ಪಡ್ಡೆಹುಲಿಗೆ ಅದ್ಧೂರಿ ಮುಹೂರ್ತ
Team Udayavani, Mar 12, 2018, 11:18 AM IST
ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ನಾಯಕರಾಗಿ ಲಾಂಚ್ ಆಗುತ್ತಿರುವ “ಪಡ್ಡೆಹುಲಿ’ ಚಿತ್ರದ ಮುಹೂರ್ತ ಭಾನುವಾರ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ದೀಪ ಬೆಳಗಿಸಿ, ಮುಹೂರ್ತಕ್ಕೆ ಚಾಲನೆ ನೀಡಿದರು.
ಚಿತ್ರದ ಮೊದಲ ದೃಶ್ಯಕ್ಕೆ ನಟ ಸುದೀಪ್ ಕ್ಲಾಪ್ ಮಾಡಿದರೆ, ಪುನೀತ್ರಾಜಕುಮಾರ್ ಕ್ಯಾಮರಾ ಚಾಲನೆ ಮಾಡಿದರು. ಮುಹೂರ್ತ ಸಮಾರಂಭದಲ್ಲಿ ಕೀರ್ತಿ ವಿಷ್ಣುವರ್ಧನ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಭಾಗವಹಿಸಿ ನವನಟ ಶ್ರೇಯಸ್ಗೆ ಶುಭಕೋರಿದರು. ಅಂದಹಾಗೆ, “ಪಡ್ಡೆಹುಲಿ’ ಚಿತ್ರ ತಮಿಳು ಸಿನಿಮಾವೊಂದರ ಸ್ಫೂರ್ತಿ ಎಂಬ ಮಾತು ಗಾಂಧಿನಗರದಲ್ಲಿ ಓಡಾಡುತ್ತಿತ್ತು.
ಆದರೆ, ಇದನ್ನು ನಿರಾಕರಿಸಿರುವ ಚಿತ್ರತಂಡ, “ಪಡ್ಡೆಹುಲಿ’ ಪಕ್ಕಾ ಸ್ವಮೇಕ್ ಸಿನಿಮಾ, ಯಾವುದೇ ಸಿನಿಮಾದಿಂದ ಸ್ಫೂರ್ತಿ ಪಡೆದಿದ್ದಲ್ಲ ಎಂದಿದೆ. ನಿರ್ಮಾಪಕ ಕೆ.ಮಂಜು ಅವರು ಕೊಟ್ಟ ಒನ್ಲೈನ್ ಇಟ್ಟುಕೊಂಡು ನಿರ್ದೇಶಕರು ಕಥೆ ಮಾಡಿದ್ದಾರೆ ಎಂದಿದೆ ಚಿತ್ರತಂಡ. ಈ ಚಿತ್ರವನ್ನು ಎಂ.ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ.