ಬಹುವಚನಂನಲ್ಲಿ ಮೂಡಿದ ಭರವಸೆಯ ಮಿಂಚು
Team Udayavani, Oct 5, 2018, 6:00 AM IST
ಡಾ| ಶ್ರೀಶ ಕುಮಾರ ಅವರ “ಬಹುವಚನಂ’ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಡಾ| ಶ್ರೀ ಪ್ರಕಾಶರ “ಶ್ರೀ ಮಹಾಬಲ ಲಲಿತ ಕಲಾ ಸಂಸ್ಥೆ’ಯ ಜಂಟಿ ಆಶ್ರಯದಲ್ಲಿ ನಡೆದ ವಿದ್ವಾನ್ ಆದಿತ್ಯ ಮಾಧವನ್ ಬಳಗದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮುಂದೆ ಬರುತ್ತಿರುವ ಎಳೆಯ ಭರವಸೆಯ ಸುಂದರ ನಿದರ್ಶನವಾಗಿ ಮೂಡಿ ಬಂದುದು ಸರ್ವ ವಿದಿತ.
ವಿ| ಆದಿತ್ಯ “ಎವ್ವರಿಬೋದನ’ ವರ್ಣನ ನಂತರ ಬಂದ “ವಾತಾಪಿ’ ಸ್ವರ ಪ್ರಸ್ತಾರದ ಮಟ್ಟುಗಳ ಮಂಡನೆಗಳಿಂದ ವಿಶೇಷವಾಗಿ ಗಮನ ಸೆಳೆದರು. ನಂತರ ಬಂದ ಸ್ಮರಣೆಯೊಂದೇ ಸಾಲದೆ (ಮಲಯ ಮಾರುತ) ಶುದ್ಧ ಶುಭ್ರವಾಗಿ ಮಂಡಿತವಾಗಿ ಮುಂಚೆ ಶ್ರೀ ದೀಕ್ಷಿತರ ಪಂಚಲಿಂಗ ಕ್ಷೇತ್ರ ಕೃತಿ ಆನಂದ ನಟನ ಪ್ರಕಾಶಂ (ಕೇದಾರ, ಛಾಪುತಾಳ) ಗಂಭೀರವಾಗಿ ಅನಾವರಣಗೊಂಡಿತು. ಸದ್ರಿ ಕೃತಿಯಲ್ಲಿ ರಾಗ ಮತ್ತು ಸಾಹಿತ್ಯಗಳ ಸುಂದರ ಹೆಣಿತಗಳನ್ನು ಅಷ್ಟೇ ಸಮರ್ಪಕವಾಗಿ ಕಲಾವಿದರು ಮಂಡಿಸಿರುವುದು ಗಮನೀಯ ಅಂಶ. ಭದ್ರಾಚಲ (ರಾಮದಾಸರ ಕೃತಿ “ಎನ್ನಗಾನುರಾಮ ಭಜನ)ಕ್ಕಾಗಿ ಕಾಮವರ್ಧಿನಿಯ ಸುಂದರ ಮಂಡನೆ ಮಾಡಿ ಸಾಹಿತ್ಯ ವಿನ್ಯಾಸ ಹಾಗೂ ಸ್ವರ ವಿನ್ಯಾಸಗಳ ಮೂಲಕ ಉತ್ತಮವಾಗಿ ಪ್ರಸ್ತುತ ಪಡಿಸಿದರು. ಕೃತಿಯಲ್ಲಿ ಬರುವ ವಿಶೇಷ ಶರಣಾಗತಿ, ದೈನ್ಯಭಾವ ಕಲಾವಿದರ ಹಾಡಿನಲ್ಲೂ ವಿಶೇಷವಾಗಿ ಗೋಚರಿಸಿದುದು ಮೆಚ್ಚುಗೆಗೆ ಕಾರಣವಾದ ಅಂಶ. ಮನವಿನಾಲಗಿಂಚರಾ (ನಳಿನಕಾಂತಿ) ಇದು ಭಾಗ್ಯ (ಬೃಂದಾವನ ಸಾರಂಗ) ಕೃತಿಗಳ ನಂತರ ಕಾರ್ಯಕ್ರಮದ ಪ್ರಧಾನ ರಾಗವಾಗಿ ಕಾಂಬೋಜಿಯನ್ನು ಸುದೀರ್ಘವಾಗಿ, ವಿಸ್ತಾರವಾಗಿ ಆರೈಕೆ ಮಾಡಿದರು. ವಿಶೇಷ ಆರೈಕೆಯನ್ನು ಬೇಡುವ ಈ ರಾಗದ ವಿವಿಧ ಮಜಲುಗಳನ್ನು ಯಶಸ್ವಿಯಾಗಿ ತಲುಪಿ ಏನೇನೂ ಅವಸರಿಸದೆ ರಾಗ ಪ್ರಸ್ತುತಿಗೆ ಸಂಪೂರ್ಣ ನ್ಯಾಯವನ್ನು ಒದಗಿಸಿದುದು ಕಲಾವಿದರ ಹೆಚ್ಚುಗಾರಿಕೆ. ನಂತರ ಬಂದ ಸಂತ ತ್ಯಾಗರಾಜರ “ಔರಂಗಶಾಯಿ’ ಸದ್ರಿ ರಾಗಕ್ಕಾಗಿಯೇ ಅವತರಿಸಿದ ಕೃತಿಯೋ ಎಂಬಷ್ಟು ರಾಗ ಕೃತಿಯ ಅವಿನಾಭಾವ ಸಂಬಂಧ ಇರುವ ಕೃತಿ. ಈ ಭಾಗದಲ್ಲಿ ಅಷ್ಟಾಗಿ ಕೇಳಿ ಬರದ ಕೃತಿ. ಸಂಪೂರ್ಣ ತಾದಾತ್ಮéದಿಂದ ಎಲ್ಲ ಸಂಗತಿಗಳು ಸ್ಪಷ್ಟವಾಗುವಂತೆ ಕಲಾವಿದರು ಹಾಡಿದುದು ಆದರಕ್ಕೆ ಕಾರಣವಾಯಿತು. ಭೂಲೋಕ ವೈಕುಂಠದಲ್ಲಿ ಸಾಹಿತ್ಯ ವಿಸ್ತಾರ ಹಾಗೂ ಕಲ್ಪನಾ ಸ್ವರದಲ್ಲಿ ನಾವೀನ್ಯತೆ (ಆವರ್ತನವನ್ನು “ನಿದಗಾಮಪಾ’ ಎಂಬಲ್ಲಿ ಹೊಂದುವಂತೆ ಚಿತ್ರಿಸುದುದು) ವಿಶೇಷವಾಗಿತ್ತು. ನಂತರದ ಭಾಗಗಳಲ್ಲಿ ಬಂದ ಶ್ರೀ ಸ್ವಾತಿ ತಿರುನಾಳರ ರಚನೆ (ಐವೇಣಿ – ಕುರುಂಜಿ) ಭಾವಯಾಮಿ ಗೋಪಾಲಬಾಲಂ. ಹಾಗೂ ಧನಶ್ರೀ ತಿಲ್ಲಾನ ಎಲ್ಲವೂ ಉತ್ತಮವಾಗಿ ಮೂಡಿ ಬಂದವು.
ವಯಲಿನ್ ವಾದನದಲ್ಲಿ ವಿದ್ವಾನ್ ಗಣರಾಜ ಕಾರ್ಲೆ ಸಹಯೋಗ ಅಪಾರ. ಕಾಮವರ್ಧಿನಿ, ಕಾಂಬೋಜಿ ರಾಗಗಳನ್ನು ಅವರು ಮೀಟಿನಿಂದ ಸೆರೆ ಹಿಡಿದು ಉಣಬಡಿಸಿದುದು ಮೆಚ್ಚುಗೆಗೆ ಪಾತ್ರವಾಯಿತು. ಮೃದಂಗ ಹಾಗೂ ಘಟ ವಾದನದಲ್ಲಿ ಸಹಕರಿಸಿದ ಸುನಿಲ್ ಸುಬ್ರಹ್ಮಣ್ಯ ಹಾಗೂ ಶರತ್ ಕೌಶಿಕ್ ತಾಳವಾದ್ಯಗಳ ಶ್ರೇಷ್ಠ ಕೊಡುಗೆ ಹಾಗೂ ನಿರ್ವಹಣೆಗಳಿಗಾಗಿ ಬಹುಕಾಲ ನೆನಪಾಗಿ ಉಳಿಯುತ್ತಾರೆ.
ವಿ| ರಾಮಕೃಷ್ಣ ಭಟ್ಟ ಯು.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ