ಅವಕಾಶಕ್ಕಾಗಿ ನಟಿಯರ ಲೈಂಗಿಕ ಬಳಕೆ
Team Udayavani, Mar 26, 2018, 2:12 PM IST
ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ ಅನೇಕರು ತಮ್ಮ ಹೇಳಿಕೆಗಳನ್ನು ನೀಡುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದೆ ಕಾಸ್ಟಿಂಗ್ ಕೌಚ್ (ಲೈಂಗಿಕ ತೃಷೆಗೆ ಬಳಸಿಕೊಳ್ಳಲು ಯತ್ನಿಸುವುದು) ಕುರಿತು ಶ್ರುತಿ ಹರಿಹರನ್ ಮಾತನಾಡಿದ್ದರು. ಆ ನಂತರ ಅವರ ವಿರುದ್ಧ ಚಿತ್ರರಂಗದ ವಲಯದಲ್ಲಿ ಸಾಕಷ್ಟು ಟೀಕೆ-ಟಿಪ್ಪಣಿಗಳು ಬಂದಿದ್ದವು. ಈಗ ನಟ ಮಂಡ್ಯ ರಮೇಶ್ ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. “ಚಿತ್ರರಂಗದಲ್ಲಿ ನಟಿಯರಿಗೆ ಉತ್ತಮ ಅವಕಾಶ ಸಿಗಬೇಕಾದೆರ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ ಎಂಬ ಸುದ್ದಿ ಇದೆ. ನಾನು ಇದನ್ನು ಸಂಪೂರ್ಣವಾಗಿ ಅಲ್ಲಗಳೆಯುವುದಿಲ್ಲ’ ಎನ್ನುವ ಮೂಲಕ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ಅವಕಾಶಕ್ಕಾಗಿ ಮಹಿಳಾ ಕಲಾವಿದರ ದುರ್ಬಳಕೆಯಾಗುತ್ತಿದೆ ಎಂಬುದನ್ನು ನಾನು ಇಲ್ಲ ಎಂದು ಹೇಳುವುದಿಲ್ಲ. ಹಿಂದೆಯೂ ಇತ್ತು. ಈಗಲೂ ಇದೆ. ಚಿತ್ರರಂಗದಲ್ಲಿ ಅವಕಾಶ ಕಲ್ಪಿಸಲು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಇದನ್ನು ಮೆಟ್ಟಿ ನಿಂತಾಗ ಉತ್ತಮ ಕಲಾವಿದರು ಹೊರ ಬರುತ್ತಾರೆ. ಯುವ ಕಲಾವಿದರು ಇದನ್ನು ಮೀರಿ ಬೆಳೆಯಬೇಕು. ಇಂತಹ ವಾತಾವರಣ ಇರುವುದಕ್ಕೆ ನನಗೆ ನೋವಿದೆ’ ಎಂದಿದ್ದಾರೆ.
ನನ್ನ ಮೇಲಿನ ಆರೋಪ ಅಚ್ಚರಿ ತಂದಿತು: ಮಂಡ್ಯ ರಮೇಶ್ ವಿರುದ್ಧವೂ ಈ ಹಿಂದೊಮ್ಮೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾತನಾಡಿದ ಅವರು, “ಈ ಹಿಂದೆ ಲೈಂಗಿಕ ಕಿರುಕುಳದ ಆರೋಪ ನನ್ನ ಮೇಲೂ ಬಂದಿತ್ತು. ಅದರ ಹಿಂದೆ ಯಾರ ಕೈವಾಡವಿತ್ತು ಎಂಬುದು ನನಗೆ ಗೊತ್ತಿಲ್ಲ. ಆಗ ನನ್ನ ಮನಸ್ಸಿಗೆ ಬಹಳ ನೋವಾಗಿತ್ತು. ನನ್ನ ಮೇಲೆ ಆರೋಪ ಮಾಡಿದವರನ್ನು ನಾನು ಈಗಲೂ ನೋಡಿಲ್ಲ. ಸೂಕ್ತ ದಾಖಲೆ ಸಮೇತ ಆರೋಪ ಸಾಬೀತುಪಡಿಸಿ ಎಂದು ನಾನು ಹೇಳಿದ್ದೆ. ಆ ಮೇಲೆ ಅವರು ಸುಮ್ಮನಾದರು. ಈ ಆರೋಪ ನನ್ನ ಮೇಲೆ ಏಕೆ, ಹೇಗೆ ಬಂತು ಎಂಬುದು ಈಗಲೂ ನನಗೆ ಅಚ್ಚರಿ ತಂದಿದೆ’ ಇದೆ ಎಂದರು.