ಲಕ್ಷ್ಮಣ ದಾಸ್, ವೆಂಕಟ ಶಾಸ್ತ್ರಿಗೆ ಅಚ್ಚುತಶ್ರೀ
Team Udayavani, Dec 7, 2018, 6:00 AM IST
ಕಥಾ ಕೀರ್ತನೆ ಕಲಾಪ್ರಕಾರದಲ್ಲಿ ಅಗ್ರಣಿಯಾಗಿ ಮೆರೆದಿದ್ದ ಸಂತ ಭದ್ರಗಿರಿ ಅಚ್ಯುತದಾಸರ ಸಂಸ್ಮರಣಾರ್ಥ ಅವರ ಶಿಷ್ಯ ಲಕ್ಷ್ಮಣ್ ದಾಸ್ ವೇಲಣ್ಕರ್ ಮತ್ತವರ ಪುತ್ರರಾದ ಗಾಯಕ ದತ್ತಾತ್ರೇಯ ವೇಲಣ್ಕರ್ ಷಡ್ಜ ಕಲಾಕೇಂದ್ರ ಮುಖೇನ ನೀಡುತ್ತಿರುವ “ಅಚ್ಯುತ ಶ್ರೀ’ ಪ್ರಶಸ್ತಿಯನ್ನು ಈ ಬಾರಿಯ ಹೆಸರಾಂತ ಕೀರ್ತನೆಗಾರರಾದ ಡಾ| ಲಕ್ಷ್ಮಣ್ದಾಸ್ ಮತ್ತು ಡಾ| ಮುಪ್ಪ ವರಪು ವೆಂಕಟ ಸಿಂಹಾಚಲ ಶಾಸ್ತ್ರಿಯವರಿಗೆ ಪ್ರದಾನಿಸಲಾಗಿದೆ.ವೇಲಣ್ಕರ್ ಕುಟುಂಬ ಮೂಲತಃ ಕೊಕ್ಕಡದವರಾಗಿದ್ದು, ಕಳೆದ ವರ್ಷದಿಂದೀಚೆಗೆ ಪ್ರಶಸ್ತಿ ನೀಡುತ್ತಿದೆ.
ಡಾ| ಲಕ್ಷ್ಮಣ್ದಾಸ್
1969ರಿಂದ ಸಂಕೀರ್ತನೆಯಲ್ಲಿ ತೊಡಗಿರುವ ಇವರು ವಿದೇಶಕ್ಕೂ ಕೀರ್ತನೆಯನ್ನು ಒಯ್ದ ಹಿರಿಮೆ ಹೊಂದಿದ್ದಾರೆ. ಆರ್. ಗುರುರಾಜುಲು ನಾಯ್ಡು ಇವರ ಗುರು. ಸಮಾನತೆಯ ಹರಿಕಾರರಾದ ಬುದ್ಧ, ಬಸವಣ್ಣ, ಮಹಾಕವಿ ಪಂಪ, ಗಾನ ಯೋಗಿ ಪುಟ್ಟರಾಜ ಗವಾಯಿ, ನಾಟಕರತ್ನ ಗುಬ್ಬಿ ವೀರಣ್ಣ ಮುಂತಾದವರ ಸಹಿತ ಇನ್ನು ಹಲವಾರು ಮಹಾಪುರುಷರ ಜೀವನವನ್ನು ಕಥಾ ಕೀರ್ತನವನ್ನಾಗಿಸಿ ಕೀರ್ತನಾ ರಂಗದಲ್ಲಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದ್ದಾರೆ. ಆಕಾಶವಾಣಿ/ದೂರದರ್ಶನ ಸರಕಾರದ ಮಾಧ್ಯಮದಲ್ಲಿ ಇವರು ಆಪ್ಯಾಯ ಮಾನ್ಯರು. ರಂಗಭೂಮಿ /ಬರವಣಿಗೆಯಲ್ಲೂ ಸಾಧನೆ ಕಮ್ಮಿಯಿಲ್ಲ.
ಎಂ.ವಿ. ಸಿಂಹಾಚಲ ಶಾಸ್ತ್ರಿ
ಪ್ರಸ್ತುತ ತಿರುಪತಿಯ ಶ್ರೀ ವೆಂಕಟೇಶ್ವರ ಕಾಲೇಜಿನ ಸಂಗೀತ/ನೃತ್ಯ ವಿಭಾಗದ ಮುಖ್ಯಸ್ಥರಾಗಿರುವ ಎಂ.ವಿ. ಸಿಂಹಾಚಲ ಶಾಸ್ತ್ರಿಯವರ ಗುರು ದಿ| ಕರೂರು ಕೃಷ್ಣ ದಾಸ್. ಶ್ರೀ ರಾಮಾಯಣ ಕೀರ್ತನೆಗೆ ಪ್ರಖ್ಯಾತರಾಗಿರುವ ಇವರು ಕಥಾ ಕೀರ್ತನೆಯನ್ನು ಜನಕಥಾ ಕೀರ್ತನವನ್ನಾಗಿಸಿದ ಕೀರ್ತನಾ ಶಿರೋಮಣಿ. “ಹರಿಕಥಾ ಸುಧಾನಿಧಿ’, “ಹರಿ ಕಥಾ ಚೂಡಾವಣಿ’, “ಶ್ರೀರಾಮ ಕಥಾ ಸುಧಾನಿಧಿ’, ಸೇರಿದಂತೆ ಹಲವಾರು ಬಿರುದುಗಳು, ಸಂಗೀತ ನಾಟಕ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ, ಆಂಧ್ರ ಸರ್ಕಾರದ ಯುಗಾದಿ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.
ಸಂದೀಪ್ ನಾಯಕ್ ಸುಜೀರ್