ಅನಿರುದ್ಧ ಕಿರುಚಿತ್ರೋತ್ಸವ
Team Udayavani, Sep 21, 2018, 9:39 AM IST
ಡಾ.ವಿಷ್ಣುವರ್ಧನ್ ಅವರ 68 ನೇ ಹುಟ್ಟುಹಬ್ಬದ ಅಂಗವಾಗಿ ಕೀರ್ತಿ ಇನ್ನೋವೇಷನ್ಸ್ ವತಿಯಿಂದ ಕಿರುಚಿತ್ರೋತ್ಸವ ನಡೆಯಿತು. ನಟ ಅನಿರುದ್ಧ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಆರು ಕಿರುಚಿತ್ರಗಳು ಪ್ರದರ್ಶನವಾಗಿದ್ದು ವಿಶೇಷ.
ಸಾಮಾಜಿಕ ಕಳಕಳಿ ಇರುವಂತಹ ಸಂದೇಶ ಸಾರುವ ಕಥಾ ಹಂದರವುಳ್ಳ ಕಿರುಚಿತ್ರಗಳು. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಈ ಕಿರುಚಿತ್ರಗಳು ತಯಾರಾಗಿ, ಪ್ರದರ್ಶನ ಕಂಡವು. ಹಾರರ್, ಥ್ರಿಲ್ಲರ್ ಮತ್ತು ಕಾಮಿಡಿ ಜಾನರ್ನ ಕಿರುಚಿತ್ರಗಳಿಗೆ ಪ್ರಶಂಸೆ ಸಿಕ್ಕಿತು. ಅಂದಹಾಗೆ, ಕಿರುಚಿತ್ರೋತ್ಸವದಲ್ಲಿ 5.30 ನಿಮಿಷ ಅವಧಿಯ ಹಾರರ್ ಅಂಶಗಳಿರುವ “ಕ್ಯಾಂಡಲ್ ಲೈಟ್’, 1.52 ನಿಮಿಷದ ಹಾಸ್ಯ ಅಂಶಗಳನ್ನೊಳಗೊಂಡ “ಉಳಿಸಿ’,” 1 ನಿಮಿಷ ಅವಧಿಯ ಕ್ರೈಮ್ ಹಿನ್ನೆಲೆಯಲ್ಲಿ ಸಾಗುವ “ಶಾಂತಂ ಪಾಪಂ’, 3.13 ನಿಮಿಷದ ಥ್ರಿಲ್ಲರ್ ಇರುವ “ಧೂಮ’ ಮತ್ತು 3.23 ನಿಮಿಷದ “ನೀರು’ ಹಾಗು ರಾಜಕೀಯ ವಿಡಂಬನೆ ಇರುವ 3.15 ನಿಮಿಷದ “ವೈಷ್ಣವ ಜನತೋ’ ಕಿರುಚಿತ್ರಗಳು ಪ್ರದರ್ಶನಗೊಂಡವು.
ಕಳೆದ 2014 ರಲ್ಲಿ ವಿಭಾ ಚಾರಿಟಬಲ್ ಟ್ರಸ್ಟ್ ನಡೆಸಿದ ಚಿತ್ರ ನಿರ್ಮಾಣ ಶಿಬಿರದಲ್ಲಿ ಪಾಲ್ಗೊಂಡಿದ್ದ ಸಂಪನ್ಮೂಲ ವ್ಯಕ್ತಿಗಳು ಮತ್ತು ವಿದ್ಯಾರ್ಥಿಗಳು ಈ ಚಿತ್ರತಂಡದಲ್ಲಿ ಕೆಲಸ ಮಾಡಿದ್ದಾರೆ. ಇದೇ ವೇಳೆ ವಿದ್ಯಾರ್ಥಿಗಳೇ ಸೇರಿ ಮಾಡಿದ “ಶ್ರವ್ಯ ಸುಳಿ’ ಎಂಬ ಕಿರುಚಿತ್ರವನ್ನೂ ಪ್ರದರ್ಶಿಸಲಾಯಿತು. ಈ ಕಿರುಚಿತ್ರೋತ್ಸವದಲ್ಲಿ ವಿಭಾ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿ ಹಾಗು ಕೀರ್ತಿ ಇನ್ನೋವೇಷನ್ಸ್ನ ಮಾರ್ಗದರ್ಶಕರಾದ ಡಾ.ಭಾರತಿ ವಿಷ್ಣುವರ್ಧನ್ ಇತರರು ಹಾಜರಿದ್ದರು.