ವಿದ್ಯಾರ್ಥಿಗಳ ಪ್ರತಿಭೆ ಅಭಿವ್ಯಕ್ತಿಗೆ ವೇದಿಕೆಯಾದ ಪ್ರತಿಭಾ ದಿನ
Team Udayavani, Mar 22, 2019, 12:30 AM IST
ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಆಶಯದ ಭಾಗವಾಗಿ ಈ ಬಾರಿ ಕೂಡಾ ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗಿದ್ದ ವೇದಿಕೆ ವಿದ್ಯಾರ್ಥಿಗಳ ವೈವಿಧ್ಯಮಯ ಆಸಕ್ತಿ ,ಪ್ರಬುದ್ಧತೆ, ವಿಚಾರಧಾರೆ , ಕೌಶಲ್ಯ, ಕ್ರಿಯಾಶೀಲತೆ ಮತ್ತು ಪ್ರತಿಭಾ ಪ್ರದರ್ಶನಕ್ಕೆ ಸಾಕ್ಷಿಯಾಯಿತು. 14 ತಂಡಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿ ತಂಡಕ್ಕೆ 25 ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿತ್ತು.
ಬಹುತೇಕ ಎಲ್ಲಾ ತಂಡಗಳು ಜನಪದ ಮತ್ತು ಗ್ರಾಮೀಣ ಜನ ಜೀವನ ,ಸಾಂಸ್ಕೃತಿಕ ವೈವಿಧ್ಯವನ್ನು ಬಿಂಬಿಸುವಂತಹ ಸನ್ನಿವೇಶಗಳನ್ನು ನೃತ್ಯ ನಾಟಕ ರೂಪಕಗಳ ಮೂಲಕ ಪ್ರದರ್ಶಿಸಿದ್ದು ವಿದ್ಯಾರ್ಥಿಗಳ ಸೃಜನಶೀಲತೆಯ ಬಗ್ಗೆ ಮೆಚ್ಚುಗೆ ತರಿಸಿತು. ಹಾಲಕ್ಕಿ ನೃತ್ಯ, ಕೊಡವ ನೃತ್ಯ,ಕಂಸಾಳೆ, ಹೌಂದೇರಾಯನ ಓಲಗ,ಹಣಬಿನ ಕುಣಿತ, ಸುಗ್ಗಿ ಕುಣಿತ, ಭೂತ ಕೋಲ, ಪೂಜಾ ಕುಣಿತ, ಕಂಗೀಲು ನೃತ್ಯ, ಚಂಡೇ ವಾದನ, ನಾಸಿಕ್ ಬ್ಯಾಂಡ್,ಶೋಭಲೆ,ರಾಜಸ್ತಾನದ ಗುಮ್ರಾ ನೃತ್ಯ,ಹರ್ಯಾಣದ ನೃತ್ಯ,ಲಾವಣಿ, ಕಥಕ್ಕಳಿ, ಕೋಲಾಟ, ಡೊಳ್ಳು ಕುಣಿತ, ಬಂಜಾರ ನೃತ್ಯ, ಕಥಕ್ಕಳಿ ಮೊದಲಾದವು ಒಂದು ದೊಡ್ಡ ಜನಪದ ಲೋಕವನ್ನೇ ವೇದಿಕೆಯ ಮೇಲೆ ತೆರೆದಿಡುವಲ್ಲಿ ಯಶಸ್ವಿಯಾದವು.
ಒಡಿಸ್ಸಿ ನೃತ್ಯ, ದಶಾವತಾರ ನೃತ್ಯ,ಹಲವು ತಂಡಗಳ ಚಿತ್ರ ಕಲಾವಿದರು ವೇದಿಕೆಯಲ್ಲಿ ರೇಖಾ ಚಿತ್ರವೂ ಸೇರಿದಂತೆ ತಮ್ಮ ಚಿತ್ರ ಕಲೆಯ ಪ್ರದರ್ಶನ ನೀಡಿದ್ದು , ಒಂದೇ ಹಾಡಿಗೆ ಭರತನಾಟ್ಯ ಮತ್ತು ಮೋಹಿನಿಯಾಟ್ಟಂ ಜಂಟಿ ಪ್ರದರ್ಶನ ನೀಡಿದ್ದು, ಯಕ್ಷಗಾನ ಚೌಕಿಯಿಂದ ಬಣ್ಣ ಕಟ್ಟಿ ಕುಣಿದು ಕೊನೆಯಲ್ಲಿ ಹಣಕ್ಕಾಗಿ ಧಣಿಯೆದುರು ಕೈ ಚಾಚಬೇಕಾದ ಯಕ್ಷಗಾನ ಕಲಾವಿದರ ಪರಿಸ್ಥಿತಿ ಬಗೆಗೆ ಕಾಳಜಿ ತೋರಿಸಿದ್ದು, ಅಮ್ಮನ ಹಾಡಿನ ಸೋಲೋ ನೃತ್ಯ, ಕರಾಟೆ ಪ್ರದರ್ಶನ, ಹೇ ನವಿಲೇ ಹೆಣ್ಣವಿಲೇ ಎನ್ನುವ ಗೀತೆಯ ಗಾಯನ, ಅಮ್ಮನ ತ್ಯಾಗದ ಕಿರು ಪ್ರಹಸನ, ಮೀನುಗಾರ ಮಹಿಳೆಯರ ನಿತ್ಯದ ಬವಣೆ ಬಿಂಬಿಸುವ ಪ್ರಹಸನಗಳು ಗಮನ ಸೆಳೆದವು. ಕೋಮು ಸಾಮರಸ್ಯ ಬಿಂಬಿಸುವ ಮೈಮ್ ಶೋ, ಭಜನಾ ಕುಣಿತ, ರ್ಯಾಪ್ ಸಾಂಗ್ ಎಲ್ಲವೂ ವಿದ್ಯಾರ್ಥಿಗಳ ವಿಭಿನ್ನ ಆಸಕ್ತಿಗಳಿಗೆ ಕನ್ನಡಿ ಹಿಡಿದವು.
ತುಳು ನಾಡಿನ ಕೋಲದ ಪ್ರದರ್ಶನವೊಂದರಲ್ಲಿ ವಿದ್ಯಾರ್ಥಿಯೊಬ್ಬನ ಅದ್ಭುತ ಎನಿಸುವಂತಿದ್ದ ನಿರರ್ಗಳವಾದ ತುಳು ಮಾತಿನ ವೈಖರಿ ಚಕಿತಗೊಳಿಸಿತ್ತು. ಅನುಭವ ಮಂಟಪದ ದೃಶ್ಯ ಪರಿಣಾಮಕಾರಿ ಎನಿಸದಿದ್ದರೂ ಮಕ್ಕಳ ಮನೋಭಾವನೆ ಖುಷಿ ನೀಡಿತು. ಹುಲಿ ವೇಷಗಳ ಪ್ರದರ್ಶನದಲ್ಲಿ ಅಭ್ಯಾಸದ ಕೊರತೆ ಕಾಣಿಸಿತ್ತು. ಬಹುತೇಕ ಎಲ್ಲಾ ತಂಡಗಳಲ್ಲೂ ಕಾಣುತ್ತಿದ್ದ ಯಕ್ಷಗಾನದ ಬಗೆಗಿನ ಪ್ರೀತಿ ಪ್ರಶಂಸಾರ್ಹ. ಮೂರ್ನಾಲ್ಕು ತಂಡಗಳ ಕಾರ್ಯಕ್ರಮ ನಿರೂಪಣೆಯೂ ಗಮನ ಸೆಳೆಯಿತು. ದೇಶ ಭಕ್ತಿಯ ಪ್ರದರ್ಶನ, ಶ್ರೇಷ್ಠ ಸಾಧಕ ವ್ಯಕ್ತಿಗಳನ್ನು ಸ್ಮರಿಸಿ ಗೌರವಿಸಿದ್ದು ಎಲ್ಲವೂ ಶ್ಲಾಘನೀಯ.
– ನರೇಂದ್ರ ಎಸ್ ಗಂಗೊಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ