ಜನಪ್ರಿಯ ಶೀರ್ಷಿಕೆಗಳ ಗೌರವ ಉಳಿಸಿ
Team Udayavani, Oct 19, 2018, 12:05 PM IST
ಕನ್ನಡದಲ್ಲಿ ಇತ್ತೀಚೆಗೆ ಜನಪ್ರಿಯ ಸಿನಿಮಾಗಳ ಶೀರ್ಷಿಕೆಯನ್ನು ಮರು ಬಳಕೆ ಮಾಡುವುದು ಒಂದು ಟ್ರೆಂಡ್ ಆಗುತ್ತಿದೆ. ಈಗಾಗಲೇ “ಚಕ್ರವ್ಯೂಹ’, “ಸಂಯುಕ್ತ’, ಹೀಗೆ ಹಲವು ಸಿನಿಮಾಗಳು ತೆರೆಗೆ ಬಂದು ಒಂದಷ್ಟು ಸುದ್ದಿ ಮಾಡಿರುವಾಗಲೇ, 1997ರಲ್ಲಿ ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದ “ಅಮೃತವರ್ಷಿಣಿ’ ಅದೇ ಶೀರ್ಷಿಕೆಯಲ್ಲಿ ಮತ್ತೆ ತೆರೆಮೇಲೆ ಬರಲಿದೆ. “ಅಮೃತವರ್ಷಿಣಿ’ಯನ್ನು ತೆರೆಗೆ ತಂದಿದ್ದ ನಿರ್ದೇಶಕ ದಿನೇಶ್ ಬಾಬು ಅವರ ಶಿಷ್ಯ ಶಿವಪ್ರಭು ಅದೇ ಹೆಸರಿನಲ್ಲಿ ಚಿತ್ರವನ್ನು ಮಾಡುತ್ತಿದ್ದಾರೆ.
ಈ ಶೀರ್ಷಿಕೆಗೆ ದಿನೇಶ್ ಬಾಬು ತಗಾದೆ ತೆಗೆದಿದ್ದರು ಎಂಬ ಸುದ್ದಿ ಗಾಂಧಿನಗರದಲ್ಲಿ ಕೆಲದಿನಗಳಿಂದ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್ ಬಾಬು, “ಅಮೃತವರ್ಷಿಣಿ’ ಶೀರ್ಷಿಕೆ ಮರುಬಳಕೆಗೆ ನನ್ನ ಅಭ್ಯಂತರವಿಲ್ಲ. ಹತ್ತು ವರ್ಷದ ನಂತರ ಯಾರು, ಯಾವ ಶೀರ್ಷಿಕೆಯನ್ನಾದರೂ ಬಳಸಬಹುದು. ಹೀಗಿರುವಾಗ ಅದನ್ನು ಬೇಡ ಎಂದು ನಾನು ಹೇಗೆ ಹೇಳಲಿ..?
ಅಲ್ಲದೆ ನನ್ನ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದವರೆ ಅದನ್ನು ಬಳಸುತ್ತಿರುವುದಕ್ಕೆ ನನ್ನದೇನೂ ತಕರಾರಿಲ್ಲ. ಅವರಿಗೆ ಒಳ್ಳೆಯದಾಗಲಿ. ಯಾವುದೇ ಸಿನಿಮಾದ ಶೀರ್ಷಿಕೆಯಾದರೂ ಸರಿ, ಅದನ್ನು ಮತ್ತೂಮ್ಮೆ ಬಳಸಿಕೊಳ್ಳುವಾಗ ಅದು ತಮ್ಮ ಕಥೆಗೆ ಸೂಕ್ತವಾಗಿದ್ದರೆ ಮಾತ್ರ ಬಳಸಿಕೊಳ್ಳುವುದು ಒಳಿತು. ಇಲ್ಲದಿದ್ದರೆ ಜನಪ್ರಿಯ ಶೀರ್ಷಿಕೆ ಹಗುರವಾಗುವ ಸಾಧ್ಯತೆ ಇರುತ್ತದೆ’ ಎಂದಿದ್ದಾರೆ.