ಮುಖ್ಯಮಂತ್ರಿಗಳಿಗೆ ಸುದೀಪ್ ನೀಡಿದ ಪತ್ರದಲ್ಲೇನಿದೆ ಗೊತ್ತಾ?
Team Udayavani, Dec 11, 2017, 3:01 PM IST
ಇಂದು ಬೆಳಿಗ್ಗೆ ನಟ ಸುದೀಪ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ, ಕೆಲವು ಕಾಲ ಮಾತುಕತೆ ನಡೆಸಿದ್ದಾರೆ. ಪ್ರಮುಖವಾಗಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ವಿಷಯದ ಕುರಿತು ಮಾತನಾಡಿರುವ ಸುದೀಪ್, ಈ ಕುರಿತು ಮುಖ್ಯಮಂತ್ರಿಗಳಿಗೆ ಒಂದು ಪತ್ರವನ್ನೂ ಸಲ್ಲಿಸಿದ್ದಾರೆ. ಇಷ್ಟಕ್ಕೂ ಆ ಪತ್ರದಲ್ಲೇನಿದೆ ಗೊತ್ತಾ? ಓದಿ ನೋಡಿ …
ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಡಾ. ವಿಷ್ಣುವರ್ಧನ ಅವರ ಸ್ಮಾರಕ ನಿರ್ಮಾಣದ ವಿಷಯಕ್ಕೆ ತಾರ್ಕಿಕ ಅಂತ್ಯವನ್ನು ಒದಗಿಸಲು ಇದು ಸಕಾಲವೆಂದು ಭಾವಿಸುತ್ತೇನೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಸ್ಥಳ ನಿಗದಿಯಾಗಿದ್ದರೂ ಸಹ, ಅಂತ್ಯ ಸಂಸ್ಕಾರವಾದ ಜಾಗದಲ್ಲಿಯೇ ಅವರ ನೆನಪಿನ ಸ್ಮಾರಕ ಇರಬೇಕೆಂಬುದು ಕನ್ನಡಿಗರ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳ ಕೋರಿಕೆಯಾಗಿರುವುದು ತಮಗೆ ತಿಳಿಯದ ವಿಷಯವೇನಲ್ಲ.
ಡಾ.ಭಾರತಿ ವಿಷ್ಣುವರ್ಧನ್ ಅವರ ಇಚ್ಛೆಯಂತೆ ಮೈಸೂರಿನಲ್ಲಿಯೇ ಸ್ಮಾರಕವಾಗುವುದಾದರೆ, ಯಾರ ಅಂಭ್ಯಂತರವೂ ಇಲ್ಲ. ಆದರೆ, ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕದ ಬದಲಾಗಿ ಅವರ ಅಂತ್ಯ ಸಂಸ್ಕಾರವಾದ ಜಾಗದ ಒಂದು ಎಕರೆ ಪ್ರದೇಶವನ್ನು “ಡಾ.ವಿಷ್ಣುವರ್ಧನ ಪುಣ್ಯ ಭೂಮಿ’ ಎಂದು ಗುರುತಿಸಿ, ಅಭಿವೃದ್ಧಿಪಡಿಸಲು ಕೋರುತ್ತೇನೆ.
ಒಂದು ವೇಳೆ, ಒಂದು ಕಡೆ ಸ್ಮಾರಕ ಮತ್ತೂಂದು ಕಡೆ ಪುಣ್ಯಭೂಮಿ ಎಂದು ಅಭಿವೃದ್ಧಿಪಡಿಸುವುದು ಸರ್ಕಾರಿ ನಿಯಮಗಳಿಗೆ ವಿರುದ್ಧ ಎನ್ನುವುದಾದರೆ, ಕೇವಲ ಒಂದು ಎಕರೆ ಜಾಗವನ್ನು ಕೊಟ್ಟರೆ, ಡಾ.ವಿಷ್ಣುವರ್ಧನ ಅವರ ಹಿತೈಷಿಗಳಾದ ನಾವು ಮತ್ತು ಅವರ ಅಭಿಮಾನಿಗಳು ಸೇರಿ ಡಾ.ವಿಷ್ಣುವರ್ಧನ ಪುಣ್ಯಭೂಮಿಯನ್ನು ಅಭಿಮಾನಿಗಳಿಗಾಗಿ ಈ ಪುಣ್ಯಭೂಮಿ ಅಭಿವೃದ್ಧಿಗೆ ಸಂಕಲ್ಪ ಹೊಂದಬೇಕೆಂದು ಈ ಮೂಲಕ ಕೋರುತ್ತೇನೆ.
ಇದೇ ಡಿಸೆಂಬರ್ 30 ಕ್ಕೆ ಡಾ.ವಿಷ್ಣುವರ್ಧನ್ ಅವರ 8 ನೇ ಪುಣ್ಯಸ್ಮರಣೆ ಇರುವುದರಿಂದ, ತಾವು ಆದಷ್ಟು ಬೇಗ ಈ ವಿಷಯಕ್ಕೆ ತಾರ್ಕಿಕ ಅಂತ್ಯವನ್ನು ಒದಗಿಸಿದರೆ, ಹಿಂದಿನ ಸರ್ಕಾರದಲ್ಲಿ ಘೋಷಣೆಯಾಗಿದ್ದ ಸ್ಮಾರಕ ಯೋಜನೆಯನ್ನು ಸಾಕಾರಗೊಳಿಸಿದ ಕೀರ್ತಿ ತಮ್ಮದಾಗುತ್ತದೆ ಮತ್ತು ಅಸಂಖ್ಯಾತ ವಿಷ್ಣು ಅಭಿಮಾನಿಗಳ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗುತ್ತದೆ.
ಈ ಸ್ಮಾರಕದ ವಿಷಯ ಪರಿಹಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಾಧ್ಯತೆಗಳನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಇವುಗಳು ಖಂಡಿತ ಸಹಕಾರಿಯಾಗಬಲ್ಲದೆಂದು ನಂಬಿದ್ದೇನೆ.
1. ಅಭಿಮಾನ್ ಸ್ಟುಡಿಯೋದಲ್ಲಿ ಡಾ. ವಿಷ್ಣುವರ್ಧನ ಸ್ಮಾರಕಕ್ಕಾಗಿ ನಿಗದಿಪಡಿಸಿರುವ ಎರಡು ಎಕರೆ ಜಾಗದ ಬದಲು ಒಂದು ಅಥವಾ ಅರ್ಧ ಎಕರೆ ಜಾಗವನ್ನು ಅಖೈರುಗೊಳಿಸುವುದು.
2. ದಿ.ಬಾಲಕೃಷ್ಣ ಅವರ ಕುಟುಂಬಕ್ಕೆ ಪರಿಹಾರ ಒದಗಿಸುವುದು. ಅಭಿಮಾನ್ ಸ್ಟುಡಿಯೋ ಸರ್ಕಾರಿ ಜಮೀನಾಗಿರುವ ಕಾರಣ, ಸರ್ಕಾರವೇ ಅದಕ್ಕೆ ಪರಿಹಾರ ಹಣ ಕೊಟ್ಟು ಖರೀದಿಸಲಾಗುವುದಿಲ್ಲವೆಂದರೆ, ಅದನ್ನು ಖರೀದಿಸಲು ವಿಷ್ಣು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡುವುದು.
3. ಅಭಿಮಾನ್ ಸ್ಟುಡಿಯೋದ ಮೇಲೆ ಸರ್ಕಾರ ಹಾಕಿರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯುವುದು.
4. ಈ ಸಂಬಂಧ ಬಾಲಕೃಷ್ಣ ಅವರ ಕುಟುಂಬದ ಜೊತೆ ಖುದ್ದಾಗಿ ತಾವೇ ಒಂದು ಸಭೆ ನಡೆಸಿದರೆ ಖಂಡಿತ ಅವರು ಒಪ್ಪುತ್ತಾರೆ ಎಂಬುದು ನನ್ನ ಖಚಿತ ನಿಲುವು.
ಈ ಸಾಧ್ಯತೆಗಳು ನನ್ನ ತಿಳುವಳಿಕೆಗೆ ಸಂಬಂಧಿಸಿರುವುಗಳೇ ಆಗಿವೆ. ಈ ಸಾಧ್ಯತೆಗಳನ್ನು ತಾವು ಬಳಸುವುದು ಅಥವಾ ಸರ್ಕಾರಿ ನಿಮಗಳನುಸಾರ ಮುಂದುವರಿಯುವುದು ತಮ್ಮ ವಿವೇಚನೆಗೆ ಬಿಟ್ಟ ಸಂಗತಿಗಳಾಗಿವೆ. ದಯಮಾಡಿ ಡಾ.ವಿಷ್ಣುವರ್ಧನ ಅವರ ಪುಣ್ಯ ಭೂಮಿ ನಿರ್ಮಾಣಕ್ಕೆ ಡಿಸೆಂಬರ್ 30ರ ಒಳಗೆ ತಾರ್ಕಿಕ ಅಂತ್ಯ ಒದಗಿಸಬೇಕೆಂದು ವಿನಂತಿಸುತ್ತೇನೆ.
ವಂದನೆಗಳೊಂದಿಗೆ…
ತಮ್ಮ ವಿಶ್ವಾಸಿ,
ಕಿಚ್ಚ ಸುದೀಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು