ಮಾಸ್ ಲೀಡರ್ ಕೊಡುವುದು ಸರೀನಾ?
Team Udayavani, Apr 11, 2017, 12:03 PM IST
ಟೈಟಲ್ ವಿಷಯದಲ್ಲಿ ತಮಗೆ ಅನ್ಯಾಯವಾಗಿರುವುದರಿಂದ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಸೋಮವಾರ ಧರಣಿ ಕೂರುವುದಾಗಿ “ಎ.ಎಂ.ಆರ್. ರಮೇಶ್ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಅದರಂತೆ ರಮೇಶ್ ಪ್ರತಿಭಟನೆ ನಡೆಸಿದ್ದಾರೆ.
“2010ರಲ್ಲೇ ನಾನು ನನ್ನ ಬ್ಯಾನರ್ನಲ್ಲಿ “ಲೀಡರ್’ ಶೀರ್ಷಿಕೆ ನೋಂದಣಿ ಮಾಡಿಸಿದ್ದೆ. ಆದರೆ, ತರುಣ್ “ಮಾಸ್ ಲೀಡರ್’ ಹೆಸರಲ್ಲಿ ಚಿತ್ರ ಮಾಡಿದ್ದಾರೆ. ಈ ಕುರಿತು ಮಂಡಳಿಗೆ ನಾನು ನಾಲ್ಕು ಪತ್ರಗಳನ್ನು ಬರೆದಿದ್ದೆ. ಒಂದಕ್ಕೂ ಉತ್ತರ ಬಂದಿಲ್ಲ. ಮೂರು ವರ್ಷಗಳ ಹಿಂದೆಯೇ “ಮಾಸ್ ಲೀಡರ್’ ಶೀರ್ಷಿಕೆ ಇಟ್ಟುಕೊಂಡಿದ್ದೇವೆ ಎಂದು ಹೇಳುತ್ತಾರೆ. ಆ ಬಗ್ಗೆ ದಾಖಲೆ ತೋರಿಸಿ, ಎಂದರೆ ಅದಕ್ಕೆ ಉತ್ತರವಿಲ್ಲ.
“ಮಾಸ್ ಲೀಡರ್’ ಶೀರ್ಷಿಕೆ ಯಾವಾಗ, ಯಾರಿಗೆ ಕೊಡಲಾಗಿದೆ ಎಂಬುದಕ್ಕೆ ದಾಖಲೆ ತೋರಿಸಿ ಎಂದರೂ ಉತ್ತರವಿಲ್ಲ. ನಾನು ಏಳು ವರ್ಷಗಳ ಹಿಂದೆ ಶೀರ್ಷಿಕೆ ಇಟ್ಟು, ಪ್ರತಿ ವರ್ಷ ಮರು ನೋಂದಣಿ ಮಾಡಿಕೊಂಡು ಬಂದಿದ್ದೇನೆ. ಈಗ “ಲೀಡರ್’ಗೆ ಪೂರಕವಾಗಿ “ಮಾಸ್ ಲೀಡರ್’ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ’ ಎಂದು ರಮೇಶ್ ಆರೋಪಿಸುತ್ತಾರೆ.
“ನಮಗೆ “ಲೀಡರ್’ ಎಂಬ ಶೀರ್ಷಿಕೆ ಕೊಟ್ಟು, ಇನ್ನೊಬ್ಬರಿಗೆ “ಮಾಸ್ ಲೀಡರ್’ ಎಂಬ ಶೀರ್ಷಿಕೆ ಕೊಡುವುದು ಸರಿಯಲ್ಲ. ಇದು ಸರಿಯಾದರೆ, ಮುಂದಿನ ದಿನಗಳಲ್ಲಿ ನಾನು “ನನ್ನದೇ ಟಗರು’ ಎಂಬ ಶೀರ್ಷಿಕೆ ಇಟ್ಟುಕೊಳ್ತೀನಿ, “ನಾನೇ ಚಕ್ರವರ್ತಿ’ ಎಂಬ ಟೈಟಲ್ಗೆ ಅನುಮತಿ ಕೋರುತ್ತೇನೆ. ಅದಕ್ಕೆ ಅನುವು ಮಾಡಿಕೊಡುತ್ತಾರಾ? ೆ’ ಎನ್ನುತ್ತಾರೆ ರಮೇಶ್.
ಪ್ರತಿಭಟನೆ ಅವರ ಹಕ್ಕು
“ಮಾಸ್ ಲೀಡರ್’ ಎಂಬ ಶೀರ್ಷಿಕೆಗೆ ಸಂಬಂಧಿ ಸಿದಂತೆ ಟೈಟಲ್ ಕಮಿಟಿಯಲ್ಲಿ ಚರ್ಚೆ ನಡೆದು, ಅದನ್ನು ಕೊಡಲು ಅನುಮತಿ ಕೊಟ್ಟಿದೆ. ತರುಣ್ ಶಿವಪ್ಪ ಅವರಿಗೆ “ಮಾಸ್ ಲೀಡರ್’ ಶೀರ್ಷಿಕೆಯನ್ನು ಒಂದೇ ಅಕ್ಷರದಲ್ಲಿ ಹಾಕುವಂತೆ ಹೇಳಲಾಗಿದೆ. “ಲೀಡರ್’ ರಮೇಶ್ ಅವರ ಬ್ಯಾನರ್ನಲ್ಲಿದೆ. ತರುಣ್ ಬ್ಯಾನರ್ನಲ್ಲಿ “ಮಾಸ್ ಲೀಡರ್’ ಎಂದು ದಾಖಲಾಗಿದೆ. ಅಂತಿಮವಾಗಿ, “ಮಾಸ್ ಲೀಡರ್’ ಹೆಸರಲ್ಲೇ ಚಿತ್ರ ರಿಲೀಸ್ ಆಗುತ್ತದೆ. ಇನ್ನು ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು. ರಮೇಶ್ ಬೇಕಾದರೆ ಪ್ರತಿಭಟನೆ ಮಾಡಲಿ’ ಎನ್ನುತ್ತಾರೆ ಗೋವಿಂದು.