ಜರ್ನಾಧನ ರೆಡ್ಡಿ ನಾಡಗೀತೆಗೆ ಧ್ವನಿಯಾದಾಗ!
Team Udayavani, Nov 1, 2017, 12:59 PM IST
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಒಬ್ಬ ರಾಜಕಾರಣಿಯಾಗಿ ಎಲ್ಲರಿಗೂ ಗೊತ್ತಿದೆ. ಇದೀಗ ಅವರು ಹೊಸ ಅವತಾರ ಎತ್ತಿದ್ದಾರೆ. ಈಗವರು ಗಾಯಕರಾಗಿಯೂ ಗುರುತಿಸಿಕೊಂಡಿದ್ದು, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕುವೆಂಪು ರಚಿತ “ಜಯ ಭಾರತ ಜನನಿಯ ತನುಜಾತೆ …’ ನಾಡಗೀತೆಗೆ ನುಡಿ ನಮನ ಸಲ್ಲಿಸಿದ್ದಾರೆ.
ಈ ಸಿಡಿ ನಿನ್ನೆ ಮಂಗಳವಾರ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕನ್ನಡ ನಾಡಗೀತೆಯ ಬಗ್ಗೆ ಬಹಳ ಒಲವಿದೆ. ರಾಜ್ಯ ಸರಕಾರ ನಾಡಗೀತೆ ಎಂದು ಘೋಷಿಸಿದ ಬಳಿಕ, ಗೀತೆ ಹಾಡುವಾಗಲೆಲ್ಲಾ ಭಾವಪರವಶನಾಗುತ್ತಿದ್ದೆ.
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಹೊಸದೊಂದು ಪ್ರಯತ್ನದ ನಾಡಗೀತೆಯನ್ನು ನೀಡುವುದು ನನ್ನ ಉದ್ದೇಶವಾಗಿತ್ತು. ಅಮೇರಿಕಾದ ಮ್ಯಾಂಚೆಸ್ಟರ್ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ನಾನು ನಾಡಗೀತೆಗೆ ಧ್ವನಿಗೂಡಿಸಿದ್ದೇನೆ.
ನಾನು ದೊಡ್ಡ ಗಾಯಕ ಅಲ್ಲದೇ ಹೋದರೂ ಕೂಡಾ ನಾಡಗೀತೆಗೆ ದನಿಗೂಡಿಸಿದ್ದೇನೆ’ ಎಂದರು ಜನಾರ್ಧನ ರೆಡ್ಡಿ. ಈ ನಾಡಗೀತೆಯು ಅಯ್ಯಪ್ಪ ಪಿ ಶರ್ಮ ಅವರ ಪರಿಕಲ್ಪನೆಯಲ್ಲಿ ತೆರೆಗೆ ಮೂಡಿ ಬಂದಿದ್ದು, ರಾಜೇಶ್ ಕಟ್ಟ ಛಾಯಾಗ್ರಹಣ ಮಾಡಿದ್ದಾರೆ. ಇನ್ನು ಕೌಶಿಕ್ ಹರ್ಷ ಸಂಗೀತ ಸಂಯೋಜಿಸಿದರೆ, ಲಕ್ಷ್ಮಣ್ ರೆಡ್ಡಿ ಸಂಕಲನ ಮಾಡಿದ್ದಾರೆ.