ಶಾಂತಿಸಾಗರ ಮಹಾರಾಜರ ಜೀವನ ಚಿತ್ರ
Team Udayavani, Sep 11, 2018, 11:28 AM IST
ಹಲವು ಮಹನೀಯರ ಜೀವನ ಚರಿತ್ರೆ ಕುರಿತು ಸಾಕಷ್ಟು ಚಿತ್ರಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಸ್ವಸ್ತಿ’ ಎಂಬ ಹೊಸ ಚಿತ್ರವೊಂದು ಸದ್ದಿಲ್ಲದೆಯೇ ಶುರುವಾಗಿ, ಇದೀಗ ಚಿತ್ರೀಕರಣನ್ನು ಪೂರೈಸಿದೆ. ಈ ಚಿತ್ರಕ್ಕೆ ರಾಜು ಪಾಟೀಲ್ ನಿರ್ದೇಶಕರು. ನಿರ್ಮಾಣ ಕೂಡ ಅವರದೇ. ಇದು ಇಪ್ಪತ್ತನೇ ಶತಮಾನದ ಕಥೆ. ಜೈನ ಧರ್ಮದ ಪ್ರಥಮ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಜೀವನ ಆಧಾರಿತ ಚಿತ್ರ. ರಾಜು ಪಾಟೀಲ್ ಈ ಹಿಂದೆ “ಸುನಾಮಿ’ ಎಂಬ ಚಿತ್ರ ನಿರ್ಮಿಸಿ, ನಟಿಸಿದ್ದರು.
“ಸ್ವಸ್ತಿ’ ಕನ್ನಡ, ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿರುವುದು ವಿಶೇಷ. ಶ್ರೀ ಶಾಂತಿಸಾಗರ ಮಹಾರಾಜರ ಜೀವಿತಾವಧಿಯ 1872-1955 ರ ಮಧ್ಯದಲ್ಲಿ ನಡೆಯುವ ಕಥೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಭೋಜ್ ಗ್ರಾಮದ ಸಾತಗೌಡ ಪಾಟೀಲರು ಸಂಸಾರ ತ್ಯಾಗ ಮಾಡಿ ಮುನಿ ದೀಕ್ಷೆ ಪಡೆದು ಆಚಾರ್ಯ ಶಾಂತಿಸಾಗರರಾಗುತ್ತಾರೆ. ಆಮೇಲೆ ಏನೆಲ್ಲಾ ಆಗುತ್ತೆ ಎಂಬುದು ಕಥಾಹಂದರ. ಈ ಚಿತ್ರದಲ್ಲಿ ಶಾಂತಿಸಾಗರ ಮಹಾರಾಜರ ಪಾತ್ರವನ್ನು ನಿರ್ದೇಶಕ ರಾಜು ಪಾಟೀಲ್ ನಿರ್ವಹಿಸುತ್ತಿದ್ದಾರೆ.
ಉಳಿದಂತೆ ದತ್ತಣ್ಣ, ಬಿರಾದರ್, ಡಿಂಗ್ರಿ ನಾಗರಾಜ್, ಜಯಣ್ಣ, ಶಂಕರ್ ಪಾಟೀಲ್, ಶೃಂಗೇರಿ ರಾಮಣ್ಣ , ಕೆ.ಎಲ್.ಕುಂದರಗಿ, ವಿದ್ಯಾ, ಮಾಧುರಿ ಹಾಗು ಶೃತಿ ಇತರರು ನಟಿಸುತ್ತಿದ್ದಾರೆ. ಬೆಂಗಳೂರು, ತುಮಕೂರು, ಶ್ರವಣಬೆಳಗೊಳ, ಹುಕ್ಕೇರಿ, ಎಲಿಮುನೊಳ್ಳಿ, ಹಳಿಂಗಳಿಯ ಭದ್ರಗಿರಿ, ಬಾಹುಬಲಿ ಮತ್ತು ಕುಂತುಗಿರಿಯಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಕುಮಾರ್ ಈಶ್ವರ್ ಸಂಗೀತ ನೀಡಿದ್ದಾರೆ. ಪಿ.ಎಸ್. ಧರಣೇಂದ್ರಕುಮಾರ್, ಪ್ರಸನ್ನ ಜೈನ್ ಗೀತೆ ರಚಿಸಿದ್ದಾರೆ.