ಅವಾರ್ಡ್ ಜೊತೆಗೆ ರಿವಾರ್ಡ್ ಸಹ ಮುಖ್ಯ
Team Udayavani, Jan 24, 2018, 9:00 PM IST
ಮೂರುವರೆ ತಿಂಗಳಲ್ಲಿ ಎರಡನೆಯ ಚಿತ್ರ ಶುರು ಮಾಡಿದ್ದಾರೆ. ಅವರ ನಿರ್ಮಾಣದ “ಕವಲು ದಾರಿ’ ಚಿತ್ರ ಅಕ್ಟೋಬರ್ನಲ್ಲಿ ಶುರುವಾಗಿತ್ತು. ಆ ಚಿತ್ರದ ಚಿತ್ರೀಕರಣ ಮುಗಿಯುವಷ್ಟರಲ್ಲೇ, “ಮಾಯಾ ಬಜಾರ್’ ಎಂಬ ಇನ್ನೊಂದು ಚಿತ್ರವನ್ನು ಅವರು ಶುರು ಮಾಡಿದ್ದಾರೆ. ಎಲ್ಲಾ ಸರಿ, ಪುನೀತ್ ಎಷ್ಟು ಕಥೆ ಕೇಳಿದ್ದಾರೆ ಮತ್ತು ಇನ್ನೆಷ್ಟು ಚಿತ್ರಗಳನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಅವರನ್ನು ಕೇಳಿದರೆ, ಅವರಿಂದ ಬರುವ ಉತ್ತರವೇನು ಗೊತ್ತಾ?
“ನಾನು ಕಥೆ ಕೇಳಬೇಕು, ಒಂದರ ಹಿಂದೊಂದು ಚಿತ್ರ ಮಾಡಬೇಕು ಅಂತ ಮಾಡುತ್ತಿಲ್ಲ. ನಾನು ಹಲವರಿಗೆ ಸಿನಿಮಾ ಮಾಡೋಕೆ ಅವಕಾಶ ಕೊಡುತ್ತಿದ್ದೀನಿ, ಸತತವಾಗಿ ಚಿತ್ರಗಳನ್ನ ನಿರ್ಮಿಸುತ್ತೀನಿ ಅಂತೆಲ್ಲಾ ಸುದ್ದಿಯಾಗಿದೆ. ಹಾಗೇನಿಲ್ಲ. ಇಷ್ಟು ಚಿತ್ರಗಳನ್ನು ನಿರ್ಮಿಸುತ್ತೀನಿ ಅಂತ ಯಾವುದೇ ಡೆಡ್ಲೈನ್ ಹಾಕಿಕೊಂಡಿಲ್ಲ. ಒಳ್ಳೆಯ ಕಥೆ ಸಿಕ್ಕರೆ ಮಾತ್ರ ಸಿನಿಮಾ ನಿರ್ಮಾಣ ಮಾಡುತ್ತೀನಿ ಅಷ್ಟೇ.
ಒಂದೊಳ್ಳೆಯ ಕಥೆ ಇದೆ ಎಂದು ಯಾರಾದರೂ ಹೇಳಬೇಕು ಮತ್ತು ಆ ಕಥೆ ಚೆನ್ನಾಗಿದ್ದರೆ ಮಾತ್ರ ನಿರ್ಮಾಣ ಮಾಡುತ್ತೀನಿ. ಇಲ್ಲವಾದರೆ ಇಲ್ಲ. ರಾಧಾಕೃಷ್ಣ ಹತ್ತಿರ ಒಳ್ಳೆಯ ಕಥೆ ಇದೆ ಎಂದು ಫ್ಯಾಮಿಲಿ ಫ್ರೆಂಡ್ ಮೂಲಕ ತಿಳಿಯಿತು. ಅವರು ಬಂದು ಕಥೆ ಹೇಳಿದರು. ನಿಜಕ್ಕೂ ಬಹಳ ಆಕರ್ಷಕವಾಗಿತ್ತು. ಅವರೇನು ಮಾಡಿಕೊಂಡಿದ್ದಾರೆ ಎಂದು ಕೇಳಿದೆ. ಅವರು ಮಾಡಿರುವ ಕಿರುಚಿತ್ರಗಳನ್ನ ತೋರಿಸಿದರು.
ಇಷ್ಟವಾಯಿತು. ನಂಬಿಕೆಯಿಂದ ಅವರಿಗೆ ಚಿತ್ರ ನಿರ್ದೇಶನ ಮಾಡುವುದಕ್ಕೆ ಅವಕಾಶ ಕೊಟ್ಟೆ. ನನಗೆ ಒಳ್ಳೆಯ ಸಿನಿಮಾ ಮಾಡುವ ಆಸೆ ಹೊರತು, ಇಷ್ಟೇ ಮಾಡಬೇಕು, ಅಷ್ಟೇ ಮಾಡಬೇಕು ಅಂತಿಲ್ಲ. ಒಳ್ಳೆಯ ಕಥೆಗಳು ಸಿಕ್ಕರೆ ಒಟ್ಟಿಗೆ ಮೂರು ಸಿನಿಮಾಗಳನ್ನು ಸಹ ಮಾಡೋದಕ್ಕೆ ನಾನು ಸಿದ್ಧ’ ಎನ್ನುತ್ತಾರೆ ಪುನೀತ್ ರಾಜಕುಮಾರ್.
ಪ್ರೇಕ್ಷಕನಾಗಿ ಕಥೆ ಕೇಳುತ್ತೀನಿ: ಪುನೀತ್ ಹೇಳುವಂತೆ ಬರೀ ಚಿತ್ರ ಮಾಡುವುದಷ್ಟೇ ಮುಖ್ಯ ಅಲ್ಲ, ಅದು ಬಿಡುಗಡೆಯಾಗಬೇಕು ಮತ್ತು ಜನರಿಗೂ ಇಷ್ಟವಾಗಬೇಕು. “ನಾನು ನಿರ್ಮಾಣ ಮಾಡಿದರೆ ಸ್ಯಾಟಿಲೈಟ್ ಹಕ್ಕುಗಳಿಂದ ಹಣ ಬರುತ್ತದೆ, ಅದರಿಂದ ಸೇಫ್ ಆಗುತ್ತದೆ ಎಂದು ನಂಬಿಕೊಂಡು ಚಿತ್ರ ಮಾಡಬೇಡಿ ಅಂತ ಮೊದಲೇ ಹೇಳಿಬಿಡುತ್ತೀನಿ. ಒಂದು ಸಿನಿಮಾ ಎಂದರೆ ಜನ ಬಂದು ನೋಡಬೇಕು.
ಬರೀ ಪ್ರಶಸ್ತಿ ಬರೋದಷ್ಟೇ ಮುಖ್ಯ ಅಲ್ಲ. ನಮಗೆ ಜನ ಕೊಡೋ ರಿವಾರ್ಡು ಸಹ ಅಷ್ಟೇ ಮುಖ್ಯ. ರಿವಾರ್ಡು ಬಂದರೆ, ಅವಾರ್ಡು ಬಂದಷ್ಟೇ ಸಂತೋಷ. ನಾನು ಯಾವುದೇ ಕಥೆ ಕೇಳಿದರೂ ನಿರ್ಮಾಪಕನಾಗಿ ಕೇಳುವುದಿಲ್ಲ, ಪ್ರೇಕ್ಷಕನಾಗಿ ಕೇಳುತ್ತೀನಿ. ಪ್ರೇಕ್ಷಕನಾಗಿ ಇಷ್ಟವಾದರೆ ಚಿತ್ರ ಮಾಡಲು ಮುಂದಾಗುತ್ತೀನಿ’ ಎನ್ನುತ್ತಾರೆ ಪುನೀತ್.
“ಒಂದು ಮೊಟ್ಟೆಯ ಕಥೆ’ ಸ್ಫೂರ್ತಿ: ಪ್ರಮುಖವಾಗಿ ಪುನೀತ್ ನಿರ್ಮಾಣಕ್ಕಿಳಿಯುವುದಕ್ಕೆ “ಒಂದು ಮೊಟ್ಟೆಯ ಕಥೆ’ ಸ್ಫೂರ್ತಿ ಎನ್ನಬಹುದು. “ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಕಷ್ಟು ಪ್ರಯೋಗಾತ್ಮಕ ಚಿತ್ರಗಳು ನಮ್ಮಲ್ಲಿ ಬರುತ್ತಿವೆ ಮತ್ತು ಯಶಸ್ವಿಯಾಗುತ್ತಿದೆ. ಅದರಲ್ಲೂ “ಒಂದು ಮೊಟ್ಟೆಯ ಕಥೆ’ ನೋಡಿ ಬಹಳ ಖುಷಿಯಾಯಿತು.
ಸಹಜವಾದ ಕಥೆ, ನಿರೂಪಣೆ, ಸಂಗೀತ ಎಲ್ಲವೂ ಚೆನ್ನಾಗಿತ್ತು. ಅಷ್ಟು ಕಡಿಮೆ ಬಜೆಟ್ನಲ್ಲಿ ಎಷ್ಟೊಳ್ಳೆಯ ಚಿತ್ರ ಮಾಡಿದ್ದಾರಲ್ಲ ಎಂದು ಖುಷಿಯಾಯಿತು. ನಾವು ಯಾಕೆ ಮಾಡಬಾರದು ಅಂತ ಅನಿಸಿದ್ದು ಆಗಲೇ. ಮೇಲಾಗಿ ಮಲ್ಟಿಪ್ಲೆಕ್ಸ್ಗಳು ಹೆಚ್ಚಿದಂತೆ ಜನ ಇವತ್ತು ಬೇರೆ ತರಹದ, ಬೇರೆ ಭಾಷೆಗಳ ಸಿನಿಮಾಗಳನ್ನು ನೋಡೋದು ಜಾಸ್ತಿಯಾಗಿದೆ.
ನಾನೇ ಹಲವು ಸ್ಪಾನಿಷ್ ಸಿನಿಮಾಗಳನ್ನ ನೋಡಿದ್ದೀನಿ. ಸಬ್ಟೈಟಲ್ ಇದ್ದರೆ ಅಷ್ಟೇ ಸಾಕು. ಅದೇ ತರಹ ಕನ್ನಡ ಚಿತ್ರಗಳಿಗೂ ಸಬ್ಟೈಟಲ್ ಹಾಕಿ ಯಾಕೆ ಬೇರೆ ಕಡೆ ಬಿಡುಗಡೆ ಮಾಡಬಾರದು ಅಂತ ಚಿತ್ರ ನಿರ್ಮಾಣ ಪ್ರಾರಂಭಿಸಿದ್ದೀನಿ. ಬಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕಥೆ ಚೆನ್ನಾಗಿರಬೇಕು ಅಷ್ಟೇ’ ಎಂಬುದು ಪುನೀತ್ ಅಭಿಪ್ರಾಯ.
ಒಂದೇ ಸೂರಿನಲ್ಲಿ ಎಲ್ಲಾ ವಿಭಾಗಗಳು: ಗಾಂಧಿನಗರದಲ್ಲಿದ್ದ ವಜ್ರೆಶ್ವರಿ ಆಫೀಸ್ ಕಟ್ಟವನ್ನು ಕೆಡವಿ ಅಲ್ಲಿ ಹೊಸ ಕಟ್ಟಡ ಕಟ್ಟಲಾಗುತ್ತಿದೆ. ಕಟ್ಟಡ ಮುಗಿದ ಮೇಲೆ ಮತ್ತೆ ವಜ್ರೆಶ್ವರಿ ಆಫೀಸ್ ಶಿಫ್ಟ್ ಆಗುತ್ತದೆ ಎನ್ನುತ್ತಾರೆ ಪುನೀತ್. “ಇನ್ನೊಂದು ತಿಂಗಳಲ್ಲಿ ಕಟ್ಟಡ ನಿರ್ಮಾಣ ಮುಗಿಯಲಿದೆ.
ನಮಗೆ ಒಂದು ಫ್ಲೋರ್ ಸಾಕು. ಮಿಕ್ಕಂತೆ ಬಾಡಿಗೆಗೆ ಕೊಡುತ್ತೀವಿ. ಒಂದೇ ಫ್ಲೋರ್ನಲ್ಲಿ ವಜ್ರೆಶ್ವರಿ, ಪಿಆರ್ಕೆ ಎಲ್ಲ ಇರುತ್ತದೆ. ಈಗ ಎಲ್ಲಾ ಡಿಜಿಟಲ್ ಆಗಿರುವುದರಿಂದ, ಮುಂಚಿನಂತೆ ಜಾಸ್ತಿ ಜಾಗ ಬೇಕು ಅಂತಿಲ್ಲ. 10/10 ರೂಮ್ ಇದ್ದರೂ ಸಾಕು. ಹಾಗಾಗಿ ಪಿಆರ್ಕೆ ಪ್ರೊಡಕ್ಷನ್ ಹೌಸ್, ಪಿಆರ್ಕೆ ಆಡಿಯೋ ಎಲ್ಲಾ ಅದೇ ಕಟ್ಟಡಕ್ಕೆ ಬರುತ್ತದೆ’ ಎನ್ನುತ್ತಾರೆ ಪುನೀತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು