ಭರವಸೆಯ ಗಾಯಕ ಅಮಿತ್ ಕುಮಾರ್
Team Udayavani, Nov 2, 2018, 6:00 AM IST
ಮಂಗಳೂರಿನ ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟ್ನ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವದಲ್ಲಿ ಅಮಿತ್ ಕುಮಾರ್ ಬೆಂಗ್ರೆ ಗಾಯನ ಕಚೇರಿ ನಡೆಯಿತು. ರಾಗ ಮಧುವಂತಿಯಲ್ಲಿ ಕಚೇರಿಯನ್ನು ಪ್ರಾರಂಭಿಸಿ ಲಾಲಕೆ ನೈನಾ ವಿಲಂಬಿತ ಏಕ್ ತಾಲ್ ಖ್ಯಾಲ್ ಪ್ರಸ್ತುತ ಪಡಿಸಿದರು ಧೃತ್ ತೀನ್ ತಾಲ್ನಲ್ಲಿ ಝನನ ನನ ಬಾಜೇ ಬಂದಿಶ್ ಹಾಡಿ, ಸುಲಲಿತ ಸ್ವರಸಂಚಾರ ಮತ್ತು ನಿರರ್ಗಳ ತಾನ್ಗಳ ಮೂಲಕ ಮನಗೆದ್ದರು. ಗುರುಗಳಾದ ಪಂ.ಗಣಪತಿ ಭಟ್ ಹಾಸಣಗಿಯವರಿಂದ ಬಳುವಳಿಯಾಗಿ ಬಂದ ಗ್ವಾಲಿಯರ್ ಘರಾಣೆಯ ಬೋಲ್ತಾನ್ ಗಳಿಂದ ರಂಜಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಹಾಡಿದ ಸುಮ್ಮನೆ ಬರುವುದೇ ಮುಕುತಿ ದಾಸರ ಪದ ಪ್ರಸ್ತುತಿಯಿಂದ ಲಘು ಸಂಗೀತದಲ್ಲೂ ತಮ್ಮ ಪರಿಣತಿಯನ್ನು ಪ್ರದರ್ಶಿಸಿದರು. ತಬಲಾದಲ್ಲಿ ಡಾ| ಉದಯ್ ಕುಲಕರ್ಣಿ ಮತ್ತು ಸಂವಾದಿನಿಯಲ್ಲಿ ಸಂದೇಶ್ ಕಾಮತ್ ಸಹಕರಿಸಿದರು.