ಯಜಮಾನ ಸೆಟ್ನಲ್ಲಿ ವಿಜಯಲಕ್ಷ್ಮೀ ದರ್ಶನ
Team Udayavani, Sep 9, 2018, 11:18 AM IST
ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ನಡುವೆ ಮನಸ್ತಾಪವಿದೆ, ಇಬ್ಬರು ದೂರ ದೂರ ಇದ್ದಾರೆ, ಯಾವುದೇ ಮಾತುಕತೆಯಿಲ್ಲ ಎಂಬಂತಹ ಸುದ್ದಿಗಳು ಗಾಂಧಿನಗರದಲ್ಲಿ ಜೋರಾಗಿ ಓಡಾಡುತ್ತಿದ್ದವು. ಅದಕ್ಕೆ ಸರಿಯಾಗಿ ದರ್ಶನ್ ದಂಪತಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಒಟ್ಟಾಗಿ ಇಬ್ಬರೂ ಕಾಣಿಸಿಕೊಂಡಿರಲಿಲ್ಲ. ಇದು ಆ ಸುದ್ದಿಯ ರೆಕ್ಕೆಪುಕ್ಕಗಳನ್ನು ಮತ್ತಷ್ಟು ಬಲಪಡಿಸಿತು. ಈಗ ಹೊಸ ಸುದ್ದಿಯೊಂದು ಬಂದಿದೆ.
ಅದು ದರ್ಶನ್ ಹಾಗೂ ವಿಜಯಲಕ್ಷ್ಮೀ ಮತ್ತೆ ಒಂದಾಗಿ, ಖುಷಿ ಖುಷಿಯಾಗಿರೋದು. ಅದಕ್ಕೆ ಸಾಕ್ಷಿಯಾಗಿ ಶನಿವಾರ ನಡೆದ “ಯಜಮಾನ’ ಚಿತ್ರದ ಸೆಟ್ಗೆ ವಿಜಯಲಕ್ಷ್ಮೀ ಭೇಟಿ ನೀಡಿದ್ದಾರೆ. ಒಂದಷ್ಟು ಸಮಯ ದರ್ಶನ್ ಜೊತೆ ಸೆಟ್ನಲ್ಲಿ ಕಳೆದ ವಿಜಯಲಕ್ಷ್ಮೀಯವರ ಫೋಟೋಗಳು ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮೀ ಇಬ್ಬರು ಮನಸ್ತಾಪ ಮರೆತು ಒಂದಾಗಿ ಹಲವು ದಿನಗಳೇ ಆಗಿತ್ತು ಎಂಬ ಮಾತೂ ಇದೆ.
ಈಗ ಸಾರ್ವಜನಿಕವಾಗಿ ಇಬ್ಬರು ಒಟ್ಟಾಗಿ ಕಾಣಿಸಿಕೊಂಡು ಅನೇಕರ ಅನುಮಾನಗಳಿಗೆ ಫುಲ್ಸ್ಟಾಪ್ ಇಟ್ಟಿದ್ದಾರೆ. ಸದ್ಯ ದರ್ಶನ್ ಅವರ “ಯಜಮಾನ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಮುಂದಿನ ವಾರದಿಂದ “ಒಡೆಯ’ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಲಿದೆ. ಈ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶಿಸುತ್ತಿದ್ದು, ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ.