ಹೊಸ ಪ್ರಯೋಗ ಜೋಡು ತಾಳ ಮದ್ದಳೆ ಕೂಟ
Team Udayavani, Jan 25, 2019, 12:30 AM IST
ಯಕ್ಷಗಾನ ತಾಳ ಮದ್ದಳೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಜೋಡು ಕೂಟವೊಂದು ಡಿ. 25ರಂದು ಪಾವಂಜೆಯ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬಯಲು ರಂಗ ಮಂಟಪದಲ್ಲಿ ಆಕರ್ಷಣೀಯವಾಗಿ ಮತ್ತು ಕುತೂಹಲಕಾರಿಯಾಗಿ ಜರಗಿತು. ಇದು ತಾಳ ಮದ್ದಳೆ ಪ್ರೇಮಿ ಚಂದ್ರಹಾಸ ಬಾಳ ಅವರ ಪರಿಕಲ್ಪನೆ ಹಾಗೂ ಕೊಡುಗೆಯಾಗಿದ್ದು, ಕೂಟ ಯಾವ ರೀತಿ ನಡೆಯಲಿದೆ ಎಂಬ ಕುತೂಹಲ ಕಾರ್ಯಕ್ರಮ ಆರಂಭವಾಗುವವರೆಗೂ ಮುಂದುವರಿದಿತ್ತು.
19 ಅರ್ಥಧಾರಿಗಳು, 6 ಮಂದಿ ಖ್ಯಾತ ಭಾಗವತರು ಸೇರಿ ಒಟ್ಟು 25 ಮಂದಿ ಕಲಾವಿದರಿದ್ದರು. ಏನಾದರೂ ಒಂದು ಹೊಸದನ್ನು ನೀಡಬೇಕು ಎಂಬ ಆಸೆ ಮತ್ತು ಬಯಕೆಯೊಂದಿಗೆ ಚಿಂತಿಸಿದಾಗ ಹುಟ್ಟು ಪಡೆದದ್ದೇ ಈ ಜೋಡು ತಾಳ ಮದ್ದಳೆ ಕೂಟ. ಈ ಕೂಟದ ಹಿಂದೆ ಒಂದು ಸುವ್ಯವಸ್ಥಿತ ಯೋಜನೆಯನ್ನೂ ಚಂದ್ರಹಾಸ ಅವರು ಮಾಡಿದ್ದರು. ಅವರೇ ಹೇಳಿಕೊಂಡ ಪ್ರಕಾರ, ಯಾವ ಹಾಡನ್ನು ಯಾವ ಭಾಗವತರು ಹಾಡಬೇಕು, ಯಾವ ಹಾಡಿಗೆ ಯಾವ ಕಲಾವಿದ ಅರ್ಥ ಹೇಳಬೇಕು, ಒಬ್ಬ ಕಲಾವಿದ ಕನಿಷ್ಠ 2 ಪದ್ಯಗಳಿಗೆ ಅರ್ಥ ಹೇಳಲೇಬೇಕು, ಕಥೆ ಎಲ್ಲಿಂದ ಆರಂಭವಾಗಬೇಕು …ಇತ್ಯಾದಿಗಳನ್ನೆಲ್ಲ ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ಕಲಾವಿದರಿಗೆ ಲಿಖೀತವಾಗಿ ತಿಳಿಸಲಾಗಿತ್ತು. ಇವುಗಳನ್ನು ತಿಳಿಸುವ ಹೊತ್ತಿಗೆ ಒಂದು ಮೊತ್ತದ ಗೌರವ ಧನ ಮತ್ತು ಸ್ಮರಣಿಕೆ ನೀಡಲಾಗಿತ್ತು.
ಜೋಡು ಕೂಟವಾಗಿರುವ ಕಾರಣ ಒಂದೊಂದು ಪಾತ್ರದಲ್ಲಿ ಇಬ್ಬಿಬ್ಬರು ವೇದಿಕೆಯಲ್ಲಿರುತ್ತಿದ್ದು, ಯಾವ ಪದ್ಯಕ್ಕೆ ಯಾರು ಅರ್ಥ ಹೇಳಬೇಕು ಎಂಬ ಗೊಂದಲ ಮೂಡದಂತೆ ಮೊದಲೇ ಇಂಥದ್ದೊಂದು ವ್ಯವಸ್ಥೆ ಮಾಡಲಾಗಿದೆ. ಒಪ್ಪಿಕೊಂಡಿದ್ದ ಯಾವೊಬ್ಬ ಕಲಾವಿದನೂ ಕೂಟಕ್ಕೆ ಗೈರಾಗಲಿಲ್ಲ. ನಾನು ಇಂಥದ್ದೊಂದು ಕೂಟ ಮಾಡುತ್ತೇನೆ ಎಂದಾಗ ತಮಾಷೆ ಮಾಡಿದವರೂ ಇದ್ದಾರೆ. ಅಂಥ ಮಹಾನ್ ಕಲಾವಿದರನ್ನು ಒಟ್ಟು ಸೇರಿಸುವುದು ಸಣ್ಣ ಕೆಲಸವಲ್ಲ ಎಂದು ಹೇಳಿ ನಿರುತ್ತೇಜಿಸಿದವರೂ ಇದ್ದಾರೆ. ಆದರೆ ಎಲ್ಲವೂ ನಿರೀಕ್ಷೆಯಂತೆ ಸುವ್ಯವಸ್ಥಿತವಾಗಿ ನಡೆದಿದೆ. ಕೆಲವು ಆತ್ಮೀಯ ಗೆಳೆಯರು, ಕುಟುಂಬಿಕರ ಸಹಾಯ, ಕಲಾವಿದ ವಾಸುದೇವ ರಂಗ ಭಟ್ಟ ಅವರ ಪ್ರೋತ್ಸಾಹ ಮತ್ತು ಸಹಕಾರ ವಿಶೇಷವಾಗಿತ್ತು ಎನ್ನುತ್ತಾರೆ ಚಂದ್ರಹಾಸ ಬಾಳ ಅವರು. ಒಂದು ಸಂಘಟನೆಯ ಹೆಸರಿಲ್ಲದೆ ಏಕವ್ಯಕ್ತಿಯ ಹೆಸರಿನಲ್ಲೇ ಇಂಥದ್ದೊಂದು ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ.
ಹೀಗಿತ್ತು ಕೂಟ
ಜೋಡು ತಾಳ ಮದ್ದಳೆ ಕೂಟ ಹೇಗೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಅದಕ್ಕೆ ಉತ್ತರ ಸಿಕ್ಕಿದ್ದು ಆ ವೇದಿಕೆಯಿಂದಲೇ. ಒಂದೊಂದು ಪಾತ್ರದಲ್ಲಿ ಇಬ್ಬಿಬ್ಬರು ಮುಖಾಮುಖಿಯಾಗುವುದು. ಒಬ್ಬ ಹೇಳಿದ ಅರ್ಥಕ್ಕೆ ಎದುರಿನಿಂದ ಮತ್ತೂಬ್ಬ ಉತ್ತರಿಸುವುದು, ಮತ್ತೂಬ್ಬ ಹೇಳಿದ ಅರ್ಥಕ್ಕೆ ಇನ್ನೊಬ್ಬ ಉತ್ತರಿಸುವುದು. ಆಗ ಅಲ್ಲಿ ಚಿಂತನೆ ಹೆಚ್ಚು ವಿಶಾಲವಾಗುತ್ತದೆ. ಒಂದು ಪಾತ್ರ ಒಬ್ಬರು ಕಲಾವಿದರಲ್ಲಿ ಹೊರ ಹೊಮ್ಮುತ್ತದೆ. ಕರ್ಣ ಮತ್ತು ಅರ್ಜುನನಾಗಿ ತಲಾ ನಾಲ್ವರು ಅರ್ಥಧಾರಿಗಳಿದ್ದರು. ಬೆಳಗ್ಗೆ 10.30ಕ್ಕೆ ಆರಂಭವಾದ ಕೂಟ ಮುಸ್ಸಂಜೆ 7.30ರ ವರಗೆ ವಿರಾಮರಹಿತವಾಗಿ ಮುಂದುವರಿದಿತ್ತು. ಮಾತಿನ ಮಂಥನಕ್ಕೆ ಕಿಂಚಿತ್ ಕೊರತೆಯೂ ಆಗಿಲ್ಲ. ವಾದ-ಪ್ರತಿವಾದದ ಖುಷಿಯಲ್ಲಿ ಪ್ರೇಕ್ಷಕರು ಮಿಂದೆದಿದ್ದರು.
ಸಂಪ್ರದಾಯಕ್ಕೂ ಮನ್ನಣೆ
ಕೂಟದಲ್ಲಿ ಯಕ್ಷಗಾನದ ಸಂಪ್ರದಾಯಕ್ಕೂ ಮನ್ನಣೆ ನೀಡಲಾಗಿದೆ. ಇಲ್ಲಿ ದ್ವಂದ್ವ ಹಾಡುಗಾರಿಕೆಯಿತ್ತು. ಬೆಳಗ್ಗಿನ ಅವಧಿಯಲ್ಲಿ ಬಲಿಪ ಪ್ರಸಾದ ಮತ್ತು ಪುಂಡಿಕಾ ಗೋಪಾಲ ಕೃಷ್ಣ ಭಟ್ ಅವರಿದ್ದರು. ಒಂದೇ ಶೈಲಿಯ ಇಬ್ಬರನ್ನು ಒಂದೇ ಹೊತ್ತಿನಲ್ಲಿ ದ್ವಂದ್ವಕ್ಕೆ ಆರಿಸಿಕೊಂಡದ್ದೇಕೆ ಎಂಬ ಪ್ರಶ್ನೆಗೆ ಚಂದ್ರಹಾಸ ಅವರು ಉತ್ತರಿಸಿದ್ದು , ಬೆಳಗ್ಗಿನ ಅವಧಿಯಲ್ಲಿ ಆದಷ್ಟು ಸಂಪ್ರದಾಯ ಉಳಿಯಲಿ ಎಂಬ ಉದ್ದೇಶ ಎಂಬುದು.
ಈ ಜೋಡು ತಾಳ ಮದ್ದಳೆ ಕೂಟವು ಚಂದ್ರ ಹಾಸ ಬಾಳರದ್ದೇ ಕಲ್ಪನೆ ಮತ್ತು ಮುಂದೆ ಇಂಥ ಕೂಟ ಮಾಡುವಾಗ ಇವರ ಉಲ್ಲೇಖವಾಗುವುದು ಅಗತ್ಯ. ಹೊಸತನ ಅನ್ವೇಷಣೆಯಲ್ಲಿರುವ ಯಕ್ಷಗಾನ ರಂಗಕ್ಕೆ ಇದೊಂದು ಅಮೂಲ್ಯ ಕೊಡುಗೆಯೇ. ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಬರುವುದು ಖಚಿತ. ಕಾರ್ಯಕ್ರಮಕ್ಕೆ ದೀರ್ಘ ಕಾಲಾವಕಾಶ ಬೇಕಿದೆಯಾದರೂ ಇಲ್ಲಿ ಮಾತಿನ ಮಂಥನವಾಗುತ್ತದೆ. ಒಂದು ನಿರ್ದಿಷ್ಟ ಪಾತ್ರದಲ್ಲಿ ಯಾವ ಕಲಾವಿದ ಹೆಚ್ಚು ಮಿಂಚಲು ಸಮರ್ಥ ಎಂಬುದಕ್ಕೂ ಇದೊಂದು ಪರೀಕ್ಷಾ ವೇದಿಕೆಯಾಗುತ್ತದೆ.
ಹೀಗೆ ಜೋಡು ತಾಳಮದ್ದಳೆ ಕೂಟವೊಂದನ್ನು ಚಂದ್ರಹಾಸ ಬಾಳ ಅವರು ಯಕ್ಷಗಾನ ರಂಗಕ್ಕೆ ಪರಿಚಯಿಸಿದ್ದಾರೆ. ಮುಂದೆ ಇದರ ಭವಿಷ್ಯ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪುತ್ತಿಗೆ ಪದ್ಮನಾಭ ರೈ