆಚ್ಚಾಗಿದ್ದಕ್ಕೋ ಏನೋ ಪ್ರೋಷಿತ ಪತಿಕೆ, ಅಭಿಸಾರಿಕೆ, ಸ್ವಾಧೀನಪತಿಕೆಯರು ಸೋಲೊಪ್ಪಿಕೊಂಡು ಎಲ್ಲೋ ಒಂದೆರಡು ಪುಸ್ತಕ-ಪರೀಕ್ಷೆಗಳಲ್ಲಷ್ಟೇ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ. “ಆಟಕ್ಕುಂಟು, ಲೆಕ್ಕಕ್ಕಿಲ್ಲ’ ಎಂಬ ಮಾತು ಇವರನ್ನು ಕಂಡೇ ಹೇಳಿದ್ದಾರೆನಿಸದಿರದು. ಒಟ್ಟಿನಲ್ಲಿ ವಿರಹೋತ್ಕಂಠಿತೆಯೆಂದರೆ ಬಹುತೇಕ ಕಲಾವಿದರಿಗೆ “ಈ ಪರಿಯ ಸೊಬಗಾವ ಬೇರೆ ನಾಯಿಕೆಯಲಿ ನಾಕಾಣೆ’.

ನಮ್ಮ ನಾಡಿನ ನೃತ್ಯಪರಂಪರೆಯಲ್ಲಿ ಹಿಂದೆಂದೂ ಇಲ್ಲದ ಬರಗಾಲ ಇತ್ತೀಚಿನ ದಶಕಗಳಲ್ಲೇ ವ್ಯಾಪಕವಾಗುತ್ತಿದೆ. ಅದನ್ನೇ ಸಂಪತ್ತು, ಪ್ರತಿಭೆ ಎಂದು ಬಗೆಯುವ ಮುಗ್ಧ ಮಹಾತ್ಮರೂ, ನಿರ್ಲಜ್ಜ ನರ್ತಕರೂ ನಮ್ಮಲ್ಲಿ ಸಾಕಷ್ಟಿದ್ದಾರೆ. “ವಿದ್ವತ್ತು’ ಎಂಬ ಪದಕ್ಕೇ ಅಪಚಾರವೆಸಗುತ್ತಿದ್ದಾರೆ. ಪರಿಣಾಮ ನಮ್ಮೊಳಗಿನ ಸಣ್ತೀವನ್ನು ಅರ್ಥ ಮಾಡಿಕೊಳ್ಳದೆ ಉಳಿದವರಿಗೆ ಊಳಿಗದವರಾಗುವ ಸ್ಥಿತಿ. ಇವುಗಳಿಗೆ ಅಪವಾದವೆನ್ನಿಸುವ ಪ್ರತಿಭಾವಂತ ಕಲಾವಿದರು ಇಲ್ಲವೆಂದಲ್ಲ. ಆದರೆ ಅವರದ್ದು ಹರದಾರಿ ದೂರದ ಬದುಕು. 

ವಿರಹೋತ್ಕಂಠಿತಾ ನಾಯಿಕೆಯೆಂದಾದರೆ ಕುಳಿತಲ್ಲಿಂದಲೇ ಕಲಾವಿದರ ಭಾವಗಳ ಕಣಿ ಹೇಳಬಹುದು. ಹೇಗಿದ್ದರೂ ಅದದೇ ಸವಕಲು ಸಂಚಾರಿ ಸನ್ನಿವೇಶ-ನಾಯಿಕೆಯ ಬೇಸರ, ವಿರಕ್ತಿ, ಹೂವು-ಬಳೆ-ಆಭರಣ ಕಿತ್ತೆಸೆ ಯುವುದು, ಆಹಾರಾದಿಗಳನ್ನು ವರ್ಜಿಸಿ ನಾಯಕನ ಬರುವಿಕೆಗೆ ಕಾಯುತ್ತಾ ಖನ್ನಳಾಗುವುದು – ಮತ್ತೆ ಮತ್ತೆ ಮಾಡಿಕೊಂಡು ಹೋಗಲು ಸುಲಭ. ಅನ್ವೇಷಣೆಯ ಹಂಗಿಲ್ಲ. ಕಲಾವಿದರೆನಿಸಿಕೊಂಡವರಿಗೆ ತಮ್ಮ ಕಲ್ಪನೆಗೂ ಹೆಚ್ಚು ಸಾಣೆ ಹಿಡಿಯಬೇಕೆಂದಿಲ್ಲ. ಹೇಗಿದ್ದರೂ “ಸಾಹಿತ್ಯವೇ ಹಾಗೆ. ಸಂಪ್ರದಾಯವೇ ಹಾಗಾಗಿದೆ’ ಎಂಬ ಹಾರಿಕೆಯ ಜಾಣ ಉತ್ತರ ಕೊಡಬಹುದು. ಇನ್ನು ಹೊಸ ವಸ್ತುಗಳನ್ನು, ಸಂಚಾರಿಗಳನ್ನು ನಿಭಾಯಿಸಲು ಭಯಪಡಬೇಕಿಲ್ಲ. ಹಾಗಾಗಿ ವಿರಹವೆಂಬುದು ಭರತನಾಟ್ಯ ನೃತ್ಯಗಾರರ ಸುರಕ್ಷಿತ ಬಂಡವಾಳ. ಒಟ್ಟಿನಲ್ಲಿ ಹಳಸಲಾಗುತ್ತಿರುವ ಆಹಾರಕ್ಕೂ ಇಲ್ಲಿ ಬೇಡಿಕೆಯಿದೆ. 

ವಿರಹಕ್ಕೆ ಸರಿಗಟ್ಟುವಂತೆ ಸ್ಪರ್ಧೆ ಕೊಡುತ್ತಿರುವ ಕಲಾವಿದರ ಮತ್ತೂಂದು ಆಪ್ಯಾಯಮಾನ ಹೆಳೆ-ಭಕ್ತಿ. ಬಹುತೇಕ ನೃತ್ಯಬಂಧಗಳಲ್ಲಿ ಅದರಲ್ಲೂ ವರ್ಣ, ಪದ, ಅಷ್ಟಪದಿಗಳನ್ನು ಪ್ರಧಾನವಾಗಿ ಗಮನಿಸಿದರೆ ನೀವು ಕಾಣುವುದು ಮಧುರ ಭಕ್ತಿಯೆಂಬ ಶೃಂಗಾರವಲ್ಲದ ಶೃಂಗಾರವನ್ನು ಅಥವಾ ವಿರಹೋತ್ಕಂಠಿತೆಯಾಗಿ ನೆಗೆಯುವ ನಾಯಿಕೆಯನ್ನು! ಭಕ್ತಿ, ವಿರಹವನ್ನು ಕೊಂಡಾಡಿದ ಮಟ್ಟಕ್ಕೆ ನಮ್ಮಲ್ಲಿ ಇತರೆ ರಸ-ಭಾವಗಳನ್ನು ಕಣಿºಟ್ಟೂ ನೋಡಿದವರು ಭಾರೀ ಅಪರೂಪ. ಪ್ರೇಮ-ಶೃಂಗಾರವನ್ನೂ ಅಭಿವ್ಯಕ್ತಿಸಲು ಬಾರದವರಿಗೆ ಮಧುರ ಭಕ್ತಿ ಎಂಬೆಲ್ಲ ನಾಮವಿಶೇಷಣಗಳ ಸಹಾಯಬಲ ನಿಜಕ್ಕೂ ಒಂದು ವರ. ಅಂಥವರಿಗೆ ಭಕ್ತಿಯೇ ರಸರಾಜ. ಇನ್ನು ನವರಸಗಳೆಂಬುವೆಲ್ಲ ಶ್ಲೋಕವೊಂದಕ್ಕೋ ಅಥವಾ ರಾಗದ ಹಿಂಜುವಿಕೆಗೋ ಹಾಗೆ ಬಂದು ಹೀಗೆ ಹೋಗುವ ನೆಂಟ. ಅಲ್ಲಿಗೆ “ನವರಸ ಪ್ರತಿಪಾದನೆ’ ಮಾಡಿ ಕರ್ತವ್ಯದಿಂದ ಕೈತೊಳೆದುಕೊಂಡ ನಿರ್ಮುಕ್ತ ಭಾವ! ಭಕ್ತಿ-ವಿರಹದ ಪರಾಕಾಷ್ಠೆಯಲ್ಲಿ ಉಳಿದ ರಸ-ಭಾವಗಳು, ಪ್ರೇಕ್ಷಕನ ರಸದೃಷ್ಟಿ, ಕಾಷ್ಠಕ್ಕೇರದಿದ್ದರೆ ಅದೇ ಒಂದು ಪುಣ್ಯ!

ರುಕ್ಮಿಣೀದೇವಿ ಪರಿಚಯಿಸಿದ ಸುಧಾರಣೆ
ಭರತನಾಟ್ಯದಂತಹ ನೃತ್ಯಪ್ರಕಾರದಲ್ಲಿ ಭಕ್ತಿಶೃಂಗಾರ ವ್ಯಾಪಕವಾದದ್ದು 1930ರ ದಶಕದ ಅನಂತರ. “ಸದಿರ್‌’ ನೃತ್ಯ ಪ್ರಕಾರ ಅಳಿವಿನಂಚಿನಲ್ಲಿದ್ದಾಗ, ಸಮಾಜವು “ಸದಿರ್‌’ ಮತ್ತು ಶೃಂಗಾರವನ್ನು ಅನುಮಾನಾಸ್ಪದವಾಗಿ ನೋಡು ತ್ತಿದ್ದಾಗ ನೃತ್ಯದ ಮರುಹುಟ್ಟಿಗೆ ರುಕ್ಮಿಣೀದೇವಿ ಪರಿಚಯಿಸಿದ ಮಧುರ ಭಕ್ತಿಯ ಪ್ರತಿಪಾದನೆ “ಸದಿರ್‌’ನ ಕೊಂಕು-ಕೊಳಕುಗಳನ್ನು ತೊಳೆದು ಭರತನಾಟ್ಯವಾಗಿ ಮಿಂಚುವಲ್ಲಿ ಒಂದು ಕಾಲಕ್ಕೆ ಕೊಡುಗೆಯಾದದ್ದು ನಿಜ.

ರುಕ್ಮಿಣೀ ಅವರ ಮಾತಿನಲ್ಲೇ ಹೇಳುವುದಾದರೆ, “”ಶೃಂಗಾರಕ್ಕೆ ಪರ್ಯಾಯವಾಗಿ ರೂಪಿಸಿದ್ದು ಮಧುರ ಭಕ್ತಿಯನ್ನು. ಹಾಗೆಂದು ಶೃಂಗಾರ ಬೇಡವೆಂದಲ್ಲ; ಬೇಕು. ಅದು ಅಗತ್ಯ ಕೂಡ! ಆದರೆ ನಾನು ಅಭಿವ್ಯಕ್ತಿಸುವ ವಿಧಾನ ಉಳಿದವರಿಗಿಂತ ವಿಭಿನ್ನ ಮತ್ತು ಕೊಡುವ ಆಯಾಮ ಬೇರೆ.” ಅವರ ಪ್ರಕಾರ “ಸದಿರ್‌’ನಂತಹ ನೃತ್ಯದ ದಿಕ್ಕನ್ನು ಬದಲಾಯಿಸಿ, ದೇವದಾಸಿ ಗಳ ಕಪಿಮುಷ್ಟಿಯಿಂದ ಅದನ್ನು ಮುಕ್ತವಾಗಿ ಮಾಡಬೇಕಿದ್ದಲ್ಲಿ ಭಕ್ತಿಯನ್ನು ಶೃಂಗಾರದ ವಿರುದ್ಧ ಕಲ್ಪನೆಯೆಂಬಂತೆ ಬೆಳೆಸುವ ಅಗತ್ಯ ಇತ್ತು. ಕಲೆ ಯನ್ನು ದೈವಿಕವಾಗಿ ಬಿಂಬಿಸುವ ಅಗತ್ಯ ಕಲೆಯ ಅಸ್ತಿತ್ವದ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಸಂಭೋಗಶೃಂಗಾರದ ಅಭಿನಯಗಳಿಂದ ದೂರವುಳಿಯಬೇಕಿತ್ತು. ಹಾಗಾಗಿ ಶೃಂಗಾರದ ನೆರಳನ್ನಷ್ಟೇ ಉಳಿಸಿಕೊಂಡು ಭಕ್ತಿಯ ಮಾಧ್ಯಮದ ಮೂಲಕ ಪ್ರಕಟಗೊಂಡಿತ್ತು. ಸಂಭೋಗ ಮತ್ತು ವಿಪ್ರಲಂಭ ಶೃಂಗಾರದ ನಡುವಿನ ಸಮಸ್ಥಿತಿಯನ್ನು ಕಾಯ್ದುಕೊಂಡಿತು. ಇದು ಆ ಕಾಲಕ್ಕೆ ನೃತ್ಯದ ಸಣ್ತೀ ಮತ್ತು ಗೌರವ ಹೆಚ್ಚಿಸಿತ್ತು ಕೂಡ. ನಟರಾಜ ಶಿಲ್ಪವನ್ನು ರಂಗದಲ್ಲಿರಿಸಿ ಪೂಜಿಸಿ ನರ್ತಿಸುವ ಪದ್ಧತಿಯೂ ಹುಟ್ಟು ಪಡೆದದ್ದು ಇದೇ ಕಾಲದಲ್ಲಿ, ಇದೇ ಉದ್ದೇಶಕ್ಕೆ. 

ಸುಧಾರಣೆಯು ಸುಧಾರಣೆಯಾಗಬೇಕಿದೆ!
ಆದರೆ ಅಂದಿನ ಸಂಕಟದ ಕಾಲಕ್ಕೆ ಅಗತ್ಯವಿದ್ದ ಸುಧಾರಣೆಯು ಮತ್ತೂಮ್ಮೆ ಸುಧಾರಣೆಯಾಗಬೇಕಾದ ಅನಿವಾರ್ಯತೆಯನ್ನು ಹೊತ್ತು ನಿಂತಿದೆ. ಅತ್ತ ಭಕ್ತಿಶೃಂಗಾರದಲ್ಲಿ ಭಕ್ತಿಯೂ ಇಲ್ಲ; ಇತ್ತ ಶೃಂಗಾರವೂ ಇಲ್ಲ. ಭಕ್ತಿಗೆ “ಶೃಂಗಾರಶಾಸ್ತ್ರ’ವೆಂಬ ಹಣೆಪಟ್ಟಿ ಕಟ್ಟಿಸಿಕೊಂಡು ಥಿಯರಿಯಲ್ಲಷ್ಟೇ ಶೃಂಗಾರವನ್ನು ಕಾಣುತ್ತಾ ರಸರಾಜನನ್ನು ಅಕ್ಷರಶಃ ಅಸ್ಪೃಶ್ಯನನ್ನಾಗಿಸಿದ್ದಾರೆ! ನೃತ್ಯದಲ್ಲಿ ಗೀತಗೋವಿಂದ ಅಷ್ಟಪದಿ, ಕ್ಷೇತ್ರಜ್ಞನ ಪದಗಳಾದಿಯಾಗಿ ಯಾವುದನ್ನೆಲ್ಲ ಮಧುರ ಭಕ್ತಿಗೆ ಎಂದು “ಬ್ರಾಂಡ್‌’ ಮಾಡಿದ್ದಾರೋ, ಅವೆಲ್ಲಕ್ಕೂ ಇರುವ ಶೃಂಗಾರವೆಂಬ ಮೂಲಧಾತು ಇಂಥವರ ಪಾಲಿಗೆ ಕೀಳು- ಬೀಳುಗಳ ಪಾತಕ! ಶೃಂಗಾರವೆಂಬುದು “ಕೇವಲ ಕಾಮ’! ಅಲೌಕಿಕವನ್ನು ಮುಟ್ಟಲು ಹೆಣಗುವವರಿಗೆ ಲೌಕಿಕದ ಮರ್ಮವೂ ತಿಳಿಯದ ದುರಂತವಿದು. ಒಟ್ಟಿನಲ್ಲಿ ನೃತ್ಯಪ್ರದರ್ಶನ ದರ್ಶನವಲ್ಲ; ಅದೊಂದು “ಶಕ್ತಿಪ್ರದರ್ಶನ’. 

ಯಾವುದು ಸಹಜವೋ ಅದು ರಸ. ಯಾವುದಕ್ಕೆ ಸ್ಥಾಯಿಯಿಲ್ಲವೋ, ಯಾವುದು ಮತ್ತೂಂದರ ಜನ್ಯವೋ ಅದು ರಸವಾಗಲಾರದು. ಹಾಗಾಗಿ ಭಕ್ತಿಯು ರಸಗಳ ಶ್ರೇಣಿಗೆ ಏರಲಿಲ್ಲ. ಆದರೂ ಅದಕ್ಕೆ ಪ್ರೇಕ್ಷಕರ ಮನಸ್ಸಂಚನ್ನು ಒದ್ದೆ ಮಾಡುವ ಸಾಮರ್ಥ್ಯವಿದೆ. ದಾಸಪಂಥ ಬದುಕಿ ಬಾಳಿದ್ದೇ ಭಕ್ತಿಯಲ್ಲಿ. ಭಕ್ತಿಯನ್ನು ಅನುಭವದ ನಿಟ್ಟಿನಲ್ಲಿ ನೋಡಿದಾಗ ಅದು ಭಗವದ್ವಿಷಯವಾದ ಪ್ರೀತಿ. ಯಾವುದೇ ವಸ್ತುವನ್ನು ದೊಡ್ಡದಾಗಿ ಗೌರವಿಸಿ ಪ್ರದರ್ಶಿಸುವುದು ಭಕ್ತಿ. ಭಗವಂತ ಮಾತ್ರವಲ್ಲ, ಮನುಷ್ಯ, ಪ್ರಾಣಿ, ಪರಿಸರದ ಬಗ್ಗೆಯೂ ಇದನ್ನು ತೋರಿಸಬಹುದು. ತಂದೆ, ತಾಯಿ, ಗಂಡ, ಹೆಂಡತಿ… ಹೀಗೆ ಲೌಕಿಕವಾಗಿಯೂ ಇರಬಹುದು. ಈಗ “ದೇಶಭಕ್ತಿ’ಯ ಪರಿಕಲ್ಪನೆಯೂ ಇದರೊಂದಿಗೆ ಸೇರಿಕೊಂಡಿದೆ. ಮಧುರಭಕ್ತಿಯೂ ಶೃಂಗಾರದ ಪರಿಮಿತಿಯಲ್ಲೇ ಇರುವ ಆಯಾಮ. ಆದರೆ ನಿಜವಾದ ಭಾವಸರ್ವಸ್ವ ಶೃಂಗಾರ. ಸರ್ವ ರಸಗಳಲ್ಲಿಯೂ ಶೃಂಗಾರಕ್ಕೇ ಮೊದಲ ಸ್ಥಾನ. ಉಳಿದೆಲ್ಲ ರಸಗಳೂ ಶೃಂಗಾರದ ವಿಭಾಗಗಳಷ್ಟೇ! ಶೃಂಗಾರವೇ ಪರಮೋಚ್ಚ ಸ್ಥಿತಿಯೆಂಬ ನೆಲೆಯಲ್ಲಿ ಲಾಕ್ಷಣಿಕರು ಗ್ರಂಥಸರ್ವಸ್ವವನ್ನೇ ಅದಕ್ಕಾಗಿ ಮುಡಿಪಿಟ್ಟಿದ್ದಾರೆ. ಅದು ಕೇವಲ ಅಲಂಕಾರ, ಒನಪು, ಒಯ್ನಾರ ಮಾತ್ರವಲ್ಲ, ಸಮರ್ಪಣೆಯ ಶೃಂಗ. ಅಲ್ಲಿ ದೇವರಾಗಲಿ ಅಥವಾ ಯಾವುದೇ ಆಗಲಿ; ಅದು ಪ್ರೀತಿಯ ಅಗಾಧ ಸಾಧ್ಯತೆ. ಅಲ್ಲಿ ಯಾವುದೇ ಮಿತಿ ಮರ್ಜಿಗಳಿಲ್ಲ. ಎಲ್ಲ ಹಂಗನ್ನು ತೊರೆದು, ತನ್ನದು ಎನ್ನುವ ಪ್ರತ್ಯೇಕತೆಯನ್ನು ಕಳಚಿ ಜೀವಾತ್ಮ ಪರಮಾತ್ಮ-ಎಲ್ಲವೂ ಒಂದೇ ಆಗಿ ಒಂದರೊಳಗೊಂದು ಸಮೃದ್ಧವಾಗಿ ಸೇರಿಕೊಳ್ಳುವ ಅದ್ಭುತ ಪರಿಕಲ್ಪನೆ. ಹಾಗಾಗಿಯೇ ಶುದ್ಧಶೃಂಗಾರವು ಮಧುರಭಕ್ತಿಗಿಂತ ಮೇಲ್ಮಟ್ಟದ್ದು, ಇನ್ನು ಭಕ್ತಿಯಾದರೋ ಶೃಂಗಾರದ ಸಾಧನೆಯಲ್ಲಿ ಒಂದು ದಾರಿ. ಭಜನೆಯೇ ಭಕ್ತಿಯಲ್ಲವಲ್ಲ! 

ಆದರೆ ಬಹುತೇಕ ಕಲಾವಿದರು ಭಕ್ತಿಯನ್ನು ಅರ್ಥವಿಲ್ಲದ ಮಡಿವಂತಿಕೆಯ ಚೌಕಟ್ಟು ಹಾಕಿ ಕೂರಿಸಿ, “ಉಳಿಸಿಕೊಂಡದ್ದು ಹೇಗಾದರೂ ದಕ್ಕಬೇಕು’ ಎಂಬ ಮೀಸಲಾತಿಯಲ್ಲಿ ಪ್ರತ್ಯೇಕತೆಯ ಆಗ್ರಹವನ್ನು ಕಟ್ಟಿಕೊಂಡು ತಿರುಗುತ್ತಿದ್ದಾರೆ. ತಮ್ಮ “ಬ್ರಾಂಡ್‌’ಗಳನ್ನು ರಸದೃಷ್ಟಿಗೆ ಒಯ್ಯಲು ಆಗದೇ ಇದ್ದರೂ; ರಸಿಕನಿಗೆ ಯಾವ ಬಗೆಯ ಸಂವಹನ ಆಗದೇ ಹೋದರೂ “ತಮ್ಮದು ಶಾಸ್ತ್ರೀಯ, ಹಾಗಾಗಿ ಅರ್ಥವಾಗುವುದಿಲ್ಲ’ ಎಂಬ ವಿತಂಡ ವಾದದಲ್ಲಿ ಭಕ್ತಿಯಲ್ಲೂ ಲೆಕ್ಕಾಚಾರ ಹಾಕುತ್ತಾರೆ! ಉದಾತ್ತ ನಾಯಕ ಅಥವಾ ಭಗವಂತನೆಡೆಗೆ ಪ್ರೇಮ ಮತ್ತು ಸಮರ್ಪಣೆ ಮಾಡಬೇಕೆಂಬ ಮಡಿಗೆ ತಮ್ಮ ಆಂಗಿಕಾದಿ ಚಲನೆಗಳನ್ನು ಕಟ್ಟಿಹಾಕಿಕೊಳ್ಳುತ್ತಾರೆ. ಭಾವಾಭಿನಯದಲ್ಲಿ ಚೌಕಾಸಿ ಮಾಡುತ್ತಾರೆ. ಕಲಾವಿದರು ತಮ್ಮ ಯೋಗ್ಯತೆ-ಪ್ರತಿಭೆಯನ್ನು ಪರಿಗಣಿಸದೇ ಕೇವಲ ವಸ್ತುವಿನಲ್ಲಷ್ಟೆ ಯೋಗ್ಯತೆಯಿದೆ ಎಂಬ ಅಜ್ಞಾನ ಪ್ರದರ್ಶಿಸಿದರೆ ಆಗುವ ಪರಿಣಾಮ, ಕಲೆಯ ಕೊಲೆ!

ಒಟ್ಟಿನಲ್ಲಿ ಇಂದಿನ ಭರತನಾಟ್ಯವು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಎಷ್ಟು ಬೇಕೋ ಅದಕ್ಕಿಂತ ಹೆಚ್ಚಿನದ್ದು ಕಲಿತಿದೆ. ಎಷ್ಟೇ ಜಾಣತನದಿಂದ, ಚಮತ್ಕಾರಿಕವಾಗಿ ಪ್ರಯೋಗ-ಪ್ರದರ್ಶನಗಳನ್ನು ಆಯೋಜನೆ ಮಾಡಿದರೂ ಬಹಳಷ್ಟು ಸಲ ರಸಾನುಭವ ಕನ್ನಡಿಯೊಳಗಿನ ಗಂಟೆಂಬಂತೆಯೇ ತೋರುತ್ತಿದೆ. ಅನುಭಾವಿಕ ಪ್ರಜ್ಞೆಯೊಳಗೆ ಒಂದಾಗಿ ನಲಿಯುವುದೆಂಬ ಸೋಗಿನಲ್ಲಿ ಕೈಗೆಟುಕದ ದ್ರಾಕ್ಷಿಯನ್ನು ಹುಳಿಯೆಂದು ಬಗೆಯಲಾಗುತ್ತಿದೆ. ಭಕ್ತಿಶೃಂಗಾರವೆಂಬ ರಕ್ಷಣಾ ತಡೆಗೋಡೆಯು ಬರಬರುತ್ತಾ ರಸದಿಂದ ವಿಮುಖವಾಗುವ ಪಲಾಯನಕ್ಕೆ ಆಸ್ಪದವನ್ನೀಯುತ್ತಿದೆ. ಶೃಂಗಾರದ ಬಗೆಗಿನ ಅತಿಯಾದ ಮಡಿವಂತಿಕೆ ಮುಂದೊಮ್ಮೆ ಭರತನಾಟ್ಯವನ್ನು ಆಡು ಕೂಡ ಮುಟ್ಟದೆ ಹೋಗುವ ಆಡುಸೋಗೆಯಂತಾಗಿಸಿದರೆ ಬೈದುಕೊಳ್ಳಬೇಕಾದ್ದು ಪ್ರೇಕ್ಷಕನನ್ನಲ್ಲ!

ಕಲೆಯೆಂದರೇನೇ ಸಣ್ತೀಸಂಸ್ಫೂರ್ತಿ. ಅದರೊಳಗಿನ ರಸಸೌಂದರ್ಯ ಮೋದ-ಬೋಧಗಳ ಅಖಂಡಾನುಭವ. ಕಲೆಯೊಂದಿಗಿನ ಒಡನಾಟದಲ್ಲಿ ಅದು ಈಯುವ ಜೀವನವನ್ನು-ನಮ್ಮನ್ನು ಮರುಶೋಧಿಸಿಕೊಳ್ಳುವ ಕಾಣೆRಯ, ಸೌಭಾಗ್ಯದ ಮುಂದೆ ಉಳಿದದ್ದೆಲ್ಲ ಗೌಣವೆನಿಸುತ್ತದೆ. ಭಾವಬುದ್ಧಿಗಳಿಗೆ ಸಂಸ್ಕಾರವನ್ನೂ, ಸತ್ತೂ$Ìàದ್ರೇಕಗಳಿಗೆ ಬೊಗಸೆಯನ್ನೂ ಮೊಗೆಮೊಗೆದು ಕೊಡುವ ಸಾಗರ. ಹೀಗೆ ಕಲೆಯ ಅತ್ಯುಚ್ಚ ಮಟ್ಟದಲ್ಲಿ ಯಾವುದೇ ಆದರೂ ಸಾರ್ವಜನೀನವಾಗಿರುವುದು ರಸ; ಇಲ್ಲವಾದರೆ ಅದು ಮಡಿಯೆಂಬ “ನೀರಸ’. ರಸವಿಹೀನವಾದರೆ ಶಾಸ್ತ್ರೀಯ ನೃತ್ಯವೆನಿಸಿಕೊಂಡವಕ್ಕೂ ಬೆಲೆ -ಬಾಳ್ವಿಕೆ ಇಲ್ಲ. ಕಲೆಯ ಅಧ್ಯಾತ್ಮನಿಷ್ಠೆ ರಸವೇ ಹೊರತು ಭಕ್ತಿಯಲ್ಲ. ರಸಾನಂದದ ಮೂಲಕ ಭಗವತ್‌ ದರ್ಶನವನ್ನೂ ಕಾಣುವ ಹೆಜ್ಜೆಯಲ್ಲಿ ನಮ್ಮನ್ನು ತೇಯುವುದು ನಿಜಕ್ಕೂ 
ಗಂಧದ ಕೊರಡಿನ ಅನುಭವವೇ ಸರಿ.

ಡಾ| ಮನೋರಮಾ ಬಿ.ಎನ್‌.

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.