ಸಾಧಕರೀರ್ವರಿಗೆ ಯಕ್ಷಾಂಗಣ ಪ್ರಶಸ್ತಿ
Team Udayavani, Nov 9, 2018, 6:00 AM IST
ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುವ ಆರನೇ ವರ್ಷದ ನುಡಿಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹ-2018 ನ. 9ರಿಂದ 15ರ ವರೆಗೆ ಎಸ್.ಡಿ.ಎಂ. ಲಾ ಕಾಲೇಜು ಸಭಾಂಗಣದಲ್ಲಿ ಜರಗಲಿದೆ. ಈ ಸಂದರ್ಭದಲ್ಲಿ ನೀಡಲಾಗುವ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ-2018ಕ್ಕೆ ಕಲಾಪೋಷಕ ಎ.ಕೆ. ಜಯರಾಮ ಶೇಖ ಮತ್ತು ಯಕ್ಷಾಂಗಣ ಪ್ರಶಸ್ತಿ-2018 ವಾರ್ಷಿಕ ಗೌರವಕ್ಕೆ ಯಕ್ಷಗಾನ ಗುರು ತೋನ್ಸೆ ಜಯಂತ ಕುಮಾರ್ ಆಯ್ಕೆಯಾಗಿದ್ದಾರೆ.
ಎ.ಕೆ. ಜಯರಾಮ ಶೇಖ
ಎ.ಕೆ. ಜಯರಾಮ ಶೇಖರಿಗೆ ಈಗ 75ರ ಹರೆಯ. ಕೇವಲ ಎಂಟನೆ ತರಗತಿ ಕಲಿತು ಬಸ್ ನಿರ್ವಾಹಕನಾಗಿ ಬದುಕು ಪ್ರಾರಂಭಿಸಿದ ಅವರು 1972ರಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭಿಸಿ, 1981ರಲ್ಲಿ ಪೂರ್ಣ ಪ್ರಮಾಣದ ಬಸ್ ಮಾಲಕರಾಗಿ ಉದ್ಯಮರಂಗದಲ್ಲಿ ಗುರುತಿಸಿಕೊಂಡರು. ಯಕ್ಷಗಾನ ಅಭಿಮಾನಿಯಾಗಿರುವ ಜಯರಾಮ ಶೇಖರು ಮಾವ ಹಿರಿಯ ಅರ್ಥಧಾರಿ ದಿ| ಎ.ಕೆ. ನಾರಾಯಣ ಶೆಟ್ಟರ ಹೆಸರಿನಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಸಂಘಟಿಸುತ್ತಿದ್ದಾರೆ.
ತೋನ್ಸೆ ಜಯಂತ ಕುಮಾರ್
ತೋನ್ಸೆ ಜಯಂತ ಕುಮಾರ್ ಪ್ರೌಢಶಾಲೆಯಲ್ಲಿ ಭೋಧಕೇತರ ಸಿಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಭಾಗವತ ನಾರ್ಣಪ್ಪ ಉಪ್ಪೂರು ಮತ್ತು ಮದ್ದಳೆಗಾರ ಬೆಳಿಂಜೆ ತಿಮ್ಮಪ್ಪ ನಾಯ್ಕರ ಶಿಷ್ಯನಾಗಿ ಹಿಮ್ಮೇಳದಲ್ಲಿ ಪರಿಣತಿ ಹೊಂದಿ ಮುಂದೆ ಯಕ್ಷರಂಗದ ನಿರ್ದೇಶಕ ಹಾಗೂ ಭಾಗವತರಾಗಿ ಬೆಳೆದರು. ಕೃಷ್ಣ, ಮೀನಾಕ್ಷಿ, ದ್ರೌಪದಿ, ಹನುಮಂತ ಇತ್ಯಾದಿ ಪಾತ್ರಗಳ ಮೂಲಕ ಬಡಗುತಿಟ್ಟಿನ ವೇಷಧಾರಿಯಾಗಿಯೂ ಹೆಸರು ಗಳಿಸಿದರು. ಸುಮಾರು 15 ಯಕ್ಷಗಾನ ತಂಡಗಳನ್ನು ಹಾಗೂ ತರಬೇತಿ ಶಿಬಿರಗಳನ್ನು ಸ್ಥಾಪಿಸಿ ನೂರಾರು ಬಾಲಕ-ಬಾಲಕಿಯರಿಗೆ ಯಕ್ಷಗಾನವನ್ನು ಕಲಿಸಿದ ಜಯಂತ ಕುಮಾರ್ ಉಡುಪಿ ಜಿಲ್ಲೆಯ ಕೆಲವು ಪ್ರೌಢಶಾಲೆಗಳಲ್ಲಿ ಗುರುವಾಗಿ ತರಬೇತಿ ನೀಡುತ್ತಿದ್ದಾರೆ.
ಈ ಬಾರಿಯ “ಷಷ್ಠಮ ನುಡಿಹಬ್ಬದಲ್ಲಿ “ಕಲ್ಯಾಣ ಸಪ್ತಕ’ ಎಂಬ ಪರಿಕಲ್ಪನೆಯೊಂದಿಗಗೆ ಯಕ್ಷಾಂಗಣ ಮಂಗಳೂರು ಆಯೋಜಿಸಿರುವ ತಾಳೆಮದ್ದಳೆ ಸಪ್ತಾಹದಲ್ಲಿ ಕ್ರಮವಾಗಿ ಗಿರಿಜಾ ಕಲ್ಯಾಣ, ಮಾರೀಷಾ ಕಲ್ಯಾಣ, ರತ್ನಾವತಿ ಕಲ್ಯಾಣ, ಸುಭದ್ರಾ ಕಲ್ಯಾಣ (ತುಳು), ರುಕ್ಮಿಣಿ ಕಲ್ಯಾಣ, ದೇವಯಾನಿ ಕಲ್ಯಾಣ ಮತ್ತು ರತಿ ಕಲ್ಯಾಣ ಪ್ರಸಂಗಗಳನ್ನು ಪ್ರಸ್ತುತ್ತ ಪಡಿಸಲಿದ್ದು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಎಂಭತ್ತಕ್ಕೂ ಮಿಕ್ಕಿದ ಕಲಾವಿದರು ಭಾಗವಹಿಸುವರು.
ಭಾಸ್ಕರ ರೈ ಕುಕ್ಕುವಳ್ಳಿ