ಕೃಷ್ಣವೇಣಿ, ಸೀತಾಕೋಟೆಗೆ ಸುಂದರ-ಮುರಳಿ ಪ್ರಶಸ್ತಿ
Team Udayavani, Aug 17, 2018, 6:00 AM IST
ಸನಾತನ ನಾಟ್ಯಾಲಯದ ಈ ಸಾಲಿನ ಸುಂದರ-ಮುರಳಿ ಪ್ರಶಸ್ತಿಗೆ ಹಿರಿಯ ಸಂಗೀತ ಗುರು ಮತ್ತು ಸಂಘಟಕಿ ಕೃಷ್ಣವೇಣಿ ಹೆಬ್ಟಾರ್ ಕಂರ್ಬಿತ್ತಿಲ್ ಹಾಗೂ ಭರತನಾಟ್ಯ ಕಲಾವಿದೆ ಡಾ| ಸೀತಾ ಕೋಟೆ ಆಯ್ಕೆಯಾಗಿದ್ದಾರೆ.
ಸಂಗೀತ ವಿದ್ವಾನ್ ದಿ| ಎನ್.ಕೆ.ಸುಂದರಾಚಾರ್ಯ ಮತ್ತು ನಾಟ್ಯಾಚಾರ್ಯ ದಿ| ಕೆ.ಮುರಳೀಧರ ರಾವ್ ಅವರ ಸ್ಮರಣಾರ್ಥವಾಗಿ ಚಂದ್ರಶೇಖರ ಕೆ. ಶೆಟ್ಟಿ ನೇತೃತ್ವದ ಸನಾತನ ನಾಟ್ಯಾಲಯ ಈ ಪ್ರಶಸ್ತಿಗಳನ್ನು ನೀಡುತ್ತಿದೆ. ಆ.17ರಂದು ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ. ಈ ಸಂದರ್ಭದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರಾದ ಶಾಶ್ವತಿ ಸಚಿನ್ ಜೈನ್, ಧನಲಕ್ಷ್ಮೀ ದೀಪಕ್ ಕುಮಾರ್, ಭಾಗ್ಯಶ್ರೀ ಶೆಟ್ಟಿ, ಅಂಜನಾ ಟಿ.ವಿ., ಕೌಸಲ್ಯ ಕೆ. ನಾಯ್ಕ, ವಾಣಿಶ್ರೀ ಬಿ. ವರ್ಷಾ ಕಾಕತ್ಕರ್, ಸ್ಫೂರ್ತಿ ಎಸ್. ಭಟ್, ವಿಶಾಖಾ ಎ. ಮತ್ತು ಪ್ರಜ್ಞಾ ಇವರ ಭರತನಾಟ್ಯ ಪ್ರದರ್ಶನವಿದೆ.
ಕೃಷ್ಣವೇಣಿ
ಕೃಷ್ಣವೇಣಿ ಹೆಬ್ಟಾರ್ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು. ಕಳೆದ ಕೆಲವಾರು ವರ್ಷಗಳಿಂದ ನಿಡ್ಲೆ ಬಳಿಯ ಕಂರ್ಬಿತ್ತಿಲ್ನಲ್ಲಿ ಸಂಗೀತ ಶಿಬಿರಗಳನ್ನು ನಡೆಸುತ್ತಿರುವ ಇವರು ಅನೇಕ ಶಿಷ್ಯರನ್ನು ತಯಾರು ಮಾಡಿ ಸಂಗೀತ ಕ್ಷೇತ್ರಕ್ಕೆ ನೀಡಿದ್ದಾರೆ. ಕೃಷ್ಣವೇಣಿಯವರ ಇಡೀ ಕುಟುಂಬ ಸಂಗೀತದ ದೀಕ್ಷೆ ತೊಟ್ಟಿದೆ. ಅವರ ಮಕ್ಕಳು, ಮೊಮ್ಮಕ್ಕಳು ಶಾಸ್ತ್ರೀಯ ಸಂಗೀತ ಕಲಾವಿದರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
ಸೀತಾ ಕೋಟೆ
ಡಾ| ಸೀತಾ ಕೋಟೆ ಪ್ರಸಿದ್ಧ ಭರತನಾಟ್ಯ ಕಲಾವಿದೆ, ಸಂಶೋಧಕಿ, ಚಿತ್ರ ಮತ್ತು ಕಿರುತೆರೆ ನಟಿ. ದೇಶ ವಿದೇಶಗಳಲ್ಲಿ ಭರತನಾಟ್ಯ ಪ್ರದರ್ಶನಗಳನ್ನು ನೀಡಿ ಕಲೆಯ ಕಂಪನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ್ದಾರೆ.