ಕಿರಸೂರಲ್ಲಿ ರಾತ್ರೋರಾತ್ರಿ ಬಿರುಕು ಬಿಟ್ಟ ಮನೆಗಳು!
Team Udayavani, Dec 1, 2018, 5:15 PM IST
ರಾಂಪುರ (ಬಾಗಲಕೋಟೆ): ಬಾಗಲಕೋಟೆ ತಾಲೂಕಿನ ಕಿರಸೂರ ಗ್ರಾಮದಲ್ಲಿ ಏಳು ಮನೆಗಳಲ್ಲಿ ಗೋಡೆಗಳು ರಾತ್ರೋರಾತ್ರಿ ಬಿರುಕು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮನೆಯವರು ಎಂದಿನಂತೆ ಬೆಳೆಗ್ಗೆ ಎದ್ದು ನೋಡು-ನೋಡುತ್ತಿದ್ದಂತೆ ಗೋಡೆಗಳು ಬಿರುಕು ಬಿಟ್ಟಿರುವುದು ಗೊತ್ತಾಗಿದೆ. ಗ್ರಾಮದ ಸರಣಿ ಏಳು ಮನೆಗಳನ್ನು ಮಣ್ಣು ಹಾಗೂ ಸಿಮೆಂಟ್ ಕಾಂಕ್ರೇಟ್ ಬಳಸಿ ನಿರ್ಮಿಸಲಾಗಿದೆ. ಹೀಗಾಗಿ ಅವುಗಳು ಶುಕ್ರವಾರ ಏಕಾಏಕಿ ಮನೆಗಳ ಗೋಡೆಗಳು ಬಿರುಕು ಕಾಣಿಸಿಕೊಂಡಿದ್ದು ಮನೆಯವರಲ್ಲಿ ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಗ್ರಾಮದಲ್ಲಿ ಈ ಏಳು ಮನೆಗಳು ಹಾನಿಗೊಂಡಂತೆ ಬೇರೆ ಯಾವ ಮನೆಗಳಿಗೆ ಯಾನಿಯಾಗಿಲ್ಲ. ಸದ್ಯ ಏಳು ಮನೆಗಳು ಅಪಾಯ ಸ್ಥಿತಿಯಲ್ಲಿ ಕಂಡುಬರುತ್ತಿವೆ.
ಯಾರ ಮನೆಗಳು: ಗ್ರಾಮದ ರೈತ ಯಲ್ಲಪ್ಪ ಕರೇಗೌಡರ, ದ್ಯಾವಪ್ಪ ಕರೇಗೌಡರ, ಶಿವಪ್ಪ ಕರೇಗೌಡರ, ಸುರೇಶ ಕರೇಗೌಡರ, ಹನಮಂತ ಆಸಂಗಿ, ರಾಜು ಆಸಂಗಿ, ಹನಮಂತ ಕರೇಗೌಡರ ಅವರ ಮನೆಗಳು ಭಾರಿ ಪ್ರಮಾಣದಲ್ಲಿ ಬಿರುಕುಗೊಂಡಿವೆ. ಆದರೆ ಭೂಕಂಪವಾದ ಬಗ್ಗೆ ತಿಳಿದು ಬಂದಿಲ್ಲ. ಎಲ್ಲವೂ ಉಹಾಪೋಹ ಮಾತ್ರ ಗ್ರಾಮಸ್ಥರಿಂದ ಕೇಳಿಬರುತ್ತಿದೆ.
ಭೂ ಕುಸಿತ ಕಾರಣವೇ?: ಭೂಮಿಯಡಿ ಕೃಷ್ಣಾ ನದಿ ಹಿನ್ನೀರಿನ ಚಲಾವಣೆ ಹೆಚ್ಚಾಗಿರುವ ಕಾರಣ ಗ್ರಾಮದಲ್ಲಿ ಜಲ ಮೂಲಗಳು ಹೆಚ್ಚಾಗಿವೆ. ಕಾರಣ ಮನೆಗಳ ತಳಮಟ್ಟದಲ್ಲಿ ಹಾಳು ಮಣ್ಣು ಹೆಚ್ಚಾಗಿರುವುದರಿಂದ ಹಾಗೂ ಗಟ್ಟಿ ಥರಾ(ಪಾಯಾ) ಇಲ್ಲದಿರುವುದರಿಂದ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ಹಿರಿಯ ಕಟ್ಟಡ ಕಾರ್ಮಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ: ಗ್ರಾಪಂ ಅಧ್ಯಕ್ಷ ರವಿ ಕಾಸರ, ಗ್ರಾಮ ಲೆಕ್ಕಾಧಿ ಕಾರಿ ಗ್ಯಾನಪ್ಪ ಕಡೆಮನಿ, ಪಿಡಿಒ ಜ್ಯೋತಿ ಪಾಟೀಲ ಸೇರಿದಂತೆ ಸ್ಥಳೀಯ ಗ್ರಾಪಂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಮನೆಯವರನ್ನು ಸ್ಥಳಾಂತರಿಸುವ ಕಾರ್ಯ ಮಾಡಿದ್ದಾರೆ.
ಬಿರುಕು ಬಿಟ್ಟಿರುವ ಮನೆಗಳು ಅಪಾಯದ ಸ್ಥಿತಿಯಲ್ಲಿದ್ದು, ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಗ್ರಾಪಂ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಬದ್ದರಾಗಿದ್ದು, ಘಟನೆಗೆ ಕಾರಣ ಕಂಡು ಹಿಡಿದು ಮನೆಯವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು.
ಜ್ಯೋತಿ ಪಾಟೀಲ,
ಪಿಡಿಒ, ಭಗವತಿ ಗ್ರಾಪಂ
ಬೆಳಗ್ಗೆಯಿಂದ ಮನೆಗಳು ಬಿರುಕು ಬಿಡುತ್ತಿರುವುದು ನಮಗೆ ಆತಂಕವುನ್ನುಂಟು ಮಾಡಿದೆ. ಮನೆಗಳಲ್ಲಿ ವಾಸ ಮಾಡುವುದಕ್ಕೂ ಆಗುತ್ತಿಲ್ಲ. ಬಡತನದ ಮಧ್ಯ ಜೀವನ ಸಾಗಿಸುತ್ತಿರುವ ನಮಗೆ ಕೂಡಲೇ ಜಿಲ್ಲಾಡಳಿತ ಶಾಶ್ವತ ಪರಿಹಾರ ಒದಗಿಸಬೇಕು.
ಶಿವಾನಂದ ಕರೇಗೌಡರ, ಸಂತ್ರಸ್ತ
ಹಾಳು ಮಣ್ಣಿನ ಮೇಲೆ ಮನೆಗಳನ್ನು ನಿರ್ಮಿಸಿದ್ದು ಹೀಗಾಗಿ ಮನೆಯ ಕೆಳಗಡೆ ನೀರಿನ ಅಂಶ ಹೆಚ್ಚಾಗಿರುವುದರಿಂದ ಮನೆಗಳು ಬಿರುಕುಗೊಂಡಿವೆ. ಮನೆಗಳ ಸುತ್ತಮುತ್ತಲು ನೀರಿನ ಇಂಗು ಗುಂಡಿ ಹೆಚ್ಚಾಗಿರುವುದರಿಂದ ಬಿರುಕು ಬಿಡಲು ಕಾರಣ.
ಪೀಯಾಜ್ ಅಹ್ಮದ, ಭೂ ವಿಜ್ಞಾನಿ