ಹೊಸಬರ ಸೇಡಿನ ಕಥೆ
Team Udayavani, Sep 9, 2018, 11:18 AM IST
ಹೊಸಬರು ಟೈಟಲ್ನಲ್ಲೇ ಮೋಡಿ ಮಾಡಲು, ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅದರ ಪರಿಣಾಮವಾಗಿ ವಿಭಿನ್ನ ಟೈಟಲ್ಗಳಿರುವ ಚಿತ್ರಗಳು ಬರುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ “ಸೇಡ್’. ಇದು ಸಂಪೂರ್ಣ ಹೊಸಬರ ಚಿತ್ರ. ಶೀರ್ಷಿಕೆ ಕೇಳಿದ ನಂತರ ದ್ವೇಷದ ಸುತ್ತ ಸುತ್ತುವ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಚಿತ್ರವನ್ನು ಜಿ.ಎಸ್.ಮಹೇಶ್ ನಿರ್ದೇಶಿಸುತ್ತಿದ್ದಾರೆ.
ಇವರಿಗಿದು ಚೊಚ್ಚಲ ಚಿತ್ರ. ಒಬ್ಬ ವ್ಯಕ್ತಿ ಮತ್ತೂಬ್ಬ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೋದಾಗ ಅದು ಯಾರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರಿಂದ ಏನೇನು ತೊಂದರೆಗಳಾಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಜೊತೆಗೆ ಈ ಚಿತ್ರದಲ್ಲಿ ಅತಿ ಆಸೆ ಮುಂದೆ ಅವಘಡಗಳನ್ನು ತಂದೊಡುತ್ತವೆ ಎಂಬ ಸಂದೇಶವನನು ಹೇಳಿದ್ದಾರಂತೆ.
ಕಾಲೇಜು ಹುಡುಗರ ಸುತ್ತ ನಡೆಯುವ ಕಥೆ ಇದಾಗಿದ್ದು, ಚಿತ್ರದಲ್ಲಿ ವಿಜಯ್ ಕಾರ್ತಿಕ್, ಯುವರಾಜ್, ಶ್ರೀನಿಧಿ, ಹರೀಶ್, ಯತೀಶ್ ನಟಿಸಿದ್ದಾರೆ. ಸುಲಕ್ಷಾ ಈ ಚಿತ್ರದ ನಾಯಕಿ. ಎಲ್.ಎನ್.ಶಾಸ್ತ್ರಿ ಸಂಗೀತ ನೀಡಿರುವ ಕೊನೆಯ ಚಿತ್ರವಾಗಿದ್ದು, ಅವರ ಪತ್ನಿ ಸುಮಾ ಶಾಸ್ತ್ರಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮಂಡ್ಯ, ಮಂಗಳೂರು, ಕೊಪ್ಪ, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ರಿಪಿನ್ ಕುಮಾರ್ಗುಪ್ತ ಈ ಚಿತ್ರದ ನಿರ್ಮಾಪಕರು.