ಚೆಂಡೆ ವಾದಕ ರಾಕೇಶ್ ಮಲ್ಯ
Team Udayavani, Aug 3, 2018, 6:00 AM IST
ಯಕ್ಷಗಾನ ಕಳೆಗಟ್ಟುವಲ್ಲಿ ಚೆಂಡೆಯ ಪಾತ್ರ ಮಹತ್ತರವಾದುದು. ಅದರಲ್ಲೂ ನುರಿತ ಚೆಂಡೆ ವಾದಕನಿದ್ದರೆ ಪ್ರಸಂಗದ ಸೊಗಸೇ ಬೇರೆ. ಚೆಂಡೆ ವಾದಕನಿಗೆ ರಂಗ ಸೂಕ್ಷ್ಮತೆ, ಬದ್ಧತೆ ಮತ್ತು ಚಾಕಚಕ್ಯತೆ ಆಗತ್ಯ. ಈ ಎಲ್ಲ ಗುಣಗಳಿರುವ ಚೆಂಡೆ ವಾದಕ ಪೆರ್ಡೂರು ಮೇಳದ ರಾಕೇಶ್ ಮಲ್ಯ. ರಾಕೇಶ್ ಮಲ್ಯರಿಗೆ ತಂದೆ ದಿ| ಸುಬ್ರಾಯ ಮಲ್ಯರೇ ಮೊದಲ ಗುರು. ಎಸ್ಎಸ್ಎಲ್ಸಿ ಬಳಿಕ ಯಕ್ಷರಂಗಕ್ಕೆ ಬಂದ ರಾಕೇಶ್ ಮಲ್ಯರು ಆರಂಭದಲ್ಲಿ ಹವ್ಯಾಸಿಯಾಗಿ ವೇಷಗಳನ್ನೂ ಮಾಡುತ್ತಿದ್ದರು. ಆದರೆ ಅವರ ಒಲವಿದ್ದದ್ದು ಚೆಂಡೆಯತ್ತ. ಶಂಕರ ಭಾಗವತರಿಂದ ಚೆಂಡೆ ವಾದನದ ಸೂಕ್ಷ್ಮಗಳನ್ನು ಕಲಿತು ವೃತ್ತಿಪರ ಚೆಂಡೆ ವಾದಕರಾಗಿ ರೂಪುಗೊಂಡರು.
ಶಿರಸಿ, ಮಂದಾರ್ತಿ, ಸೌಕೂರು, ನೀಲಾವರ ಮೇಳಗಳಲ್ಲಿ ದುಡಿದಿರುವ ಮಲ್ಯರು ಪ್ರಸ್ತುತ ಪೆರ್ಡೂರು ಮೇಳದಲ್ಲಿದ್ದಾರೆ. ನೆಬ್ಬೂರು, ಕೆ. ಪಿ. ಹೆಗಡೆ, ಧಾರೇಶ್ವರ, ರಾಘವೇಂದ್ರ ಮಯ್ಯ, ಗೋಪಾಲ ಗಾಣಿಗ ಮುಂತಾದ ದಿಗ್ಗಜರಿಗೆ ಚೆಂಡೆಯಲ್ಲಿ ಸಾಥ್ ನೀಡಿದ ಹಿರಿಮೆ ಅವರದ್ದು. ಮೂರು ದಶಕವನ್ನು ಯಕ್ಷಗಾನ ರಂಗದಲ್ಲಿ ಕಳೆದಿರುವ ರಾಕೇಶ್ ಮಲ್ಯ ಬಡಗುತಿಟ್ಟಿನಲ್ಲಿ ಅಗ್ರಗಣ್ಯ ಚೆಂಡೆವಾದಕರಾಗಿ ಗುರುತಿಸಿಕೊಂಡಿದ್ದಾರೆ.
ಸಂದೀಪ್ ನಾಯಕ್