ಸಂಶೋಧನೆಗೆ ಅಧ್ಯಯನ ಅಗತ್ಯ
Team Udayavani, Sep 12, 2018, 3:44 PM IST
ಬಾಗಲಕೋಟೆ: ಸಂಶೋಧನೆಯು ಶಿಕ್ಷಣದಲ್ಲಿ ಕೌಶಲ್ಯ-ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸಂಶೋಧಕನು ಸಂಶೋಧನೆಯಲ್ಲಿ ತೊಡಗಿಸಿಕೊಂಡು ತನ್ನ ಜ್ಞಾನದ ಸಂಪತ್ತನ್ನು ಸೃಷ್ಟಿಸಿಕೊಳ್ಳಬೇಕು ಎಂದು ಪ್ರೊ| ಸಿ.ಎಚ್.ಭೋಸಲೆ ಹೇಳಿದರು. ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಯುಜಿಸಿ-ಸಿಪಿಇ ಅಡಿಯಲ್ಲಿ ಹಮ್ಮಿಕೊಂಡ ಎರಡು ದಿನಗಳ ಸಂಶೋಧನಾ ವಿಧಾನ ವಿಷಯ ಕುರಿತ ನಡೆದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನೆ ಕೈಗೊಳ್ಳಲು ವಿಷಯದ ಆಳವಾದ ಅಧ್ಯಯನ ಅಗತ್ಯ ಮತ್ತು ವಿಷಯದ ಪರಿಪೂರ್ಣ ಮಾಹಿತಿ ಸಂಗ್ರಹವಾಗಬೇಕು ಎಂದರು.
ಸಂಶೋಧನೆಯು ನಿರಂತರ ಮತ್ತು ಹೊಸ- ಹೊಸ ವಿಧಾನಗಳನ್ನು ಅನುಸರಿಸಿ, ಸಂಶೋಧನೆ ಅಭಿವೃದ್ಧಿಯಾಗಬೇಕು. ಅಧ್ಯಾಪಕನ ಜೀವನಕ್ಕೆ ಸಂಶೋಧನೆಯು ಮಹತ್ತರವಾದ ಮೈಲುಗಲ್ಲಾಗಿದೆ. ಸಂಶೋಧಕನು ಉನ್ನತ ಶಿಕ್ಷಣದಲ್ಲಿ ಪ್ರಗತಿ ಸೃಜನಶೀಲತೆಯೊಂದಿಗೆ ಜ್ಞಾನ ಸೃಷ್ಟಿಸಿಕೊಂಡು, ಹೊಸ-ಹೊಸ ವಿಚಾರಗಳನ್ನು ಈ ಜಗತ್ತಿಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶುದ್ಧ ವಿಜ್ಞಾನಗಳ ಮೂಲಭೂತ ಕಲ್ಪನೆಗಳ ಸ್ಪಷ್ಟ ಅರಿವು ಮೂಡಿಸುವುದು ಅತ್ಯಂತ ಅವಶ್ಯವಿದೆ. ಅಲ್ಲದೆ ಮುಂದಿನ ಪೀಳಿಗೆಗೆ ಸಂಶೋಧನೆಯ ಸೃಜನಶೀಲತೆ, ಹೊಸ ಆವಿಷ್ಕಾರ ಮುಖ್ಯ ಹಾಗೂ ಸ್ವಯಂ ಪ್ರೇರಣೆಯಿಂದ ನಮ್ಮನ್ನು ನಾವು ಸಂಶೋಧನೆಯಲ್ಲಿ ತೋಡಗಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಎಸ್.ಆರ್. ಕಂದಗಲ್ ಮಾತನಾಡಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ತಮ್ಮ ಜ್ಞಾನದ ಸಂಪತ್ತನ್ನು ವಿಸ್ತರಿಸಿಕೊಂಡು ಸಂಶೋಧನೆಯತ್ತ ಒಲವು ಬೆಳೆಸಿಕೊಳ್ಳಬೇಕು. ಪ್ರಾಮಾಣಿಕವಾಗಿ ಪರಿಶ್ರಮಪಟ್ಟು ಸಂಶೋಧನೆಯಲ್ಲಿ ಸಾಧನೆ ಮಾಡಿದರೆ ಮುಂದಿನ ಪೀಳಿಗೆಗೆ ಸೃಜನಶೀಲತೆ ಹಾಗೂ ಹೊಸ-ಹೊಸ ಆವಿಷ್ಕಾರಗಳು ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ|ಬಿ.ಎನ್.ಕಿರಸೂರ ಸ್ವಾಗತಿಸಿದರು. ಸಂಚಾಲಕ ಡಾ| ದೇವಪ್ಪ ಲಮಾಣಿ ಎರಡು ದಿನಗಳ ಕಾರ್ಯಗಾರದ ಮುಖ್ಯ ಉದ್ದೇಶವನ್ನು ವಿವರಿಸಿದರು. ಡಾ| ಆರ್.ಎಸ್.ಮಠದ ಮತ್ತು ಕಾಲೇಜಿನ ಪ್ರಾಧ್ಯಾಪಕರು, ಸ್ನಾತಕೋತ್ತರ ವಿಭಾಗದ ಎಲ್ಲ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸೌಭಾಗ್ಯ ಬದ್ನೂರ ನಿರೂಪಿಸಿದರು. ಡಾ| ಟಿ.ಎಂ. ಗಿರೀಶ ವಂದಿಸಿದರು.