ಕಪ್ಪು ಗುಲಾಬಿ ಚಿತ್ರೀಕರಣದಲ್ಲಿ ನಾಯಕಿ ಹಣೆಗೆ ಗಾಯ
Team Udayavani, Feb 20, 2018, 11:01 AM IST
“ಕಪ್ಪು ಗುಲಾಬಿ’ ಚಿತ್ರೀಕರಣದ ವೇಳೆ ನಟಿ ನಿಖೀತಾ ನಾರಾಯಣ್ ಹಣೆಗೆ ಏಟು ಬಿದ್ದಿದ್ದು, ಚಿತ್ರೀಕರಣವನ್ನು ಮುಂದೂಡಲಾಗಿದೆ. ತಿಂಗಳ ಹಿಂದೆಯಷ್ಟೇ “ಕಪ್ಪು ಗುಲಾಬಿ’ ಎಂಬ ಚಿತ್ರ ಸೆಟ್ಟೇರಿತ್ತು. ಸುನೀಲ್ ಪುರಾಣಿಕ್ ನಿರ್ದೇಶನದ ಈ ಚಿತ್ರದಲ್ಲಿ ಅವರ ಪುತ್ರ ಸಾಗರ್ ಪುರಾಣಿಕ್ ನಾಯಕ.
ಮಹಿಳಾ ಪ್ರಧಾನವಾದ ಈ ಚಿತ್ರದಲ್ಲಿ ನಿಖೀತಾ ನಾರಾಯಣ್ ನಾಯಕಿಯಾಗಿದ್ದರು. ಇತ್ತೀಚೆಗೆ ಚಿತ್ರದ ಚೇಸಿಂಗ್ ದೃಶ್ಯದ ಚಿತ್ರೀಕರಣದ ವೇಳೆ ಮರದ ತುಂಡೊಂದು ನಾಯಕಿಯ ಹಣೆಗೆ ತಾಗಿ ಗಾಯವಾಗಿದ್ದು, ವೈದ್ಯರು ಒಂದು ತಿಂಗಳ ವಿಶ್ರಾಂತಿ ಸೂಚಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು: ದೇವಸ್ಥಾನವೊಂದರಲ್ಲಿ ನಾಯಕ-ನಾಯಕಿ ವಿವಾಹವಾಗುವ ಸನ್ನಿವೇಶವದು.ಆ ವೇಳೆ ರೌಡಿಗಳು ಅಟ್ಯಾಕ್ ಮಾಡುವಾಗ ನಾಯಕ, ನಾಯಕಿಯ ಕೈ ಹಿಡಿದು ಓಡುತ್ತಾ, ರೌಡಿಗಳ ಜೊತೆಯೂ ಕಾದಾಡುವ ಸನ್ನಿವೇಶ. ಈ ವೇಳೆ ನಾಯಕನ ಕೈಯಿಂದ ಜಾರಿದ ಮರದ ತುಂಡೊಂದು ಹಿಂದೆ ಬರುತ್ತಿದ್ದ ನಾಯಕಿಯ ಹಣೆಗೆ ಬಡಿದಿದೆ. ಇದರಿಂದ ಹಣೆಗೆ ಗಾಯವಾಗಿದೆ.
ಈ ಬಗ್ಗೆ ಮಾತನಾಡಿದ ನಿರ್ದೇಶಕ ಸುನೀಲ್ ಪುರಾಣಿಕ್, “ನಾಯಕ -ನಾಯಕಿ ರೈಲ್ವೇ ಗೇಟ್ ತರಹದ ಗೇಟ್ವೊಂದನ್ನು ದಾಟುವಾಗ ಅದರಲ್ಲಿದ್ದ ಮರದ ತುಂಡೊಂದು ರಭಸವಾಗಿ ಬಂತು. ನಾಯಕ ಅದನ್ನು ತಡೆದರೂ ಅದು ನಾಯಕಿಯ ಹಣೆಗೆ ತಾಗಿ ಏಟಾಗಿದೆ. ನಾಯಕ ಸಾಗರ್ ಕೈ ಕೂಡಾ ಫ್ರಾಕ್ಚರ್ ಆಗಿದೆ. ಸದ್ಯ ಶೂಟಿಂಗ್ ಅನ್ನು ನಿಲ್ಲಿಸಿದ್ದೇವೆ’ ಎನ್ನುತ್ತಾರೆ.