“ಉದಯವಾಣಿ’ ಮತ್ತು ಮಂಡಳಿ ಒಂದು ಕುಟುಂಬದಂತೆ
Team Udayavani, Jul 4, 2018, 11:50 AM IST
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು “ಉದಯವಾಣಿ’ ಪತ್ರಿಕೆ ಮಂಗಳವಾರ ಅಭಿನಂದಿಸಿತು. ಪತ್ರಿಕೆಯ ಬೆಂಗಳೂರು ಆವೃತ್ತಿಯ ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಅನಂತಕೃಷ್ಣ ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಉಪಾಧ್ಯಕ್ಷರಾದ ಕೆ. ಮಂಜು, ಶಿಲ್ಪಾ ಶ್ರೀನಿವಾಸ್, ಕಾರ್ಯದರ್ಶಿ ಭಾ.ಮ.ಹರೀಶ್, ಖಜಾಂಚಿ ಕೆ.ಎಂ.ವೀರೇಶ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಮಂಡಳಿ ಎಸ್.ಎ.ಚಿನ್ನೇಗೌಡ, “ಉದಯವಾಣಿ’ ಪತ್ರಿಕೆಯು ಕನ್ನಡ ಚಿತ್ರರಂಗಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಯಾವತ್ತೂ ಮರೆಯುವಂತಿಲ್ಲ. ಸಿನಿಮಾಗಳ, ಹೊಸ ಪ್ರತಿಭೆಗಳ ಬೆನ್ನುತಟ್ಟುತ್ತಿದೆ. ಪತ್ರಿಕೆ ಹಾಗೂ ಮಂಡಳಿ ನಡುವೆ ಅವಿನಾಭಾವ ಸಂಬಂಧವಿದೆ. ಅನೇಕ ವರ್ಷಗಳಿಂದ ಮಂಡಳಿ ಹಾಗೂ ಪತ್ರಿಕೆ ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ.
ಮಂಡಳಿಯ ನಿರ್ಧಾರವನ್ನು ಪತ್ರಿಕೆ ಬೆಂಬಲಿಸುತ್ತಾ, ಜನರಿಗೆ ತಲುಪಿಸಿದೆ. ಮುಂದೆಯೂ ಅದು ಮುಂದುವರಿಯುತ್ತದೆ ಎಂಬ ವಿಶ್ವಾಸ ನನಗಿದೆ. ಕುಟುಂಬ ಎಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಗೊಂದಲಗಳು ಸಹಜ. ಅವೆಲ್ಲವನ್ನು ಸೌಹಾರ್ದಯುತವಾಗಿ ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಮುಂದುವರಿಯೋಣ’ ಎಂದರು.
ಉಪಾಧ್ಯಕ್ಷರಾದ ಕೆ.ಮಂಜು ಮಾತನಾಡಿ, ಪತ್ರಿಕೆ ಅಂದಿನಿಂದ ಇಂದಿನವರೆಗೆ ಚಿತ್ರರಂಗಕ್ಕೆ ಬೆಂಬಲವಾಗಿದೆ. ಇವತ್ತು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು ಕಷ್ಟದಲ್ಲಿದ್ದಾರೆ, ಸಿನಿಮಾಗಳು ಗೆಲ್ಲುತ್ತಿಲ್ಲ. ಹೀಗಿರುವಾಗ ಪತ್ರಿಕೆ ನಿರ್ಮಾಪಕರಿಗೆ, ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿ ಚಿತ್ರರಂಗವನ್ನು ಬೆಳೆಸಬೇಕು ಎಂದರು. ಕಾರ್ಯದರ್ಶಿ ಭಾ.ಮ. ಹರೀಶ್, ಖಜಾಂಚಿ ಕೆ.ಎಂ.ವೀರೇಶ್ ಕೂಡಾ ಪತ್ರಿಕೆ ಹಾಗೂ ಮಂಡಳಿಯ ಸಂಬಂಧದ ಬಗ್ಗೆ ಮಾತನಾಡಿದರು.