ಕಾವ್ಯದ ಅಂತರಂಗ ತೋರಿಸಿದ ಕಾವ್ಯಾಂತರಂಗ
Team Udayavani, Feb 15, 2019, 12:30 AM IST
ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಇವರು ಯಕ್ಷಮೇನಕಾ ಹಾಗೂ ಇತರ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಅಲಂಗಾರಿನಲ್ಲಿ ಆಯೋಜಿಸಿದ್ದ ಯಕ್ಷ ಕಾವ್ಯಾಂತರಂಗ -2 ಶ್ರೀಧರ ಡಿ.ಎಸ್.ರವರ ನಿರ್ದೇಶನದಲ್ಲಿ ಹಾಗೂ ತಾಳಮದ್ದಲೆಯ ಹಿನ್ನೆಲೆಯ ಅರ್ಥಾಂತರಂಗದ ಹನ್ನೊಂದನೆಯ ಪ್ರಯೋಗವು ರಾಧಾಕೃಷ್ಣ ಕಲ್ಚಾರರ ನಿರ್ದೇಶನದಲ್ಲಿ ಸಂಪನ್ನಗೊಂಡಿತು.
ಕಾವ್ಯಾಂತರಂಗದಲ್ಲಿ ಶ್ರೀಧರ ಡಿ.ಎಸ್. ನಿರೂಪಕರು, ನಿರ್ದೇಶಕರು. ಒಟ್ಟು 15 ಕವಿಗಳ,45 ತಾಳ ರಾಗಗಳ ಮಟ್ಟಿನ ,ಬೇರೆ ಬೇರೆ ಪ್ರಸಂಗಗಳ ಪದ್ಯಗಳನ್ನು ಅಭ್ಯಸಿಸಿ, ಆಯ್ದು ಸಿದ್ಧಪಡಿಸಿ ಪ್ರಸ್ತುತಿಪಡಿಸಿದ ಕಲಾಪ್ರೀತಿ ಅವರದ್ದು. ಕವಿಯ ಕಾಲ,ಚರಿತ್ರೆಗಳನ್ನು ಡಿ.ಎಸ್.ರವರು ಹೇಳಿದಂತೆ ಆತನ ಬಗೆಗಿನ ಚಿಂತನೆಯಲ್ಲಿರುವಾಗಲೇ ಆ ಕವಿ ರಚಿತ ಹಾಡುಗಳನ್ನು ಕೇಳಿದಾಗ ರೋಮಾಂಚನ ಮತ್ತು ಹರುಷಗಳೆರಡೂ ಆದುದು ನಿಜವೇ. ಡಿ.ಎಸ್.ರವರ ಅನುಭವದಂತೆ ಧ್ವಜಪುರದ ನಾಗಪ್ಪಯ್ಯ (1600-1650) ಬರೆದ ಪ್ರಸಂಗಗಳು 5. ಚಂದ್ರಾವಳಿ, ನಳಚರಿತ್ರೆ, ಇಂದ್ರಕೀಲಕ, ಘಟೋತ್ಕಚ ಕಾಳಗ, ಸೌಗಂಧಿಕಾ ಹರಣ, ಜಟಾಸುರ ವಧೆ. ಹೀಗೇ ಡಿ.ಎಸ್.ರವರು ಪಾಂಡೇಶ್ವರ ವೆಂಕಟ ಹಾಗೂ ಅವರ ಪ್ರಸಂಗಗಳು, ಹಳೆಮಕ್ಕಿ ರಾಮ,ಮೂಲಿಕೆ ರಾಮಕೃಷ್ಣಯ್ಯ,ಗೇರುಸೊಪ್ಪೆ ಶಾಂತಪ್ಪಯ್ಯ,ಜತ್ತಿ ಈಶ್ವರ ಭಾಗವತ, ಬಲಿಪರೋ, ಹೊಳ್ಳರೋ, ಶೀಮಂತೂರಿನವರೋ, ನಂಬಿಯಾರವರೋ ಹೀಗೇಪರಿಚಯಿ ಸುತ್ತಿದ್ದಂತೆಯೇ ಭಾಗವತರುಗಳಾದ ಶಿವಶಂಕರ ಬಲಿಪ, ಪುತ್ತೂರು ರಮೇಶ ಭಟ್, ದಿನೇಶ್ ಭಟ್ ಒಬ್ಬೊಬ್ಬರಾಗಿ ಹಾಡಿದರು. ಕೃಷ್ಣಪ್ರಕಾಶ ಉಳಿತ್ತಾಯರ ಮದ್ದಳೆ, ಜತೆಗೆ ಅವಿನಾಶ ಬೈಪಡಿತ್ತಾಯರು. ಮಿಜಾರು ದಯಾನಂದ ಶೆಟ್ಟಿಗಾರ, ಮುರಳಿ ಪಂಜಿಗ¨ªೆ ಹಿಮ್ಮೇಳದ ಸಾಂಗತ್ಯ ಒದಗಿಸಿದರು.
ಆಶು ಸಂಭಾಷಣೆಯ ಆಯಾಮವಾದ ಸಂವಾದದಲ್ಲಿ ಆರಂಭದಲ್ಲಿ ಸುಮಾರು ಐದು ನಿಮಿಷ ಅವಧಿಯ ಕೃಷ್ಣನ ಪಾತ್ರವನ್ನು ಪ್ರಸ್ತುತಪಡಿಸಲಾಯಿತು. ರಾಜಸೂಯಾಧ್ವರದ ಭಾಗ. ಕೃಷ್ಣನ ಪೀಠಿಕೆ ಪದ್ಯ ಕೇಳಿ ನಸುನಗುತ ಅಚ್ಯುತನು, ಇದಕ್ಕೆ ಕೃಷ್ಣ ಪಾತ್ರಧಾರಿ ಪಾತ್ರವೇ ತಾನಾಗಿ ಮಾತಾಡಿದ್ದು ಹಿತವೆನಿಸಿತು. ಪದ್ಯದ ಹೂರಣದ ಯಾವೊಂದು ವಿಷಯವನ್ನೂ ಬಿಡದೆ ಚುಟುಕಾಗಿ ಅರ್ಥವಿಸ್ತಾರ ಮಾಡಿದರು. ಇದೇ ಪದ್ಯಕ್ಕೆ ಕೃಷ್ಣ 2 ಅಂತೂ ಒಬ್ಬ ನಾಯಕ ಸಿಕ್ಕಿದನÇÉಾ ಎಂದು ಆರಂಭಿಸಿದ ಈ ವಾಕ್ಯದ ಅರ್ಥದ ಭಾವ ಪುರಾಣಲೋಕದಿಂದ ಕಲಿಯುಗದವರೆಗೂ ಯೋಚನೆಯನ್ನು ಉಂಟು ಮಾಡುವಂತಿತ್ತು. ಕೃಷ್ಣನ ಬಾಲ್ಯದ ದುಷ್ಟ ಮರ್ದನದ ಕಾರ್ಯವನ್ನು – ಮಾಗಧ – ಶಿಶುಪಾಲರ ದೌಷ್ಟವನ್ನು ಅವರ ನಿವಾರಣೆಯ ಉಪಾಯವನ್ನು ಒಳಗೊಂಡ ಸುಮಾರು 10 ನಿಮಿಷಗಳ ಅರ್ಥ ವಿಭಾಗವಿದು.
ಎರಡನೇ ಅವಧಿಯಲ್ಲಿ ಪ್ರಸಂಗ ರಾಜಸೂಯಾಧ್ವರ .ದ್ವಾರಕೆಯಿಂದ ಕೃಷ್ಣ ಇಂದ್ರಪ್ರಸ್ಥಕ್ಕೆ ಬಂದ ಸಂದರ್ಭ. ಕೃಷ್ಣನನ್ನು ಧರ್ಮರಾಯ ಎದುರುಗೊಳ್ಳುವ ಸನ್ನಿವೇಶ ಕೃಷ್ಣ -ಧರ್ಮರಾಯ ಇವರ ಸಂಭಾಷಣೆ ಒಂದಕ್ಕೊಂದು ಪೂರಕವಾಗಿ ಸಾಗಿಬಂತು. ಧರ್ಮರಾಯನ ಮಾತಿನಲ್ಲಿ ಅಲ್ಲಲ್ಲಿ ಎದ್ದು ಕಾಣುತ್ತಿದ್ದ ಮಾರ್ಮಿಕವಾದ ಧ್ವನಿ ಕೃಷ್ಣನ ದೇವತ್ವವನ್ನು ಸರಳವಾಗಿ ಎತ್ತಿ ಹಿಡಿದಿತ್ತು. ಪಾಂಡವರ ಮನಸ್ಸಿನ ಸ್ಥಿರತೆಯ ಪರೀಕ್ಷೆ, ಧರ್ಮರಾಯನ ಕಳಕಳಿ ಎಲ್ಲವೂ ಗಮನಿಸುವಂತಿತ್ತು. ಇದೇ ಭಾಗವು ಅದೇ ಕಲಾವಿದರು ಆದರೆ ಪಾತ್ರ ಬದಲಾವಣೆಯೊಂದಿಗೆ ಮಗದೊಮ್ಮೆ ಪ್ರಸ್ತುತಗೊಂಡಿತು. ಮೊದಲನೇ ಧರ್ಮರಾಯನ ಪ್ರಸ್ತುತಿಗಿಂತ ಎರಡನೆ ಧರ್ಮರಾಯನ ಪ್ರಸ್ತುತಿ ಭಿನ್ನವಾಗಿತ್ತು. ಪಿತೃವಿಗೆ ನಳ-ನಹುಷರ ಸಾಲಿನಲ್ಲಿ ಸಿಗದಿದ್ದ ಸ್ಥಾನಕ್ಕೆ ದುಃಖೀಸುವ ಭಾಗ ಭಾವಪೂರ್ಣವಾಗಿದ್ದು, ಮೊದಲನೇ ಪ್ರಸ್ತುತಿಗಿಂತ ಆಪ್ಯಾಯಮಾನವಾಗಿತ್ತು.ಕೃಷ್ಣ ಧರ್ಮರಾಯನ ಸಂಭಾಷಣೆಯಲ್ಲಿ ಕೃಷ್ಣನ ನಸುಹಾಸ್ಯ, ಧರ್ಮರಾಯನ ಆತಂಕವನ್ನು ದೂರ ಮಾಡುವಂತಿತ್ತು.
ಕೊನೆಯ ಭಾಗ ಕೀಚಕ ವಧೆಯಲ್ಲಿ ಸುದೇಷ್ಣೆ – ಸೈರಂಧ್ರಿ ಸಂಭಾಷಣೆ ತುಸು ದೀರ್ಘ ಎಂದೆನಿಸಿದರೂ ಮನಸ್ಸಿಗೆ ಮುದ ನೀಡಿದ ಭಾಗ. ಅನಕ್ಷರಸ್ಥ, ಅರಸಿಕ ಸೇವಕಿಯರ ನಡುವಿದ್ದ ಸುದೇಷ್ಣೆ ರಾಜಬೀದಿಯಲ್ಲಿ ಬರುತ್ತಿದ್ದ ಸೈರಂಧ್ರಿಯನ್ನು ಕಂಡು ತನ್ನ ಮನಸ್ಸಿನ ಭಾವವನ್ನು ಹೊರಗೆ ವ್ಯಕ್ತಪಡಿಸಲು ಆದೀತೋ ಎಂಬ ಭಾವದ ಅರ್ಥ ಹಿಡಿಸಿತು .
ಈರ್ವರೊಳಗೆ ಸಣ್ಣ ಸಣ್ಣ ವಾಕ್ಯಗಳ ಚುಟುಕು ಸಂಭಾಷಣೆ ಬರದಲ್ಲಿ ಭರ ಉಂಟು’, ನೀವಾಗಿ ಹೊರಟ¨ªೋ’ ಹೊರಡಬೇಕಾಗಿ ಬಂತು’, ಹೀಗೆ ಮಾತುಗಳಲ್ಲಿ ಸಂಭಾಷಣೆ ರಸವತ್ತಾಗಿ ಸಾಗಿ ಬಂತು.
ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಹರೀಶ್ ಬೊಳಂತಿಮೊಗರು, ವಿಷ್ಣು ಶರ್ಮ ವಾಟೆಪಡು³ ಇದ್ದರು.ಬಲಿಪ ಪ್ರಸಾದ ಭಟ್, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕೃಷ್ಣಪ್ರಕಾಶ ಉಳಿತ್ತಾಯ, ಅವಿನಾಶ ಬೈಪಡಿತ್ತಾಯ, ದೇವಾನಂದ ಭಟ್, ಮುರಾರಿ ಹಿಮ್ಮೇಳದಲ್ಲಿದ್ದರು.
ವಿ| ಸಾವಿತ್ರಿ ಶಾಸ್ತ್ರಿ