ಸೆಂಟಿಮೆಂಟ್ ಲಕ್ಷ್ಮೀ ತನಯ
Team Udayavani, Oct 1, 2018, 11:46 AM IST
ಸೂರಜ್ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ “ಸ್ನೇಹವೇ ಪ್ರೀತಿ’ ಚಿತ್ರದ ಬಗ್ಗೆ ಸುದ್ದಿಯಾಗಿದ್ದ ಅವರೀಗ “ಲಕ್ಷ್ಮೀತನಯ’ ಚಿತ್ರ ಮಾಡುವ ಮೂಲಕ ಬಿಝಿಯಾಗುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ರಮೇಶ್ ವೆಂಕಟೇಶ್ ಬಾಬು ನಿರ್ದೇಶಕರು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ನಿರ್ದೇಶಕರೇ ಬರೆದಿದ್ದಾರೆ.
ಇದು ಅವರಿಗೆ ಕನ್ನಡದ ಮೊದಲ ಚಿತ್ರ. ನಿರ್ದೇಶಕರು ತೆಲುಗು ನಿರ್ದೇಶಕ ಸುಕುಮಾರ್ ಅವರ ಶಿಷ್ಯ. ಆ ಕಾರಣಕ್ಕಾಗಿಯೇ ಸುಕುಮಾರ್ ಅವರು ಚಿತ್ರಕ್ಕೆ ಆಗಮಿಸಿ ಶುಭಹಾರೈಸಿದ್ದಾರೆ. ಸೂರಜ್ಗೌಡ ಈ ಚಿತ್ರದಲ್ಲಿ ಪಕ್ಕದ್ಮನೆ ಹುಡುಗನಂತಿರುವ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಕೊಲ್ಲಾಪುರದ ಬೆಡಗಿ ಹೇಮಲ್ ದೆವೇಂದ್ರಇಂಗಲ್ ನಾಯಕಿಯಾಗಿದ್ದಾರೆ.
ಇದೊಂದು ತಾಯಿ ಮತ್ತು ಮಗನ ವಾತ್ಸಲ್ಯ ಹಾಗೂ ಭಾವನೆಗಳು ತುಂಬಿದ ಕಥೆ ಹೊಂದಿದೆ. ಚಿತ್ರದಲ್ಲಿ ಸೂರಜ್ಗೌಡ ಅವರ ತಾಯಿಯಾಗಿ ಸಿತಾರ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಸಾಧುಕೋಕಿಲ, ಚಿಕ್ಕಣ್ಣ, ಶಿವು.ಕೆ.ಆರ್.ಪೇಟೆ, ಧರ್ಮಣ್ಣ ಇತರರು ನಟಿಸುತ್ತಿದ್ದಾರೆ. ಬಹುತೇಕ ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಚಿತ್ರಕ್ಕೆ ಡಾ.ವಿಜಯಕುಮಾರ್ ನಿರ್ಮಾಪಕರು. ರಾಘವೇಂದ್ರ ಸಂಗೀತ ನೀಡಿದರೆ, ವಿಜಯ್ ಎಂ.ಕುಮಾರ್ ಅವರ ಸಂಕಲನವಿದೆ. ರಾಘವೇಂದ್ರ ಬಿ. ಕೋಲಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಜಯ್ ಅವರ ಸಾಹಸವಿದೆ. ಶೇಖರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಬಹುತೇಕ ಹೊಸತಂಡ ಸೇರಿಕೊಂಡು “ಲಕ್ಷ್ಮೀ ತನಯ’ ಚಿತ್ರ ಮಾಡಲು ಮುಂದಾಗಿದೆ.