ಅಲ್ಲು ಅರ್ಜುನ್ ಚಿತ್ರಕ್ಕೆ ರವಿವರ್ಮ ಫೈಟ್
Team Udayavani, Nov 22, 2017, 10:53 AM IST
“ಮಾಸ್ತಿಗುಡಿ’ ಚಿತ್ರದ ದುರ್ಘಟನೆಯ ನಂತರ ಕಂಗಾಲಾಗಿ ಹೋಗಿದ್ದ ಸಾಹಸ ನಿರ್ದೇಶಕ ರವಿವರ್ಮ, ಈಗ ಕ್ರಮೇಣ ಚೇತರಿಸಿಕೊಂಡು ಕೆಲಸಕ್ಕೆ ವಾಪಸ್ಸಾಗಿದ್ದಾರೆ. “ಮಾಸ್ತಿಗುಡಿ’ ಚಿತ್ರದ ನಂತರ ಕನ್ನಡದಲ್ಲಿ “ಮಫ್ತಿ’ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ ನಂತರ ರವಿವರ್ಮ ಇದೀಗ ಮತ್ತೆ ತೆಲುಗಿಗೆ ಹಾರಿದ್ದಾರೆ.
ಹೌದು, ರವಿವರ್ಮ ಇದೀಗ ಅಲ್ಲು ಅರ್ಜುನ್ ಅಭಿನಯದ “ನಾ ಪೇರು ಸೂರ್ಯ’ ಎಂಬ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಚಿತ್ರಗಳಿಗೆ ರವಿವರ್ಮ ಸಾಹಸ ಸಂಯೋಜನೆ ಮಾಡುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ಒಂದೆರೆಡು ಚಿತ್ರಗಳಿಗೆ ಕೆಲಸ ಮಾಡಿದ್ದರು.
ಈಗ ಬಹಳ ದಿನಗಳ ನಂತರ “ನಾ ಪೇರು ಸೂರ್ಯ’ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಪವನ್ ಕಲ್ಯಾಣ್ ಅವರ 25ನೇ ಚಿತ್ರಕ್ಕೂ ರವಿವರ್ಮ ಸಾಹಸ ಸಂಯೋಜಿಸಿದ್ದರು. ಅಂದಹಾಗೆ, ಈ ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಎದುರು ಕೀರ್ತಿ ಸುರೇಶ್ ಅಭಿನಯಿಸುತ್ತಿದ್ದು, ಜೊತೆಗೆ ಖುಷ್ಬೂ, ಅನು ಇಮ್ಯಾನ್ಯುಯಲ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಕೆಲವು ಚಿತ್ರಗಳಿಗೆ ಸಾಹಸ ನಿರ್ದೇಶಿಸಿರುವ ರವಿವರ್ಮ, ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ ಅವರ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ.