ಮುರಳಿ ಜೊತೆ ಹ್ಯಾಟ್ರಿಕ್ ನಿರೀಕ್ಷೆಯತ್ತ “ಭರ್ಜರಿ’ ಚೇತನ್
Team Udayavani, Mar 19, 2018, 2:18 PM IST
“ಮಫ್ತಿ’ ಚಿತ್ರದ ಯಶಸ್ಸಿನ ನಂತರ ನಟ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಮುಂದಿನ ಚಿತ್ರ ಯಾವುದು, ಯಾರೂ ಆ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ಗೊಂದಲಗಳಿಗೆ ಈಗ ತೆರೆ ಬಿದ್ದಿದ್ದೂ, “ಭರ್ಜರಿ’ ಚೇತನ್ ನಿರ್ದೇಶನದ ಹೊಸ ಚಿತ್ರದಲ್ಲಿ ಶ್ರೀಮುರುಳಿ ನಟಿಸುತ್ತಿದ್ದು, ಈಗ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಆದರೆ ಚಿತ್ರದ ಹೆಸರೂ ಇನ್ನೂ ಅಂತಿಮವಾಗಿಲ್ಲ.
ಇನ್ನು ಮುರಳಿ ತಮ್ಮ ಗೆಳೆಯರೊಟ್ಟಿಗೆ ಸೇರಿಕೊಂಡು “ಅಗಸ್ತ್ಯ ಎಂಟರ್ಪ್ರೈಸಸ್ ಟೀಂ’ ಎನ್ನುವ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಮಗನ ಹೆಸರನ್ನೇ ಬ್ಯಾನರ್ಗೆ ಇಟ್ಟಿದ್ದಾರೆ. ಅಲ್ಲದೇ ನಿರ್ದೇಶಕ ಚೇತನ್ ಈಗಾಗಲೇ ಬಹದ್ದೂರ್ ಮತ್ತು ಭರ್ಜರಿ ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದು, ಮುರುಳಿ ಜೊತೆಗಿನ ಸಿನಿಮಾ ಯಶಸ್ವಿ ಆದಲ್ಲಿ ಹ್ಯಾಟ್ರಿಕ್ ನಿರ್ದೇಶಕರ ಸಾಲಿಗೆ ಚೇತನ್ ಸೇರ್ಪಡೆಯಾಗುತ್ತಾರೆ.
ವರ್ಷಕ್ಕೆ ಎರಡು ಸಿನಿಮಾ ಮಾಡುವ ಆಲೋಚನೆ ಮುರುಳಿಯವರಿಗಿದ್ದು, ಚೇತನ್ ಸಿನಿಮಾ ಮುಗಿಸಿಕೊಂಡು ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ. “ಬಂಗಾರ ಸನ್ಆಫ್ ಬಂಗಾರದ ಮನುಷ್ಯ’ ಸಿನಿಮಾ ಮಾಡಿದ್ದ ಯೋಗಿ ಜಿ ರಾಜ್ ಅವರ ಜೊತೆಯೂ ಮುರುಳಿ ಸಿನಿಮಾ ಮಾಡುವ ಸಾಧ್ಯತೆ ಇದೆ.