ಚಿಣ್ಣರ ಪ್ರತಿಭೆ ಅನಾವರಣಗೊಳಿಸಿದ ಸಜೀಪದ ಷಣ್ಮುಖೆ
Team Udayavani, Nov 23, 2018, 6:00 AM IST
ಮಕ್ಕಳಲ್ಲಿ ಎಷ್ಟೋ ಪ್ರತಿಭೆಗಳು ಅಡಗಿರುತ್ತವೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದಾಗ ಆ ಮಕ್ಕಳು ಸಮಾಜಕ್ಕೆ ಮಾದರಿಯಗುತ್ತಾರೆ ಎಂಬುದಕ್ಕೆ ಸಜೀಪದ ಷಣ್ಮುಖ ಕಲಾ ತರಗತಿಯ ಪುಟಾಣಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಜೀಪದ ಷಣ್ಮುಖೆ ಎಂಬ ಐತಿಹಾಸಿಕ ನಾಟಕವೇ ಸಾಕ್ಷಿ.
ಸುಮಾರು ಒಂದೂವರೆ ವರ್ಷದಿಂದೀಚೆಗೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದೊಂದಿಗೆ ಆರಂಭಗೊಂಡ ಶ್ರೀ ಷಣ್ಮುಖ ಕಲಾ ತರಗತಿಯಲ್ಲಿ ಸುಮಾರು 40 ವಿದ್ಯಾರ್ಥಿಗಳು ಸಂಗೀತ ಅಭ್ಯಾಸವನ್ನು ಮಾಡುತ್ತಿದ್ದಾರೆ. ಕೊಣಾಜೆ ಸಪ್ತಸ್ವರ ಕಲಾಕೇಂದ್ರದ ಗುರುಗಳಾದ ವಾಸುದೇವ ಕೊಣಾಜೆ ಇವರು ಈ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸುಗಮ ಸಂಗೀತ, ಹಾರ್ಮೋನಿಯಂ, ತಬಲ, ಡೋಲಕ್, ಕೀಬೋರ್ಡ್ ಮಾತ್ರವಲ್ಲದೆ ನಾಟಕ ಅಭಿನಯ, ಹಾಸ್ಯ ಕಾರ್ಯಕ್ರಮ ನಿರೂಪಣೆ ಹಾಗೂ ಸಂಸ್ಕೃತಿಯನ್ನು ಬೆಳೆಸಲು ಸಂಸ್ಕಾರ ಭಾರತಿಯನ್ನು ಕಲಿಸುತ್ತಿದ್ದಾರೆ.
ಸುಮಾರು ಒಂದೂವರೆ ವರ್ಷದಿಂದ ಪ್ರತಿ ಆದಿತ್ಯವಾರದಂದು ಸಂಗೀತವನ್ನು ಅಭ್ಯಸಿಸುತ್ತ ಬಂದಿರುವ ಪುಟಾಣಿಗಳು ಹಲವಾರು ಕಡೆಗಳಲ್ಲಿ ಭಕ್ತಿ ರಸಮಂಜರಿ ನೃತ್ಯ ಹಾಗೂ ನಾಟಕ ಪ್ರದರ್ಶನಗಳನ್ನು ನೀಡಿದ್ದು, ದಸರಾ ಸಂದರ್ಭದಲ್ಲಿ ಸುಭಾಷ್ನಗರದ ಸುಭಾಸ್ ಯುವಕ ಮಂಡಲ ಹಾಗೂ ಶಾರದೋತ್ಸವ ಸಮಿತಿ ಇವರ ಸಹಕಾರದಿಂದ ಸುಭಾಷ್ ನಗರದಲ್ಲಿ ನಡೆದ ವಾಸುದೇವ ಕೋಣಾಜೆ ಇವರು ರಚಿಸಿ ನಿರ್ದೇಶನ ನೀಡಿರುವ ಸಜೀಪದ ಷಣ್ಮುಖೆ ಎಂಬ ಐತಿಹಾಸಿಕ ನಾಟಕವನ್ನು ಪ್ರದರ್ಶಿಸಿದರು.
ನಾಟಕದ ಮೊದಲ ದೃಶ್ಯದಲ್ಲಿ ಮದುವೆಯ ವರ್ಷಾಚರಣೆಯ ಸಂಭ್ರಮದಲ್ಲಿರುವ ನಂದಾವರದ ಅರಸರು ಹಾಗೂ ಅವರ ಧರ್ಮಪತ್ನಿ, ಅರಮನೆಯಲ್ಲಿ ಗಡಿಬಿಡಿಯಲ್ಲಿ ಏಳುತ್ತ ಬೀಳುತ್ತ ಕೆಲಸ ಮಾಡುತ್ತ ನಾಟಕದ ಕಡೆಯವರೆಗೂ ಪ್ರೇಕ್ಷಕರ ಗಮನ ಸೆಳೆಯುವ ಕೆಲಸದ ಆಳು ಬೋಜಣ್ಣನೊಂದಿಗೆ ತಾನು ಮಾಡಿದ ಅಡುಗೆಯನ್ನು ಹೊಗಳುತ್ತಿರುವ ಹಾಸ್ಯ ಪ್ರವೃತ್ತಿಯ ಸುಬ್ರಾಯ ಭಟ್ ಮೂರನೇ ದೃಶ್ಯದಲ್ಲಿ ನಂದಾವರ ರಾಜಕುಮಾರನಿಗೆ ಗುಣವಾಗದ ಕಾಯಿಲೆ ಬರುವುದು. ಯಾವುದೇ ಔಷಧ ಮಾಡಿದಾಗಲೂ ಕಾಯಿಲೆ ಗುಣವಾಗದಿದ್ದಾಗ ರಾಜಕುಮಾರನ ಕಾಯಿಲೆಗೆ ಸೂಕ್ತ ಔಷಧ ನೀಡುವವರಿದ್ದರೆ ಬರುವಂತೆ ಅರಸರ ಅಪ್ಪಣೆಯಾಗುತ್ತದೆ. ನಾನಾ ಭಾಷೆಗಳಲ್ಲಿ ಡಂಗೂರ ಸಾರುವ ಡಂಗೂರ ಸಿಂಗ, ಡಂಗೂರದ ಶಬ್ದ ಕೇಳಿ ಔಷಧೋಪಚಾರ ಮಾಡಲು ಮುಂದೆ ಬರುವ ಬಡ ಬ್ರಾಹ್ಮಣ, ಕಾಯಿಲೆಯಿಂದ ನರಳುತ್ತಿರುವ ರಾಜಕುಮಾರನಿಗೆ ಕನಸಿನಲ್ಲಿ ಸರ್ಪವೊಂದು ಕಚ್ಚಿ ನಂಜು ಹೀರಿದಾಗ ರಾಜಕುಮಾರ ಕಾಯಿಲೆಯಿಂದ ಮುಕ್ತನಾಗುವುದು. ನಂಜನ್ನು ಹೀರಿದ ಸರ್ಪ ಸಾವನ್ನಪ್ಪಿದ ಸ್ಥಳದಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ನಿರ್ಮಾಣವಾಗುವಂತಹ ಸಜೀಪ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಐತಿಹಾಸಿಕ ಕಥೆಯನ್ನು ಶ್ರೀ ಷಣ್ಮುಖ ಕಲಾ ತರಗತಿಯ ವಿದ್ಯಾರ್ಥಿಗಳು ಪ್ರಬುದ್ಧವಾಗಿ ಅಭಿನಯಿಸಿದರು.
ಜಗದೀಶ ಮಿತ್ತೋಟ