ಯಕ್ಷಗಾನ ಪ್ರಸಾಧನ ತಜ್ಞ ಬಾಲಕೃಷ್ಣ ನಾಯಕ್
Team Udayavani, Jul 27, 2018, 6:00 AM IST
ಯಕ್ಷಗಾನ ಕ್ಷೇತ್ರದ ಚಿರಪರಿಚಿತ ಹೆಸರು ಬಾಲಣ್ಣ. ಇವರನ್ನು ಜು.29ರಂದು ಅಜಪುರ ಯಕ್ಷಗಾನ ಸಂಘ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಾವರದಲ್ಲಿ ಆಯೋಜಿಸುತ್ತಿರುವ ಹಂದಾಡಿ ಸುಬ್ಬಣ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಗುವುದು.
ಎಳೆಯ ವಯಸ್ಸಿನಲ್ಲಿ ಯಕ್ಷಗಾನದ ಹೆಜ್ಜೆಗಳನ್ನು ಹಂದಾಡಿಯ ಸುಬ್ಬಣ್ಣ ಭಟ್ ಅವರಲ್ಲಿ ಕಲಿತರು. ಪ್ರೌಢ ಶಾಲೆ ಮುಗಿಯುತ್ತಿದ್ದಂತೆ ಅಜಪುರ ಯಕ್ಷಗಾನ ಸಂಘ, ಬ್ರಹ್ಮಾವರ ಮತ್ತು ಅಜ್ಜ ಚಂದು ನಾಯಕರ ಪ್ರೋತ್ಸಾಹದಿಂದ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ಬೆಳೆದರು. ಆದರೆ ಇವರನ್ನು ಸೆಳೆದದ್ದು ಪ್ರಸಾಧನ ಕಲೆ. ಮುಂದೆ ವೇಷ ಕಟ್ಟುವ ಮತ್ತು ಬಣ್ಣಗಾರಿಕೆಯನ್ನು ಕಲಿತು ಅದರಲ್ಲಿ ತೊಡಗಿಸಿಕೊಂಡರು. ಮಾವ ಉಪೇಂದ್ರ ನಾಯಕರಲ್ಲಿ ವೇಷಭೂಷಣ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಂಡರು. ಹಿಂದಿನ ದಿನಗಳಲ್ಲಿ ಬಳಸುತ್ತಿದ್ದ ಅಟ್ಟೆ ಮುಂಡಾಸು ಮತ್ತು ಅಟ್ಟೆ ಕೇದಲೆ ಮುಂದಲೆಗಳನ್ನು ಕಟ್ಟಿ ಪಾತ್ರಗಳನ್ನು ಸಜ್ಜುಗೊಳಿಸುವಲ್ಲಿ ಇವರು ನಿಷ್ಣಾತರಾಗಿದ್ದರು. ಪ್ರಸಾಧನ ಕಲೆ ಕಲಿಯಲು ಬಯಸುವವರಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ಕಲಿಸುತ್ತಿರುವ ಬಾಲಣ್ಣ ಬಹಳಷ್ಟು ಮಂದಿಗೆ ದಾರಿದೀಪವಾಗಿದ್ದರೆ. ನಲುತ್ತೈದು ವರ್ಷಗಳಿಂದ ಪ್ರಸಾಧನ ಕಲೆಗೆ ತನ್ನನ್ನು ಅರ್ಪಿಸಿಕೊಂಡಿರುವ ಇವರು ದೇಶ-ವಿದೇಶಗಲ್ಲಿ ಅನೇಕ ಯಕ್ಷಗಾನ ಕಾರ್ಯಕ್ರಮಗಳಿಗೆ ವೇಷಭೂಷಣಗಳನ್ನು ಒದಗಿಸಿದ್ದಾರೆ.
ಕೆ. ದಿನಮಣಿ ಶಾಸ್ತ್ರಿ